ಚಂದ್ರಶೇಖರ್ ಬಿಜೆಪಿ ತೊರೆದದ್ದಕ್ಕೆ ಬೋಜೇಗೌಡ ಕೊಟ್ಟ ಉತ್ತರವಿದು
ಉಡುಪಿ, ನವೆಂಬರ್.01: ಬಿಜೆಪಿ ನಾಯಕರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲಿದೆ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಗೆಲುವು ಶತಃಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾಲ್ಕು ತಿಂಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅದರ ಆಧಾರದ ಮೇಲೆಯೇ ನಾಡಿನ ಜನ ಮತ ನೀಡಿ ನಮ್ಮ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ.
ಕರಾವಳಿಯಲ್ಲಿ ಆಗುತ್ತಿರುವ ಮರಳು ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಕರಾವಳಿ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದ್ದಾರೆ. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ ಎಂದು ತಿಳಿಸಿದರು.
ಸಿಎಂ ಗೆ ಡಿಸಿಯನ್ನು ಕಂಟ್ರೋಲ್ ಮಾಡುವ ಶಕ್ತಿ ಇಲ್ಲವೇ ಎಂದು ಬಿಜೆಪಿಯ ಮೇಲ್ಮನೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಇದು ಎಷ್ಡು ಸರಿ? ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಕೋಟಾ ಶ್ರೀನಿವಾಸ ಪೂಜಾರಿಗೆ ಕಿವಿಮಾತು ಹೇಳಿದರು. ಮುಂದೆ ಓದಿ...

ಪ್ರಜಾಪ್ರಭುತ್ವಕ್ಕೆ ಮಾರಕ
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದ ವಿಚಾರವಾಗಿ ಮಾತನಾಡಿದ ಬೋಜೇಗೌಡರು ,ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಚುನಾವಣೆಯಿಂದ ಹಿಂದೆ ಸರಿದಿದ್ದು, ಬಿಜೆಪಿಗೆ ಆಘಾತದ ವಿಷಯ. ಗೆದ್ದಂತಹ ಶಾಸಕರನ್ನೇ ಖರೀದಿಸಲು ಪ್ರಯತ್ನಿಸಿದವರು ಬಿಜೆಪಿಯವರು. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಅಂತ ಅನ್ನಿಸಿಲ್ವೇ ಆಗ? 'ಮಾಡಿದ್ದುಣ್ಣೊ ಮಾರಾಯ' ಎಂಬ ಗಾದೆಯಂತಾಗಿದೆ ಬಿಜೆಪಿ ಸ್ಥಿತಿ ಎಂದು ವ್ಯಂಗ್ಯವಾಡಿದರು.

ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ
ಮುಖ್ಯಮಂತ್ರಿಯವರು ಉಡುಪಿಗೆ ಬಂದಾಗ ನೀತಿ ಸಂಹಿತೆ ಜಾರಿಯಲ್ಲಿತ್ತು ಎಂಬುದು ಗೊತ್ತಿರಲಿ. ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ. ಮರಳುಗಾರಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಜನರ ಸಮಸ್ಯೆಗೆ ಪರಿಹಾರ ಸಿಗೋದು ಮುಖ್ಯ. ನಮಗೂ ಆ ನಿಟ್ಟಿನಲ್ಲಿ ಜವಾಬ್ದಾರಿ ಇದೆ. ನಿಮಗೆ ಮಾತ್ರವಲ್ಲ ಎಂದು ಬಿಜೆಪಿ ಮುಖಂಡರ ವಿರುದ್ಧ ಬೋಜೇಗೌಡ ಕಿಡಿಕಾರಿದರು.

ಕೇಂದ್ರದ ಪಾತ್ರವೂ ಇದೆ
ಸಿಆರ್ ಝಡ್ ನಿಂದ ಹೊರಗಿರುವ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧ ಮಾಡಿದ್ದು ಯಾರು? ಇದರಲ್ಲಿ ಕೇಂದ್ರದ ಪಾತ್ರವೂ ಇದೆ. ನಿಮ್ಮ ಬಿಜೆಪಿ ಮುಖಂಡರಿಗೂ ಜವಾಬ್ದಾರಿ ಇದೆ. ಜಿಲ್ಲಾಧಿಕಾರಿಯನ್ನು ದೂಷಿಸುವಾಗ ಕೇಂದ್ರದ ಪಾತ್ರ ಏನು ಎಂಬುದು ತಿಳಿದುಕೊಳ್ಳಿ ಎಂದು ಬೋಜೇಗೌಡರು ಹರಿಹಾಯ್ದರು.

ರಾಜಕೀಯ ಬೆರೆಸಬೇಡಿ
ಕೇಂದ್ರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದ ಬೋಜೇಗೌಡರು ಇದರಲ್ಲಿ ಮರಳುಗಾರಿಕೆ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ. ಸಾಂಪ್ರದಾಯಿಕ ಮರಳುಗಾರಿಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications