ಉಡುಪಿಯ ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಆಗಿ ಬದಲಾದ ಹಳೆಯ ಸರ್ಕಾರಿ ಬಸ್!
ಉಡುಪಿ, ಮಾರ್ಚ್ 7: ಸರ್ಕಾರಿ ಬಸ್ ಎಂದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾವನಾತ್ಮಕ ಸಂಬಂಧವಿದೆ. ಕುಗ್ರಾಮದ ರಸ್ತೆಗಳಲ್ಲಿ ಶಾಲೆ ಮತ್ತು ಮನೆಯ ನಡುವಿನ ಕೊಂಡಿ ಈ ಸರ್ಕಾರಿ ಬಸ್ಗಳಾಗಿರುತ್ತವೆ. ಆದರೆ ಉಡುಪಿ ಜಿಲ್ಲೆಯ ಕುಂದಾಪುರದ ಶಾಲೆಯಲ್ಲಿ ಸರ್ಕಾರಿ ಬಸ್ ಈಗ ಮಕ್ಕಳ ತರಗತಿಯೇ ಆಗಿದೆ. ಮಕ್ಕಳ ಸ್ಮಾರ್ಟ್ ಕ್ಲಾಸ್ ಹಳೆಯ ಸರ್ಕಾರಿ ಬಸ್ನಲ್ಲೇ ನಡೆಯಲಿದ್ದು, ಮಕ್ಕಳ ತರಗತಿಗಾಗಿ ಬಸ್ ಅನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.
97 ವರ್ಷ ಇತಿಹಾಸವಿರುವ ಬಗ್ವಾಡಿ ಶಾಲೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಲಯದ ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ಗೆ ಹಳೆಯ ಸರ್ಕಾರಿ ಶಾಲೆಯನ್ನು ಸಜ್ಜುಗೊಳಿಸಲಾಗಿದೆ. 97 ವರ್ಷ ಇತಿಹಾಸವಿರುವ ಬಗ್ವಾಡಿ ಶಾಲೆಯಲ್ಲಿ ಸದ್ಯ 87 ಮಂದಿ ವಿದ್ಯಾರ್ಥಿಗಳಿದ್ದಾರೆ. ಒಂದನೇ ತರಗತಿಯಿಂದ ಏಳನೇ ತರಗತಿ ಶಾಲೆಯಲ್ಲಿದ್ದು, ಕೇವಲ ಐದು ತರಗತಿ (ಕೊಠಡಿ) ಮಾತ್ರ ಶಾಲೆಯಲ್ಲಿವೆ. ಹೆಚ್ಚು ಮಕ್ಕಳು ಅತ್ಯಂತ ಇಕ್ಕಟ್ಟಾದ ತರಗತಿಯಲ್ಲಿ ಕುಳಿತು ಪಾಠ ಆಲಿಸಬೇಕಾಗಿದೆ. ಇದಲ್ಲದೇ ಲ್ಯಾಬ್, ಗ್ರಂಥಾಲಯಕ್ಕೂ ಸ್ಥಳಾವಕಾಶದ ಕೊರತೆ ಇದೆ. ಈ ನಡುವೆ ಸ್ಮಾರ್ಟ್ ಕ್ಲಾಸ್ ರೂಪದಲ್ಲಿ ಈಗ ಹಳೆಯ ಸರ್ಕಾರಿ ಬಸ್ ಈಗ ಶಾಲೆಯ ಮೈದಾನದಲ್ಲಿ ನಿಂತಿರುವುದು ಮಕ್ಕಳಿಗೂ ಖುಷಿ ತಂದಿದೆ.
ಹಿಜಾಬ್; ತೀರ್ಪು ಬರುವವರೆಗೆ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳು
ಹಳೆಯ ಬಸ್ ಅನ್ನು ಶಾಲೆಗೆ ನೀಡುವುದಾಗಿ ಹೇಳಿದ್ದ ಲಕ್ಷ್ಮಣ್ ಸವದಿ
ಈ ಶಾಲೆಗೆ ಹಳೆಯ ಸರಕಾರಿ ಬಸ್ ಸ್ಮಾರ್ಟ್ ಕ್ಲಾಸ್ ರೂಪದಲ್ಲಿ ಬರುವುದಕ್ಕೂ ಒಂದು ಕಾರಣವಿದೆ. ಬಗ್ವಾಡಿ ಶಾಲೆಯ ಹಳೆಯ ವಿದ್ಯಾರ್ಥಿ, ಕಲಾವಿದ ಹೆಮ್ಮಾಡಿಯ ಪ್ರಶಾಂತ್ ಆಚಾರ್, ಕೆಲವು ವರ್ಷಗಳ ಹಿಂದೆ ಸರ್ಕಾರಿ ಬಸ್ ಮಾದರಿಯನ್ನು ನಿರ್ಮಿಸಿ ಆಗಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ್ ಸವದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪ್ರಶಾಂತ್ ಆಚಾರ್ ಕೈ ಚಳಕದಿಂದ ನಿರ್ಮಾಣವಾದ ಬಸ್ ಮಾದರಿ ನಿಜ ಬಸ್ ಅನ್ನೇ ನಾಚಿಸುವಂತಿತ್ತು. ಈ ಸಂದರ್ಭದಲ್ಲಿ ಪ್ರಶಾಂತ್ ತಮ್ಮ ಶಾಲೆಯಲ್ಲಿ ತರಗತಿ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು.
