ಭಕ್ತಾದಿಗಳಿಗೆ ಉಡುಪಿಯಲ್ಲಿ ಶ್ರೀ ಕೃಷ್ಣ ದರ್ಶನ ಸದ್ಯಕ್ಕಿಲ್ಲ
ಉಡುಪಿ, ಜುಲೈ 03 : ಭಕ್ತಾದಿಗಳಿಗೆ ಉಡುಪಿಯಲ್ಲಿ ಶ್ರೀ ಕೃಷ್ಣನ ದರ್ಶನ ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಉಡುಪಿಯಲ್ಲಿ ಗುರುವಾರ 14 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ.
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಕೃಷ್ಣ ಮಠದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತರು ಮನೆಯಲ್ಲಿ ಇದ್ದುಕೊಂಡೇ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಮಠದಲ್ಲಿಯೂ ದೇಶದ ಒಳಿತಿಗಾಗಿ ಪೂಜೆ, ಪ್ರಾರ್ಥನೆ ನಡೆಯಲಿವೆ" ಎಂದರು.
"ಮನಸ್ಸಿನ ದೋಷಗಳು ರೋಗಕ್ಕೆ ಮೂಲ ಕಾರಣ. ಆಯುರ್ವೇದದ ಪ್ರಕಾರ ಮನಸ್ಸು ಚೆನ್ನಾಗಿದ್ದರೆ ಎಂಥಹ ರೋಗವನ್ನು ಗೆಲ್ಲಬಹುದು. ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಂಡು ರೋಗ ನಿವಾರಕ ಶಕ್ತಿಯನ್ನು ವೃದ್ಧಿಸಿಕೊಳ್ಳೋಣ" ಎಂದು ಸ್ವಾಮೀಜಿ ಕರೆ ನೀಡಿದರು.

ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆಯಾದ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗಿತ್ತು. ಮೇ ತಿಂಗಳಿನಲ್ಲಿ ಹಲವು ದೇವಾಲಯಗಳು ಬಾಗಿಲು ತೆರೆದಿವೆ. ಆದರೆ, ಉಡುಪಿ ಕೃಷ್ಣ ಮಠದಲ್ಲಿ ಜೂನ್ 30ರ ತನಕ ದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.
ಈಗ ಜುಲೈ ತಿಂಗಳಿನಲ್ಲಿಯೂ ಸದ್ಯ ಭಕ್ತಾದಿಗಳಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯದ ಹಲವಾರು ದೇವಾಲಯಗಳಲ್ಲಿ ಜುಲೈ 31ರ ತನಕ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.
ಗುರುವಾರ ಉಡುಪಿ ಜಿಲ್ಲೆಯಲ್ಲಿ 14 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 440. ಇದುವರೆಗೂ ಜಿಲ್ಲೆಯಲ್ಲಿ 5 ಜನರು ಮೃತಪಟ್ಟಿದ್ದಾರೆ.












Click it and Unblock the Notifications