ಭಾರತ್ ಬಂದ್: ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಡೆತ್ತಿದ ಉಡುಪಿಯ ರಿಕ್ಷಾ ಚಾಲಕರು
ಉಡುಪಿ, ಸೆ 10: ರಾಜ್ಯದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಕರೆನೀಡಿರುವ ಭಾರತ್ ಬಂದ್ ವೇಳೆ ನಗರದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವುದರಿಂದ ಸದ್ಯ ಮಂಗಳವಾರ (ಸೆ 11) ಬೆಳಗ್ಗೆಯ ತನಕ ಸೆಕ್ಷನ್ 144 ಜಾರಿ ಮಾಡಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ನಡುವೆ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಿರುವ ಮಣಿಪಾಲದಲ್ಲಿ, ಬಂದ್ ಮಾಡಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಆಟೋ ಚಾಲಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ಸ್ಥಳದಿಂದ ಹೊರಟು ಹೋಗುವಂತೆ ಸೂಚಿಸಿದ್ದಾರೆ. ಆಟೋ ಚಾಲಕರಿಗೆ ಸ್ಥಳೀಯರು ಬೆಂಬಲ ನೀಡಿದ್ದರಿಂದ, ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬಂದ್ ಮಾಡಿಸುವುದಿದ್ದರೆ ಎಲ್ಲದನ್ನೂ ಬಂದ್ ಮಾಡಿಸಿ, ನೀವು ಖಾಸಗಿ ಕಾರ್ ಮತ್ತು ಬೈಕ್ ನಲ್ಲಿ ಬಂದು ಬಂದ್ ಮಾಡುವಂತೆ ಸೂಚಿಸುತ್ತೀರಾ, ಬಂದ್ ಮಾಡಿಸುವ ನೀವೂ, ನಿಮ್ಮ ವಾಹನವನ್ನು ಹೊರಗೆ ತೆಗೆಯಬಾರದಿತ್ತು ಎಂದು ಆಟೋ ಚಾಲಕರು, ಪ್ರತಿಭಟನೆಕಾರರನ್ನು ಬೆಂಡೆತ್ತಿದ್ದಾರೆ.

ಕಾರ್ಯಕರ್ತರು ಮತ್ತು ಆಟೋ ಚಾಲಕರ ನಡುವೆ ತೀವ್ರ ವಾಗ್ಯುದ್ದ ನಡೆದಿದೆ. ಅಷ್ಟರಲ್ಲಿ ಸಾರ್ವಜನಿಕರೂ ಪ್ರತಿಭಟನಾಕಾರರಿಗೆ ಬಿಸಿ ಮುಟ್ಟಿಸಿದಾಗ, ಭಾರತ್ ಮಾತಾ ಕೀ ಜೈ, ಮೋದಿ..ಮೋದಿ.. ಘೋಷಣೆ ಮುಗಿಲುಮುಟ್ಟಿದೆ. ಪೊಲೀಸರು, ಆಟೋ ಚಾಲಕರು ಮತ್ತು ಸಾರ್ವಜನಿಕರನ್ನು ಸಮಾಧಾನ ಪಡಿಸಿ, ಪ್ರತಿಭಟನಾಕಾರರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.
ಇನ್ನು, ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಲವಂತವಾಗಿ ಬಂದ್ ಮಾಡಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡೆಯನ್ನು ಪ್ರಶ್ನಿಸಿದ ಮಹಿಳೆಯೊಬ್ಬರನ್ನು ಕಾರ್ಯಕರ್ತರು ಥಳಿಸಿದ ಅಮಾನವೀಯ ಘಟನೆಯೂ ವರದಿಯಾಗಿದೆ.
ಬಲವಂತದ ಬಂದ್ ನಡೆಸಲಾಗುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಎಸ್ಪಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದಾಗ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಡ್ರಾಮವೇ ನಡೆದು, ಮಾರಾಮಾರಿಯಾಗಿದ್ದರಿಂದ ಮೂವರಿಗೆ ಗಾಯಗಳಾಗಿವೆ. ಉಡುಪಿ ಘಟಕದ ಬಿಜೆಪಿ ಅಧ್ಯಕ್ಷರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.












Click it and Unblock the Notifications