ಉಡುಪಿ ಪರ್ಯಾಯಕ್ಕೆ ಸರ್ಕಾರದ ಕೊರೊನಾ ನಿಯಮ ಅಡ್ಡಿ
ಉಡುಪಿ, ಜನವರಿ 09; ಕೃಷ್ಣನೂರು ಉಡುಪಿಯ ದೊಡ್ಡ ಹಬ್ಬ ಎಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ. ಇದೇ ತಿಂಗಳು ನಡೆಯುವ ಪರ್ಯಾಯಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಉಡುಪಿ ರಸ್ತೆಗಳಲ್ಲಿ ಸ್ವಾಗತ ಗೋಪುರಗಳು ಕಣ್ಮನ ಸೆಳೆಯುತ್ತಿವೆ, ಅತ್ತ ಕೃಷ್ಣ ಮಠವನ್ನು ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗುತ್ತಿದೆ.
ಈ ನಡುವೆ ಕೋವಿಡ್ ಕರಿಛಾಯೆ ಪರ್ಯಾಕ್ಕೆ ದೊಡ್ಡ ಆತಂಕ ತಂದೊಡ್ಡಿದೆ. ಮಾರ್ಗಸೂಚಿ ಅನುಸರಿಸಿ, ಪರ್ಯಾಯ ನಡೆಸೋದು ಸವಾಲಾಗಿದೆ. ಪರ್ಯಾಯದ ಸಂಭ್ರಮದಲ್ಲಿದ್ದ ಉಡುಪಿ ಮಠದ ಭಕ್ತರಿಗೆ ನಿರಾಸೆಯಾಗಿದೆ.
ಶ್ರೀ ಕೃಷ್ಣಮಠದಲ್ಲಿ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯದಂತೆ ಎರಡು ತಿಂಗಳಿಗೆ ಒಮ್ಮೆಯಂತೆ ಎಂಟು ಯತಿಗಳು ಶ್ರೀಕೃಷ್ಣನನ್ನು ಪೂಜಿಸುತ್ತಿದ್ದರು. ಇದಾದ ಸುಮಾರು ಎರಡು ಶತಮಾನಗಳ ಬಳಿಕ ಶ್ರೀವಾದಿರಾಜ ಸ್ವಾಮಿಗಳು ಎರಡು ವರ್ಷಗಳಿಗೊಮ್ಮೆ ಪೂಜಿಸುವ ಕ್ರಮವನ್ನು ಆರಂಭಿಸಿದರು. ಹೀಗಾಗಿ ಪರ್ಯಾಯ ಆರಂಭದಲ್ಲಿ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಮಠ ಪರಂಪರೆಯಲ್ಲಿ ವಿಶೇಷ ಮಹತ್ವ ವಿದೆ.

ಸದ್ಯ ಅದಮಾರು ಈಶ ಪ್ರಿಯ ಶೀಗಳ ಪರ್ಯಾಯ ಕೊನೆಗೊಂಡು, ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಿರುವ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರ ಪರ್ಯಾಯಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ.
ಜನವರಿ 17ರ ರಾತ್ರಿ ಮತ್ತು ಜನವರಿ 18ರಂದು ಪರ್ಯಾಯೋತ್ಸವ ಜರಗಲಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಉಡುಪಿಯ ರಸ್ತೆಗಳನ್ನು ರಿಪೇರಿ ಮಾಡಿ, ಸ್ವಾಗತ ಗೋಪುರಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಕೃಷ್ಣಾಪುರ ಮಠ ಹಾಗೂ ಕೃಷ್ಣ ಮಠಕ್ಕೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ. ವಿದ್ಯುತ್ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಪರ್ಯಾಯ ಸಮಿತಿ ಸದಸ್ಯರಾದ ವಾಸುದೇವ ಭಟ್, ಪರ್ಯಾಯಕ್ಕಾಗಿ ಈಗ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಆದರೆ ಸರ್ಕಾರ ಈಗ ನಿಯಮಗಳನ್ನು ಹಾಕಿದೆ. ಪರ್ಯಾಯ ಉತ್ಸವ ನಡೆಯುತ್ತದೆ. ಭಕ್ತರ ಸಂಖ್ಯೆಯ ಇವುಗಳ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪರ್ಯಾಯ ಅಂದರೆ ಸಾವಿರಾರು ಮಂದಿ ಭಕ್ತರು ದೂರ ದೂರದ ಊರುಗಳಿಂದ ಆಗಮಿಸುತ್ತಾರೆ. ಆದರೆ ಸದ್ಯ ಕೋವಿಡ್ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ. ಹೆಚ್ಚು ಜನ ಸೇರಿಸುವಂತಿಲ್ಲ. ಹೀಗಾಗಿ ಮಾರ್ಗಸೂಚಿ ಪಾಲಿಸಿಕೊಂಡು ಪರ್ಯಾಯ ಮಹೋತ್ಸವ ನಡೆಸುವುದೇ ದೊಡ್ಡ ಸವಾಲಾಗಿದೆ.
ಒಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಅದ್ದೂರಿ ಬದಲು ಸರಳವಾಗಿ ಪರ್ಯಾಯ ನಡೆಸಲು ಚಿಂತನೆ ನಡೆಯುತ್ತಿದೆ. ಯಾವುದಕ್ಕೂ ಭಕ್ತರ ಸಹಕಾರ ಅಗತ್ಯವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಡಿಸೆಂಬರ್ 28ರಿಂದಲೇ ಕರ್ಫ್ಯೂ ಜಾರಿಗೊಳಿಸಿದೆ. ಈ ವಾರದಿಂದ ವಾರಾಂತ್ಯದ ಕರ್ಫ್ಯೂ ಸಹ ಜಾರಿಗೆ ಬಂದಿದೆ. ದೇವಾಲಯಗಳ ಉತ್ಸವ, ಜಾತ್ರೆ, ಮನೋರಂಜನಾ ಕಾರ್ಯಕ್ರಮಗಳನ್ನು ಸರ್ಕಾರ ರದ್ದುಗೊಳಿಸಿದೆ.
ಒಳಾಂಗಣ ಮತ್ತು ಹೊರಾಂಗಣದಲ್ಲಿ ನಡೆಯುವ ಮದುವೆಗಳಿಗೆ ಸಹ ಜನರ ಮೀತಿ ಹೇರಲಾಗಿದೆ. ಮಾಲ್, ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಸೀಟು ಭರ್ತಿಗೆ ಆದೇಶ ಹೊರಡಿಸಲಾಗಿದೆ. 50 ಜನಕ್ಕಿಂತ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.
ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಶನಿವಾರ ಕರ್ನಾಟಕದಲ್ಲಿ 8906 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 38,507ಕ್ಕೆ ಏರಿಕೆಯಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಉಡುಪಿಯಲ್ಲಿ ಶನಿವಾರ 186 ಹೊಸ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 716.












Click it and Unblock the Notifications