ಈ ವೇಳೆ ಸಚಿವ ಸವದಿ, ಈ ವಿಚಾರವನ್ನು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದರು ಮತ್ತು ತುರ್ತಾಗಿ ಅನುಕೂಲಕ್ಕೆ ಹಳೆಯ ಬಸ್ ಅನ್ನು ಶಾಲೆಗೆ ನೀಡುವುದಾಗಿ ಹೇಳಿದ್ದರು. ಅದರಂತೆಯೇ 2020ರ ಡಿಸೆಂಬರ್ನಲ್ಲಿ ಹಳೆಯ ಸರ್ಕಾರಿ ಬಸ್ ಶಾಲೆಯ ಎದುರಲ್ಲಿ ಬಂದು ನಿಂತಿದೆ. ಈಗ ಆ ಬಸ್ನ್ನು ಅದ್ಭುತವಾಗಿ ವಿನ್ಯಾಸಗೊಳಿಸಿ, ಸ್ಮಾರ್ಟ್ ಕ್ಲಾಸ್ಗಾಗಿ ಸಿದ್ಧಪಡಿಸಲಾಗಿದೆ.
ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ವ್ಯವಸ್ಥೆ
ಈ ಬಸ್ ಸಾಕಷ್ಟು ಉದ್ದವಿದ್ದು, ತರಗತಿಗೆ ಬೇಕಾದ ರೀತಿ ವಿನ್ಯಾಸ ಮಾಡಲಾಗಿದೆ. ಬಸ್ನ ಮೇಲೆ ಸೌರ ಫಲಕವನ್ನು ಅಳವಡಿಸಿ, ಅದರಿಂದಲೇ ಬಸ್ನ ಒಳಭಾಗದಲ್ಲಿ ವಿದ್ಯುತ್, ಪ್ಯಾನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಸ್ನ ನಡುವಿನ ಸೀಟ್ಗಳನ್ನು ತೆಗೆದು 25 ಸೀಟ್ಗಳಲ್ಲಿ ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಬಸ್ ಒಳಗೆ ಪ್ರಾಜೆಕ್ಟರ್ ಪರದೆಯನ್ನು ಹಾಕಿ, ಪಾಠ-ಪ್ರವಚನಕ್ಕೆ ಅವಕಾಶ ನೀಡಲಾಗಿದೆ. ಇದಷ್ಟೇ ಅಲ್ಲದೇ ಬಸ್ನ ಒಂದು ಭಾಗದಲ್ಲಿ ಗ್ರಂಥಾಲಯ ಮಾಡುವ ಯೋಚನೆಯೂ ಶಾಲೆಗಿದೆ.
ಉಡುಪಿ ಹಿಜಾಬ್ ವಿವಾದ: ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿನಿಯರಿಗೆ ಪತ್ರ ಬರೆದ ಪ್ರಾಂಶುಪಾಲ
ಸರಕಾರಿ ಬಸ್ ಈಗ ವಿದ್ಯಾರ್ಜನೆಗೂ ನೆರವಾಗಿದೆ
ಈ ಬಗ್ಗೆ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಜಾ ವಿ. ಶೆಟ್ಟಿ, ಹಳೆಯ ಬಸ್ನ್ನು 2020ರಲ್ಲೇ ಸಚಿವರು ಶಾಲೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಆ ಬಳಿಕ ಕೊರೊನಾ, ಲಾಕ್ಡೌನ್ ಆದ ಕಾರಣ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡುವುದು ವಿಳಂಬವಾಯಿತು. ಆದರೆ ಈಗ ಬಸ್ ಸಂಪೂರ್ಣ ಸಜ್ಜಾಗಿದ್ದು, ಬೆಳಕು, ಗಾಳಿ ಎಲ್ಲಾ ವ್ಯವಸ್ಥೆಗಳೊಂದಿಗೆ ಬಸ್ನ್ನು ಸ್ಮಾರ್ಟ್ ಕ್ಲಾಸ್ ಆಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಶಾಲೆಗೆ ತರಗತಿಗಳ ಸಂಖ್ಯೆಗಳು ಹೆಚ್ಚಾಗಬೇಕೆಂದು ನೀಡಿದ ಮನವಿ ಕಡತದಲ್ಲೇ ಬಾಕಿಯಾದರೂ ಹಳೆಯ ಬಸ್ ಈಗ ತರಗತಿ ಸಮಸ್ಯೆಗೆ ಸ್ವಲ್ಪ ಪರಿಹಾರ ನೀಡಿದೆ. ಗ್ರಾಮೀಣ ಮಕ್ಕಳ ಶಾಲಾ ಜೀವನದ ಪ್ರಮುಖ ಅಂಗವಾದ ಸರಕಾರಿ ಬಸ್ ಈಗ ವಿದ್ಯಾರ್ಜನೆಗೂ ನೆರವಾಗಿರುವುದು, ಬಸ್ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
Recommended Video