ಶೀರೂರು ಸ್ವಾಮೀಜಿ ಸಾವಿಗೂ ಮುನ್ನ ಹಾಗೂ ನಂತರದ 10 ಘಟನಾವಳಿ
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಲಕ್ಷ್ಮೀವರ ತೀರ್ಥರು ಅಂದಾಕ್ಷಣ ವಿಭಿನ್ನ, ವಿಶಿಷ್ಟ ಹಾಗೂ ಕ್ರಾಂತಿಕಾರಿ ಆಲೋಚನೆಗಳಿಂದ ಉಳಿದ ಮಠಾಧೀಶರಿಂದ ಗುಂಪಿಗೆ ಸೇರದ ಪದದಂತೆ ಕಾಣುತ್ತಿದ್ದ ಚಿತ್ರವೊಂದು ಕಣ್ಣೆದುರು ಮೂಡುತ್ತದೆ. ಮಾಧ್ವ ಮಠಗಳ ಪೈಕಿ ತಮ್ಮ ನಡವಳಿಕೆ ಹಾಗೂ ಚಟುವಟಿಕೆ ಮೂಲಕ ಗಮನ ಸೆಳೆದಿದ್ದವರು ಲಕ್ಷ್ಮೀವರ ತೀರ್ಥರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿ, ಆ ನಂತರ ನಾಮಪತ್ರ ವಾಪಸ್ ಪಡೆದಿದ್ದರು. ಶೀರೂರು ಮಠದ ಪಟ್ಟದ ದೇವರನ್ನು ವಾಪಸ್ ನೀಡಲು ಉಡುಪಿಯ ಇತರ ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿ, ಶಿಷ್ಯ ಸ್ವೀಕಾರ ಮಾಡುವಂತೆ ಒತ್ತಡ ಹಾಕಿದಾಗ ಕೋರ್ಟ್ ಮೆಟ್ಟಿಲೇರುವುದಾಗಿ ತಮ್ಮ ಆಕ್ರೋಶ ಹೊರಹಾಕಿದ್ದರು.
Breaking: ಶೀರೂರು ಶ್ರೀಗಳ ವಕೀಲರಿಂದ ಸ್ಫೋಟಕ ಮಾಹಿತಿ
ಅಂಥ ಲಕ್ಷ್ಮೀವರ ತೀರ್ಥರು ಐವತ್ತೈದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವೈದ್ಯರು ಹೇಳುವ ಪ್ರಕಾರ ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ಸಾವು ಅನುಮಾನಾಸ್ಪದವಾಗಿದೆ ಎಂದು ಬಹಳ ಮಂದಿ ಹೇಳುತ್ತಿದ್ದಾರೆ. ಒಟ್ಟಾರೆ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ನಡೆದಿರುವ ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
ಹೊಟ್ಟೆ ನೋವು ಹಾಗೂ ರಕ್ತ ವಾಂತಿ
ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾದ ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಬುಧವಾರದಂದು ರಕ್ತವಾಂತಿ ಹಾಗೂ ಹೊಟ್ಟೆನೋವಿನ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಗಡಾಯಿಸಿದ ಆರೋಗ್ಯ
ಆ ನಂತರ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರೋಗ್ಯ ಬಿಗಡಾಯಿಸಿ, ಉಸಿರಾಟದ ಸಮಸ್ಯೆಯೂ ಕಾಡಿದ್ದರಿಂದ ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಯಿತು.
ಶಿರೂರು ಶ್ರೀಗಳ ಮರಣದ ಬಗ್ಗೆ ಕೆಎಂಸಿಯಿಂದ ಪತ್ರಿಕಾ ಹೇಳಿಕೆ
ಕೃತಕ ಉಸಿರಾಟ ವ್ಯವಸ್ಥೆ
ಯಾವಾಗ ಆರೋಗ್ಯ ಸ್ಥಿತಿ ಕುಸಿಯುತ್ತಾ ಹೋಯಿತೋ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಕೃತಕ ಉಸಿರಾಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಲಕ್ಷ್ಮೀವರ ತೀರ್ಥರು ನಿಧನರೆಂಬ ಘೋಷಣೆ
ಆಸ್ಪತ್ರೆಗೆ ಸ್ವಾಮೀಜಿ ದಾಖಲಾಗಿದ್ದಾರೆ ಎಂಬ ಸುದ್ದಿಯಿಂದ ಆತಂಕಕ್ಕೆ ಒಳಗಾಗಿದ್ದ ಭಕ್ತರು, ಅನುಯಾಯಿಗಳಿಗೆ ಗುರುವಾರ ಬೆಳಗ್ಗೆ 8.30ಕ್ಕೆ ಲಕ್ಷ್ಮೀವರ ತೀರ್ಥರು ಮೃತಪಟ್ಟರು ಎಂಬ ಸುದ್ದಿಯಿಂದ ಆಘಾತ.
ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!
