ಮಗು ಅಪಹರಣ ಪ್ರಕರಣಕ್ಕೆ ತಿರುವು; ಸಾಯಲು ಹೋಗಿ ಮಗು ಕಳೆದುಕೊಂಡ ತಾಯಿ
ಉಡುಪಿ, ಜುಲೈ 13: ಎಡಮೊಗ್ಗೆಯ ಕುಮ್ಟಿಬೇರು ಗ್ರಾಮವಿಡೀ ಜುಲೈ 11ರಂದು ಬೆಳ್ಳಂಬೆಳಿಗ್ಗೆ ಅದೇನೋ ಮೌನ. ಎಲ್ಲರ ಮನೆಯಲ್ಲೂ ಆತಂಕ, ಆಶ್ಚರ್ಯ. ಇದಕ್ಕೆಲ್ಲ ಕಾರಣ 2 ವರ್ಷದ ಹೆಣ್ಣು ಮಗು ಸಾನ್ವಿಕಾ ಅಪಹರಣ ಸುದ್ದಿ.
ಎರಡರ ಕೂಸನ್ನು ಮುಸುಕುಧಾರಿಗಳು ಮಧ್ಯರಾತ್ರಿ ಸಮಯ ಅಪಹರಿಸಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿಕೊಂಡಿತ್ತು. ಗ್ರಾಮದ ಸಂತೋಷ್ ನಾಯ್ಕ, ರೇಖಾ ನಾಯ್ಕ ದಂಪತಿ ಮನೆ ಮುಂದೆ ಜನ ಕಿಕ್ಕಿರಿದಿದ್ದರು. ಮಗು ಸಿಕ್ಕಿದರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದರು ಕೆಲವರು. ಆದರೆ ಅಪಹರಣ ಮಾಡಲಾಗಿದೆ ಎನ್ನಲಾಗಿದ್ದ ಮಗುವಿನ ಶವ ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಕುಬ್ಜಾ ನದಿಯಲ್ಲಿ ನಿನ್ನೆ ಪತ್ತೆಯಾಯಿತು.
ಈಗ ಈ ಅಪಹರಣ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಅವಘಡಕ್ಕೆ ಕಾರಣ ಮಗುವಿನ ತಾಯಿಯ ಆತ್ಮಹತ್ಯೆ ಪ್ರಯತ್ನ ಎಂಬುದು ತಿಳಿದುಬಂದಿದೆ.

ಕೌಟುಂಬಿಕ ಕಲಹದಿಂದಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಸಮೀಪ ಹರಿಯುತ್ತಿರುವ ಕುಬ್ಜ ಹೊಳೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ವೇಳೆ ಮಗು ಸಾನ್ವಿಕಾ ಕೈಯಿಂದ ಜಾರಿ ನೀರಿಗೆ ಬಿದ್ದಿರುವುದಾಗಿ ತಾಯಿ ರೇಖಾ ನಾಯ್ಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ತಮ್ಮ ಕಿರಿಯ ಮಗು ಸಾನ್ವಿಕಾ ಜುಲೈ 11ರ ಮುಂಜಾನೆ ನಾಪತ್ತೆಯಾಗಿದ್ದು, ಬೆಳಗ್ಗಿನ ಜಾವ ಮುಸುಕುಧಾರಿ ವ್ಯಕ್ತಿ ಮನೆಯೊಳಗೆ ನುಗ್ಗಿ ಮಲಗಿದ್ದ ಮಗುವನ್ನು ಅಪಹರಿಸಿದ. ಕುಬ್ಜಾ ನದಿ ದಾಟಿ ಮಗುವನ್ನು ಎತ್ತಿಕೊಂಡು ಓಡಿಹೋದ ಎಂದು ರೇಖಾ ಹೇಳಿಕೆ ನೀಡಿದ್ದರು. ಈ ಕುರಿತು ಶಂಕರನಾರಾಯಣ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ರೇಖಾ, ಮಗುವಿನ ಅಪಹರಣಕಾರರನ್ನು ನಾನು ಮತ್ತು ಆರು ವರ್ಷದ ಮಗ ಬೆನ್ನಟ್ಟಿದೆವು. ಮಗುವನ್ನು ಕಾಪಾಡಲು ಹೋದರೂ ನದಿ ದಾಟಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಈ ಘಟನೆಯಿಂದ ಸುತ್ತಮುತ್ತಲ ಜನರೂ ಆತಂಕಗೊಂಡಿದ್ದರು. