ಕೋವಿಡ್-19 ನಿಯಮ ಪಾಲನೆಯೊಂದಿಗೆ ಆಳಸಮುದ್ರ ಮೀನುಗಾರಿಕೆ ಪ್ರಾರಂಭ
ಉಡುಪಿ, ಆಗಸ್ಟ 25: ಕರಾವಳಿಯ ಮೀನುಗಾರಿಕೆಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ಇದಕ್ಕೆ ಮುಖ್ಯ ಕಾರಣ ಲಾಕ್ ಡೌನ್. ಮೀನುಗಾರಿಕೆ ಎಂಬುದು ಗುಂಪುಗಳಲ್ಲಿ ನಡೆಯುವ ಉದ್ಯಮ. ಇಲ್ಲಿ ನೂರಾರು ಸಾವಿರಾರು ಜನ ಸೇರ್ತಾರೆ. ಹೀಗಾಗಿ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮದೊಂದಿಗೆ ಮೀನುಗಾರಿಕೆ ನಡೆಸುವುದು ದೊಡ್ಡ ಸವಾಲು.
Recommended Video
ಆದರೆ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಆಗಿದ್ದು, ಈಗ ಬಹುತೇಕ ನಿಯಮದಂತೆ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಈ ಸಂಬಂಧ ಮಲ್ಪೆಯಲ್ಲಿ ಅಧಿಕಾರಿಗಳು ಮತ್ತು ಮೀನುಗಾರರ ಸಂಘಗಳ ಜೊತೆ ಸಮಾಲೋಚನೆ ನಡೆಯಿತು.
ಸಾಮಾಜಿಕ ಅಂತರದೊಂದಿಗೆ ಕೋವಿಡ್ ನ ಎಲ್ಲ ನಿಯಮಗಳ ಪಾಲನೆಯೊಂದಿಗೆ ಆಳಸಮುದ್ರ ಮೀನುಗಾರಿಕೆ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಮೀನುಗಾರ ಸಂಘದವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ವಾರದಿಂದ ಮಲ್ಪೆಯಲ್ಲಿ ಆಳಸಮುದ್ರ ಮೀನುಗಾರಿಕೆ ಪ್ರಾರಂಭಗೊಂಡಿದೆ. ಆದರೆ ಆಳಸಮುದ್ರ ಮೀನುಗಾರಿಕೆ ಕೋವಿಡ್-19 ನಿಯಮಾವಳಿಯಂತೆ ನಡೆಯಬೇಕಿದೆ. ಮುಖ್ಯವಾಗಿ ಒಂದೇ ಬಾರಿಗೆ ಎಲ್ಲ ಜನ ಒಟ್ಟುಗೂಡಬಾರದು.
ಮೀನು ಅನ್ ಲೋಡ್ ಮತ್ತು ಹರಾಜನ್ನು ಬೆಳಿಗ್ಗೆ ಹೊತ್ತಿಗೆ ಮಾತ್ರ ಮಾಡದೆ, ಇಡೀ ದಿನ ಮಾಡಬಹುದು. ಆಗ ನೂಕುನುಗ್ಗಲು ತಪ್ಪುತ್ತದೆ. ಒಮ್ಮೆಗೆ ಒಂದೇ ಬೋಟ್ ಅನ್ ಲೋಡ್ ಮಾಡಬೇಕು, ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.

ಕೋವಿಡ್ ನಿಯಮಗಳನ್ನು ಪಾಲಿಸಲು ಮೀನುಗಾರ ಸಂಘಗಳಿಗೆ ಸೂಚಿಸಿದ್ದು, ಸಂಘಗಳು ಸ್ವಯಂಸೇವಕರ ಮೂಲಕ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಬೋಟ್ ಗಳು ಬಂದರಿನೊಳಗೆ ಬರುವಾಗಲೂ ಕ್ರಮಬದ್ಧವಾಗಿ ಬಂದು ಹೋಗಬೇಕು, ಎಲ್ಲೆಂದರಲ್ಲಿ ಬೋಟ್ ಗಳನ್ನು ಸುಮ್ಮನೇ ನಿಲ್ಲಿಸುವಂತಿಲ್ಲ. ಈ ಎಲ್ಲ ಮುಂಜಾಗರೂಕತೆಯೊಂದಿಗೆ ಆಳಸಮುದ್ರ ಮೀನುಗಾರಿಕೆ ಪ್ರಾರಂಭಿಸಲು ತೀರ್ಮಾನಿಸಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.












Click it and Unblock the Notifications