Rain: ಉಡುಪಿಯಲ್ಲಿ ನಿಲ್ಲದ ರಣ ಮಳೆ ಅವಾಂತರ: ಸೋಮೇಶ್ವರದಲ್ಲಿ ಗುಡ್ಡ ಕುಸಿತ
ಉಡುಪಿ, ಜುಲೈ 19: ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಭಾರಿ ಮಳೆ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಬೈಂದೂರಿನ ಪ್ರಸಿದ್ಧ ಪ್ರವಾಸಿ ತಾಣ ಸೋಮೇಶ್ವರದ ಗುಡ್ಡ ಕುಸಿತವಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ತಗ್ಗು ಪ್ರದೇಶಗಳಲ್ಲಿ ನೆರೆಹಾವಳಿ ಮುಂದುವರೆದಿದೆ. ಭಾರಿ ಮಳೆಗೆ ಬೈಂದೂರಿನ ಪ್ರವಾಸಿ ತಾಣವಾಗಿರುವ ಸೋಮೇಶ್ವರ ಬೀಚ್ ಬಳಿಯ ಗುಡ್ಡ ಕುಸಿದು ಸ್ಥಳೀಯರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ ಗ್ರಾಮಕ್ಕೆ ಸೇರಿದ ಸೋಮೇಶ್ವರ ಗುಡ್ಡ ಮಳೆಯ ಪ್ರಭಾವದಿಂದಾಗಿ ದಿನೇ ದಿನೇ ಕುಸಿಯುತ್ತಿದೆ. ಸೋಮೇಶ್ವರ ಗುಡ್ಡದಲ್ಲಿ ಖಾಸಗಿ ವ್ಯಕ್ತಿಯುವವರು ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದು ಗುಡ್ಡ ಕುಸಿತಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಸ್ಥಳೀಯರಿಂದ ಭೂಮಿಯನ್ನು ಖರೀದಿಸಿದ ಖಾಸಗಿ ವ್ಯಕ್ತಿಯವರು ಕಟ್ಟಡಕ್ಕೆ ಸಂಪರ್ಕ ರಸ್ತೆಯನ್ನು ಕೂಡ ನಿರ್ಮಾಣ ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಪ್ರಾರಂಭದಿಂದಲೂ ಕೂಡ ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರು ಕೂಡ ಸ್ಥಳೀಯ ಆಡಳಿತ, ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ದೂರಾಗಿದೆ.

ಸದ್ಯ ಸೋಮೇಶ್ವರ ಬೀಚ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಇದರಿಂದ ದೊಂಬೆ ಪ್ರದೇಶದ 30 ಮನೆಯ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಮಳೆ ಇನ್ನೂ ಮುಂದುವರಿದಲ್ಲಿ ಗುಡ್ಡ ಸಂಪೂರ್ಣ ಕುಸಿದು ಖಾಸಗಿ ಕಟ್ಟಡದ ಜೊತೆ ಒತ್ತಿನೆಣೆಯ ಮೇಲೆ ಇರುವ ಫಾರೆಸ್ಟ್ ಐಬಿ ಗೂ ಕೂಡ ಹಾನಿಯಾಗುವ ಸಾಧ್ಯತೆ ಇದೆ.
ಧಾರಾಕಾರ ಮಳೆಗೆ ಮನೆ ಕುಸಿತ: ತಪ್ಪಿದ ಭಾರೀ ಅನಾಹುತ
ಇನ್ನು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಕಟ್ಟೆಗುಡ್ಡೆಯ ಕುತ್ಪಾಡಿ ಶಾರದಾ ಪೂಜಾರ್ತಿ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಹತ್ತು ನಿಮಿಷದ ಮೊದಲು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸುಮಾರು 30 ವರ್ಷಗಳ ಹಿಂದಿನ ಮನೆಯಾಗಿದ್ದು, ಕುಟುಂಬಸ್ಥರು ಮಣ್ಣಿನ ಗಾರೆ ಮಾಡಿ ಮನೆ ನಿರ್ಮಾಣ ಮಾಡಿದ್ದರು. ಈ ಮನೆಯಲ್ಲಿ ಒಟ್ಟು 10 ಮಂದಿ ವಾಸ ಮಾಡುತ್ತಿದ್ದರು. ಮನೆಯೊಳಗಿದ್ದ ದಾಖಲೆ ಪತ್ರ, ಮಕ್ಕಳ ಪುಸ್ತಕ, ಬಟ್ಟೆ ಬರೆ ಎಲ್ಲವೂ ಮಣ್ಣುಪಾಲಾಗಿದೆ.












Click it and Unblock the Notifications