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದರು. ಅಗ್ನಿ ಶಾಮಕ ದಳ, ಸ್ಥಳೀಯರು ಸೇರಿ ನದಿಯಲ್ಲಿ ಎಷ್ಟು ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಆದರೆ ಪ್ರಕರಣದುದ್ದಕ್ಕೂ ರೇಖಾ ಹೇಳಿಕೆ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಅಪಹೃತ ಮಗುವಿನ ತಾಯಿ ಮತ್ತು 6 ವರ್ಷದ ಮಗನ ಹೇಳಿಕೆಗಳ ವ್ಯತ್ಯಾಸದಿಂದ ಘಟನೆ ಬಗ್ಗೆ ಇದ್ದ ಸಂಶಯ ಮತ್ತಷ್ಟು ಗಟ್ಟಿಗೊಂಡಿತ್ತು. ಪೊಲೀಸರು ರೇಖಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಸತ್ಯತೆ ಬಯಲಾಗಿದೆ.
ಘಟನೆಗೆ ಕಾರಣವೇನು?: ರೇಖಾ ಮನೆಯಲ್ಲಿ ಸಂತೋಷ್ ನಾಯ್ಕ ಅವರ ತಾಯಿ ಕೂಡ ಇದ್ದಾರೆ. ಅತ್ತೆ ಮತ್ತು ಸೊಸೆ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಲಿದ್ದು, ಜುಲೈ10ಕ್ಕೂ ಜಗಳ ನಡೆದಿದೆ. ಇದೇ ಸಿಟ್ಟಿನಲ್ಲಿ ಸಂತೋಷ್ ತಾಯಿ ತನ್ನ ಮಗಳ ಮನೆಗೆ ಹೋಗಿದ್ದರು. ಈ ವಿಚಾರದಲ್ಲಿ ಸಂತೋಷ್ ನಾಯ್ಕ ತನ್ನ ಪತ್ನಿ ಜೊತೆ ಜಗಳ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೊಸಂಗಡಿಯ ಸಂಡೂರಿನ ಪವರ್ ಹೌಸ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಜುಲೈ 10ರಂದು ರಾತ್ರಿ ಕೆಲಸಕ್ಕೆ ಹೋಗಿದ್ದು, ಅಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೇಖಾ ತನ್ನ ಇಬ್ಬರು ಮಕ್ಕಳಾದ ಸಾತ್ವಿಕ್ ಹಾಗೂ ಸಾನ್ವಿಕಾ ಜೊತೆ ಮನೆ ಸಮೀಪದ ಕುಬ್ಜ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಮಗು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ತಾಯಿ ಮತ್ತು ಮಗ ಇಬ್ಬರೇ ಹೊಳೆ ಮಧ್ಯೆ ಸಿಲುಕಿಕೊಂಡಿದ್ದಾಎರ. ಮಗ ಅರಚಲು ಆರಂಭಿಸಿದಾಗ ಅಕ್ಕಪಕ್ಕದವರಿಗೆ ಎಚ್ಚರವಾದರೆ ಎಂದು ಹೆದರಿ ಇಬ್ಬರೂ ಮರಳಿ ಮನೆಗೆ ಬಂದಿದ್ದಾರೆ. ನಂತರ ಗೊಂದಲದಲ್ಲಿದ್ದ ರೇಖಾ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.
ಪೊಲೀಸರು ರೇಖಾಗೆ ಮಾನಸಿಕ ತಜ್ಞರ ಮೂಲಕ ಕೌನ್ಸಿಲಿಂಗ್ ಕೊಡಿಸಿದ್ದಾರೆ. ಆಕೆ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.












Click it and Unblock the Notifications