ಗಣ್ಯರು, ಮಠಾಧೀಶರಿಂದ ಸಂತಾಪ
ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿಗೆ ವಿವಿಧ ವಲಯದ ಗಣ್ಯರು, ಮಠಾಧೀಶರು, ಭಕ್ತರು ಸಂತಾಪ ಸೂಚಿಸಿದರು. ವಿಭಿನ್ನ ಆಲೋಚನೆಗಳು ಹಾಗೂ ನಡವಳಿಕೆಯಿಂದ ಗಮನ ಸೆಳೆದಿದ್ದ ಸ್ವಾಮೀಜಿಯ ನೆನಕೆ
ವಿಷಾಹಾರ ಸೇವನೆ, ಬಹುಅಂಗ ವೈಫಲ್ಯದಿಂದ ಸಾವು
ಲಕ್ಷ್ಮೀವರ ತೀರ್ಥರ ಸಾವಿಗೆ ವಿಷಾಹಾರ ಸೇವನೆ ಹಾಗೂ ಬಹುಅಂಗ ವೈಫಲ್ಯ ಕಾರಣ ಎಂಬ ವರದಿ ನೀಡಿದ ವೈದ್ಯ ಅವಿನಾಶ್ ಶೆಟ್ಟಿ. ಮರಣೋತ್ತರ ಪರೀಕ್ಷೆ ಮಾಡಿ, ಆ ನಂತರ ಪಾರ್ಥಿವ ಶರೀರ ಹಸ್ತಾಂತರ.
ಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರ
ಸ್ವಾಮೀಜಿಗೆ ಜೀವಭಯವಿತ್ತು ಎಂಬ ಹೇಳಿಕೆ ನೀಡಿದ ವಕೀಲರು
ಶೀರೂರು ಮಠದ ಪಟ್ಟದ ದೇವರು ವಾಪಸ್ ಪಡೆಯುವ ವಿಚಾರವಾಗಿ ಪುತ್ತಿಗೆ ಮಠ ಹೊರತು ಪಡಿಸಿ ಉಳಿದ ಮಠಗಳಿಗೆ ನೋಟಿಸ್ ಕೊಡಲು ನಿರ್ಧರಿಸಿದ್ದ ಸ್ವಾಮೀಜಿ, ಜೀವಕ್ಕೆ ತೊಂದರೆ ಆಗಬಹುದು ಎಂದು ತಮ್ಮ ಬಳಿ ತಿಳಿಸಿದ್ದರು ಎಂಬ ಹೇಳಿಕೆ ನೀಡಿ, ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದ ಸ್ವಾಮೀಜಿ ಪರ ವಕೀಲ ರವಿಕಿರಣ್ ಮುರಡೇಶ್ವರ.
ಸಾವಿನ ಬಗ್ಗೆ ಸಿಐಡಿ, ಸಿಬಿಐ ತನಿಖೆಗೆ ಆಗ್ರಹ
ಪೇಜಾವರ ಮಠದಲ್ಲಿ ಈ ಹಿಂದೆ ಪೀಠ ತ್ಯಾಗ ಮಾಡಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥರಿಂದಲೂ ಸಾವಿನ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆಗೆ ಆಗ್ರಹ. ಲಕ್ಷ್ಮೀವರ ತೀರ್ಥರ ಸಾವು ಸಹಜವಲ್ಲ ಎಂಬ ಅನುಮಾನವಿದೆ ಎಂಬ ಹೇಳಿಕೆ.
ಉತ್ತರಾಧಿಕಾರಿ ನೇಮಕ ಆಗಬೇಕು
ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರವಾಗಿ ಆ ಮಠದ ದ್ವಂದ್ವ ಮಠವಾದ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಸೇರಿ ಇತರ ಸ್ವಾಮಿಗಳ ಸಭೆ. ಉತ್ತರಾಧಿಕಾರಿ ನೇಮಕ ನಂತರ ಶೀರೂರು ಮೂಲ ಮಠದಲ್ಲೇ ಲಕ್ಷ್ಮೀವರ ತೀರ್ಥ ಅಂತಿಮ ವಿಧಿವಿಧಾನ.
ಜವಾಬ್ದಾರಿ ಸೋದೆ ಮಠದ ಮೇಲಿದೆ
ಉಡುಪಿ ಅಷ್ಟಮಠಗಳ ಸಂಪ್ರದಾಯದಂತೆ ಲಕ್ಷ್ಮೀವರ ಶ್ರೀಗಳ ಅಂತಿಮ ವಿಧಿ ವಿಧಾನ ನಡೆಯುತ್ತದೆ. ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ, ಆರತಿ ಮಾಡಿ, ಆನಂತರ ದೇವರ ದರ್ಶನ ಮಾಡಿಸಲಾಗುತ್ತದೆ. ಸ್ವಾಮೀಜಿಗೆ ವೃಂದಾವನವನ್ನು ನಿರ್ಮಿಸಿ, ಮಾಧ್ವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ. ಇದರ ಜವಾಬ್ದಾರಿಯನ್ನು ಸೋದೆ ಮಠ ಹೊತ್ತಿಕೊಂಡಿದೆ.