ಸಹಾಯಕ ಧರ್ಮಗುರು ಮಹೇಶ್ ಸಾವು ಪ್ರಕರಣದ ತನಿಖೆಗಾಗಿ ಭಾರೀ ಪ್ರತಿಭಟನೆ
ಉಡುಪಿ, ನವೆಂಬರ್ 3: ಉಡುಪಿಯ ಶಿರ್ವದಲ್ಲಿ ಕೆಲ ದಿನಗಳ ಹಿಂದೆ ಸಹಾಯಕ ಧರ್ಮಗುರು ಮಹೇಶ್ ಡಿಸೋಜಾ ಅವರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ತೀವ್ರಗೊಂಡಿದೆ. ಶಿರ್ವ ದೇವಾಲಯದ ವಠಾರದಲ್ಲಿ ಭಾನುವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ಬಿಷಪ್ ಆವರ ಮನವಿಗೂ ಕಿವಿಗೊಡದೆ ಕೆಲಕಾಲ ಪ್ರತಿಭಟನೆಯನ್ನು ಮುಂದುವರಿಸಿದರು. ಫಾ. ಮಹೇಶ್ ಡಿಸೋಜಾ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದ ಕ್ರೈಸ್ತರು, ಭಾನುವಾರ ಬೆಳಗ್ಗೆ ಬಿಷಪ್ ಅವರ ಜತೆಗೂಡಿ ಸಭೆ ನಡೆಸುವುದೆಂದು ನಿರ್ಧರಿಸಿದ್ದರು.
ಆದರೆ, ಸಮಯಕ್ಕೆ ಸರಿಯಾಗಿ ಸಭೆ ಆರಂಭವಾಗದ ಕಾರಣಕ್ಕೆ ಪ್ರತಿಭಟನಾಕಾರರ ಆಕ್ರೋಶ ಸ್ಫೋಟಗೊಂಡಿತು. ಮಕ್ಕಳು, ಯುವಜನರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯದ ವ್ಯಾಪ್ತಿಯ ಭಕ್ತಾಭಿಮಾನಿಗಳು ಮಾತ್ರವಲ್ಲದೆ, ಫಾ. ಮಹೇಶ್ ಡಿಸೋಜಾ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕೊನೆಗೂ ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದ ಬಿಷಪ್, ನಿಮಗೆ ಎಷ್ಟು ನೋವಾಗಿದೆಯೋ ಅಷ್ಟೇ ನನಗೂ ನೋವಾಗಿದೆ. ನಿಮ್ಮ ದುಃಖದಲ್ಲಿ ನಾನೂ ಭಾಗಿಯಾಗುತ್ತೇನೆ. ಫಾ. ಮಹೇಶ್ ಡಿಸೋಜಾ ಆವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಇದೊಂದು ಕೊಲೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.












Click it and Unblock the Notifications