ವಿಷ ಸೇವಿಸಿದ್ದು ಇಡೀ ಕುಟುಂಬ, ಹೋಗಿದ್ದು ಮಕ್ಕಳಿಬ್ಬರ ಪ್ರಾಣ
ಕುಂದಾಪುರ, ಅಕ್ಟೋಬರ್ 17: ಒಂದೇ ಕುಟುಂಬದ ನಾಲ್ವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕುಂದಾಪುರ ತಾಲೂಕು ಬೈಂದೂರು ಸಮೀಪದ ಗಂಗನಾಡು ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ದಂಪತಿ ಸಮೇತರಾಗಿ ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದಂಪತಿ ಸ್ಥಿತಿ ಗಂಭೀರವಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಕೌಟುಂಬಿಕ ಕಲಹದಿಂದ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.[ಮಗಳು, ತಾಯಿಯ ಪ್ರಾಣ ತೆಗೆಯಿತು ಕೆರೆಯ ಮೀನು!]

ಶಂಕರನಾರಾಯಣ(45) ಹಾಗೂ ಮಹಾಲಕ್ಷ್ಮೀ(39) ದಂಪತಿ ತಮ್ಮ ಮಕ್ಕಳಾದ ಅಶ್ವಿನ್ ಕುಮಾರ್ (16), ಐಶ್ವರ್ಯಾ ಹೆಬ್ಬಾರ್(14) ಅವರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ದಂಪತಿ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಸೆಳೆತಕ್ಕೆ ವಿದ್ಯಾರ್ಥಿ ಸಾವು: ಮೂಡುಬಿದಿರೆಯ ಪುತ್ತಿಗೆ ಗ್ರಾಮದ ಕಂಚಿ ಬೈಲು ಸಮೀಪದ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತಕ್ಕೆ ಭಾನುವಾರ ಈಜಲು ಇಳಿದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಸುರತ್ಕಲ್ ಗೈಡ್ ಲೈನ್ ಟುಟೋರಿಯಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಫಾಜ್ (19) ಮೃತ ಯುವಕ. ಬಜ್ಪೆ ಕಿನ್ನಪದವು ನಿವಾಸಿ ಮುಸ್ತಾಫ್ ಎಂಬುವರ ಪುತ್ರ ಅರ್ಫಾಜ್ ಬಜ್ಪೆಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸ್ನೇಹಿತರಾದ ಅಸ್ಸಾರ್, ಮಹಮ್ಮದ್, ರಮೀಝ್ ಹಾಗೂ ಇನ್ನೊಬ್ಬನ ಜತೆಗೂಡಿ ದ್ವಿಚಕ್ರ ವಾಹನದಲ್ಲಿ ನಾಗುಂಡಿ ಹೊಳೆಯಲ್ಲಿ ಈಜಾಡಲು ಬಂದಿದ್ದ.[ರಸ್ತೆ ವಿಭಜಕಕ್ಕೆ ಡಿಕ್ಕಿ: ಕಾರು ಪಲ್ಟಿ, ಮೂವರು ಸಾವು]
ಹೊಳೆಯಲ್ಲಿರುವ ಕಿರು ಅಣೆಕಟ್ಟಿನ ಬಳಿ ಸ್ವಲ್ಪ ಈಜಾಡಿ ನಂತರ ಎರುಗುಂಡಿ ಜಲಪಾತದ ಆಳದಲ್ಲಿ ಎಷ್ಟು ನೀರಿದೆ ಎಂದು ಪರೀಕ್ಷಿಸಲು ಈತನೊಬ್ಬನೇ ಇಳಿದಾಗ ದುರಂತ ಸಂಭವಿಸಿದೆ. ಜತೆಯಲ್ಲಿದ್ದ ಸ್ನೇಹಿತರು ತಮ್ಮಲ್ಲಿದ್ದ ಬಟ್ಟೆಗಳನ್ನು ಈತನಲ್ಲಿಗೆ ಎಸೆದು ರಕ್ಷಣೆಗೆ ಬಂದರೂ ಬದುಕಿಸಲು ಸಾಧ್ಯವಾಗಲಿಲ್ಲ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.











Click it and Unblock the Notifications