ಉಡುಪಿ: ಮೀನು ವ್ಯಾಪಾರದಲ್ಲೂ ಕೋಮು ದ್ವೇಷ; ಹಿಂದೂಗಳಿಂದ ಮೀನು ಖರೀದಿಸದಂತೆ ತಾಕೀತು
ಉಡುಪಿ, ಅಕ್ಟೋಬರ್ 6: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವಾಗಿ ಅಕ್ಟೋಬರ್ 1ನೇ ತಾರೀಖು ಸಾವಿರಾರು ಜನರ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು. ಗೋವಧೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ದುಷ್ಕರ್ಮಿಗಳು ವೈರಲ್ ಮಾಡಿ ವಿಕೃತ ಸುಖ ಅನುಭವಿಸಿದ್ದು, ಜನರ ವಿರೋಧಕ್ಕೂ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಸಾವಿರಾರು ಮೀನುಗಾರರು, ಸಾರ್ವಜನಿಕರು ಬೃಹತ್ ಮೆರವಣಿಗೆ ಮಾಡಿ ವಿಡಿಯೋ ಮಾಡಿದವರ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದರು. ಗೋಹತ್ಯೆಯ ವಿಡಿಯೋ ಎರಡು ಕೋಮಿನ ಜನರ ನಡುವೆ ಕಿಚ್ಚು ಹಚ್ಚಿ, ವಿಡಿಯೋದಲ್ಲಿರುವ ನಾಲ್ಕು ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದರು.
ಪೊಲೀಸ್ ತನಿಖೆಯ ಬಳಿಕ ಇದು ಹತ್ತು ವರ್ಷಗಳ ಹಿಂದಿನ ವಿಡಿಯೋ ಅಂತಾ ತಿಳಿದುಬಂದಿತ್ತು. ಹೀಗಾಗಿ ಜನಜೀವನ ಮತ್ತೆ ಸಹಜ ಸ್ಥಿತಿಗೆ ಸುಧಾರಿಸುವ ಹೊತ್ತಿನಲ್ಲಿ ಈಗ ಕೋಮು ದ್ವೇಷ ಮೀನು ವ್ಯಾಪಾರಕ್ಕೂ ಅಂಟಿಕೊಂಡಿದೆ.

ಅಕ್ಟೋಬರ್ ಒಂದನೇ ತಾರೀಖು ನಡೆದ ಪ್ರತಿಭಟನೆಯಲ್ಲಿ ನೂರಾರು ಮೀನುಗಾರ ಮಹಿಳೆಯರು ಭಾಗವಹಿಸಿದ್ದು, ಈ ಹಿನ್ನಲೆಯಲ್ಲಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮಹಿಳಾ ಮೀನುಗಾರರಿಂದ ಮುಸ್ಲಿಂ ಧರ್ಮದವರು ಮೀನು ಖರೀಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆಯರಿಂದ ಮೀನು ಖರಿದೀಸುವುದನ್ನೇ ಅನ್ಯ ಕೋಮಿನವರು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ವ್ಯಾಪಾರ ಇಲ್ಲದೇ ಬಡ ಮಹಿಳಾ ಮೀನುಗಾರರು ಕಂಗಾಲಾಗಿದ್ದಾರೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಗಂಗೊಳ್ಳಿ ಮೀನು ಮಾರುಕಟ್ಟೆ ಖಾಲಿ ಖಾಲಿಯಾಗಿದೆ.

ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹಿಂದೂಗಳು ಮಾರುವ ಮೀನನ್ನು ಖರೀದಿಸಬಾರದೆಂದು ಮುಸ್ಲಿಂ ಸಂಘಟನೆಯ ಮುಖಂಡರು ಮಸೀದಿಗಳಲ್ಲಿ ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆಯರಿಗೆ ಈ ಮೂಲಕ ಉತ್ತರ ಕೊಡಲು ಮುಸ್ಲಿಂ ಸಂಘಟನೆಗಳು ನಿರ್ಧಾರ ಮಾಡಿವೆ.
ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬರುವ ತಮ್ಮ ಧರ್ಮದ ಜನರನ್ನು ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಮಾರುಕಟ್ಟೆ ಎದುರಲ್ಲೇ ತಡೆದು ಹಿಂದೆ ಕಳುಹಿಸುತ್ತಿದ್ದಾರೆ. ಮತ್ತೆ ಈ ಮಹಿಳೆಯರಿಂದ ಮೀನು ಖರೀದಿ ಮಾಡಿದರೆ ಫತ್ವಾ ಹೊರಡಿಸುವ ಎಚ್ಚರಿಕೆಯನ್ನೂ ಮುಸ್ಲಿಂ ಸಂಘಟನೆಯ ಪ್ರಮುಖರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಹಿಂದೂ ಮಹಿಳೆಯರಿಂದ ಮೀನು ಖರೀದಿಯನ್ನೇ ಮುಸ್ಲಿಂ ಧರ್ಮದ ಜನರು ಬಿಟ್ಟಿದ್ದಾರೆ.
ಈ ರೀತಿಯ ಬೆಳವಣಿಗೆಗೆ ಕಾರಣರಾದ ಸ್ಥಳೀಯ ಮುಸ್ಲಿಂ ಸಂಘಟನೆಯ ಯುವಕರ ವಿರುದ್ಧ ಮಹಿಳಾ ಮೀನುಗಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಶಾಂತಿ ಸಭೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥ ಗೊಳಿಸುವ ಭರವಸೆ ನೀಡಿದ್ದಾರೆ. ಆ ಬಳಿಕ ಪೊಲೀಸರು ಎರಡೂ ಧರ್ಮದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮೀನು ಖರೀದಿಯಲ್ಲೂ ಕೋಮು ದ್ವೇಷ ಹರಡಿದ್ದು, ಬಡ ಮಹಿಳಾ ಮೀನುಗಾರರು ಮಾತ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರಿಂದ ತುಂಬಿ ಹೋಗುತ್ತಿದ್ದ ಮೀನು ಮಾರುಕಟ್ಟೆ, ಈಗ ಜನರಿಲ್ಲದೇ ಬಿಕೋ ಅನ್ನುತ್ತಿದೆ. ಲಕ್ಷಾಂತರ ರೂಪಾಯಿಯ ಮೀನುಗಳು ಮಾರಾಟವಾಗದೇ ಕೊಳೆತು ಹೋಗುತ್ತಿವೆ.
ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಮಾರುಕಟ್ಟೆಯನ್ನು ಬಂದ್ ಮಾಡಿ ಭಾಗವಹಿಸಿದ ಮಹಿಳಾ ಮೀನುಗಾರರಿಂದ ಮೀನು ಖರೀದಿಸದೆ ಉತ್ತರ ನೀಡಬೇಕೆಂದು ಮುಸ್ಲಿಂ ಮುಖಂಡರು ಸೂಚನೆ ನೀಡಿದ್ದರಿಂದ ಪರಿಸ್ಥಿತಿ ಸದ್ಯಕ್ಕೆ ತಿಳಿಯಾಗುವ ಸಾಧ್ಯತೆಗಳಿಲ್ಲ.
ಹೀಗಾಗಿ ಹಿಂದೂ ಸಂಘಟನೆಗಳೂ ಮುಸ್ಲಿಂ ಸಂಘಟನೆಗಳ ರೀತಿಯಲ್ಲೇ ಪ್ರತಿ ತಂತ್ರ ಮಾಡಲು ಸಿದ್ಧತೆ ನಡೆಸಿದೆ. ಮುಸ್ಲಿಂ ವ್ಯಾಪಾರಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರಸೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿವೆ. ಒಟ್ಟಿನಲ್ಲಿ ಎರಡು ಕೋಮಿನ ಜನರ ದ್ವೇಷಕ್ಕೆ ಬಡ ವ್ಯಾಪಾರಿಗಳು ಗುರಿಯಾಗಿರುವುದು ಮಾತ್ರ ದುರಂತವಾಗಿದೆ.












Click it and Unblock the Notifications