ಶಿಷ್ಯ ಸ್ವೀಕಾರ: ಮಹತ್ವದ ನಿರ್ಧಾರಕ್ಕೆ ಬಂದ ಉಡುಪಿ ಅಷ್ಟಮಠಗಳು
ಪೇಜಾವರ ಹಿರಿಯ ಶ್ರೀಗಳ ಪಂಚಮ ಪರ್ಯಾಯ ಮುಗಿಯುತ್ತಿದ್ದಂತೇ ಆರಂಭವಾದ ಶಿರೂರು Vs ಇತರ ಉಡುಪಿ ಅಷ್ಟಮಠಾಧೀಶರ ಶೀತಲ ಸಮರಕ್ಕೆ ಈಗ ಮತ್ತೊಂದು ವಿಷಯ ಸೇರ್ಪಡೆಯಾಗಿದೆ.
ಶ್ರೀಕೃಷ್ಣ ಪೂಜಾಕೈಂಕರ್ಯ ನಡೆಸುವ ಉಡುಪಿ ಅಷ್ಟಮಠಗಳಿಗೆ ದ್ವಂದ್ವ ಮಠ ಮತ್ತು ಪ್ರತೀ ಮಠಗಳಿಗೂ ಶಿಷ್ಯರು ಇರಬೇಕಾದ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಪದ್ದತಿಗೆ ಅಪವಾದ ಎನ್ನುವಂತೆ ಶಿರೂರು ಶ್ರೀಗಳು ಇದುವರೆಗೂ ತಮ್ಮ ಮಠಕ್ಕೆ ಶಿಷ್ಯರನ್ನು ನೇಮಿಸಿಲ್ಲ.
ಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆ
ಶಿರೂರು ಶ್ರೀಗಳು, ಕಳೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿ, ಸ್ವಲ್ಪದಿನ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು. ಈ ವೇಳೆ, ಶಿರೂರು ಶ್ರೀಗಳದ್ದು ಎನ್ನಲಾಗುವ ವಿಡಿಯೋ ಒಂದು ಬಹಿರಂಗಗೊಂಡಿತ್ತು. ಅದರಲ್ಲಿ ಉಡುಪಿಯ ಎಲ್ಲಾ ಅಷ್ಟಮಠದ ಪೀಠಾಧಿಪತಿಗಳಿಗೂ ಸಂಸಾರವಿದೆ, ಮಕ್ಕಳಿದೆ ಎನ್ನುವ ಸಂಭಾಷಣೆಯಿತ್ತು.
ಇದಕ್ಕೂ ಮೊದಲು ಕೃಷ್ಣಮಠದ ಆವರಣದ ಹೊರಗಿರುವ ಪಾರ್ಕಿಂಗ್ ಪ್ರದೇಶದಲ್ಲಿ ಅಕ್ರಮ ನಡೆಯುತ್ತಿದೆ ಎಂದು, ಅಲ್ಲಿದ್ದ ಎಲ್ಲಾ ಅಂಗಡಿಗಳನ್ನು ತಾನೇ ಖುದ್ದು ನಿಂತು ಶಿರೂರು ಶ್ರೀಗಳು ನೆಲಸಮ ಮಾಡಿಸಿದ್ದರು. ಅಕ್ರಮ ಪೇಜಾವರ ಮಠದ ಶಿಷ್ಯವೃಂದದಿಂದ ನಡೆಯುತ್ತಿದೆ ಎಂದು ಶಿರೂರು ಶ್ರೀಗಳು ನೇರವಾಗಿ ಆರೋಪಿಸಿದ್ದರು.
ಉಡುಪಿ ಶ್ರೀಕೃಷ್ಣಮಠ ಮತ್ತು ಮಠದ ಪೀಠಾಧಿಪತಿಗಳ ಹಿನ್ನೆಲೆ
ಮೊದಲೇ ಅಷ್ಟಮಠಾಧೀಶರೊಳಗೆ ಶೀತಲ ಸಮರ ನಡೆಯುತ್ತಿದೆ ಎನ್ನುವ ಸುದ್ದಿಯ ನಡುವೆ, ಲೀಕ್ ಆದ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡುವಂತೆ ಶಿರೂರು ಶ್ರೀಗಳಿಗೆ ನೋಟಿಸ್ ನೀಡುವ ತೀರ್ಮಾನಕ್ಕೆ ಬಂದು ಅಂತೆಯೇ ನೋಟಿಸ್ ಜಾರಿ ಮಾಡಲಾಗಿತ್ತು. ಜೊತೆಗೆ, ಶ್ರೀಗಳ ವಿರುದ್ದ ಸೂಕ್ತ ಕ್ರಮತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಈಗ ಶಿಷ್ಯ ಸ್ವೀಕಾರದ ವಿಚಾರದಲ್ಲಿ, ಅಷ್ಟಮಠದ ಯತಿಗಳು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ, ಮುಂದೆ ಓದಿ..
ಶಿರೂರು ಮಠದ ಪಟ್ಟದದೇವರನ್ನು ಹಸ್ತಾಂತರಿಸುವ ನಿರ್ಧಾರ
ಮೂವರು ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಉಡುಪಿ ಅಷ್ಟಮಠಾಧೀಶರು ಇತ್ತೀಚೆಗೆ ಸಭೆ ಸೇರಿ, ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಶಿರೂರು ಶ್ರೀಗಳಿಗೆ ಷರತ್ತನ್ನು ವಿಧಿಸಿ, ಶಿಷ್ಯ ಸ್ವೀಕಾರದ ನಂತರವೇ, ಶಿರೂರು ಮಠದ ಪಟ್ಟದದೇವರನ್ನು ಅವರಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಬರಲಾಗಿದೆ. ಶಿರೂರು ಶ್ರೀಗಳ ಪಟ್ಟದದೇವರು ಸದ್ಯ ಅದಮಾರು ಮಠದ ಕಿರಿಯ ಶ್ರೀಗಳ ಬಳಿಯಿದೆ.
ಮಠದ ಪಟ್ಟದದೇವರು ಅದಮಾರು ಮಠದ ಕಿರಿಯ ಶ್ರೀಗಳ ಬಳಿ
ಅನಾರೋಗ್ಯದ ಹಿನ್ನಲೆಯಲ್ಲಿ ಶಿರೂರು ಶ್ರೀಗಳು ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲಿ ದೈನಂದಿನ ಪೂಜೆಗಾಗಿ ಮಠದ ಪಟ್ಟದದೇವರನ್ನು ಅದಮಾರು ಮಠದ ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದ್ದರು. ಈಗ ಶಿರೂರು ಶ್ರೀಗಳಿಗೆ ದೇವರನ್ನು ಮರಳಿ ನೀಡಬೇಕಾದರೆ ಶಿಷ್ಯರನ್ನು ಸ್ವೀಕರಿಸಿದ ನಂತರ ವಾಪಸ್ ನೀಡಲು ಅಷ್ಟಮಠಾಧೀಶರು ನಿರ್ಧರಿಸಿದ್ದಾರೆ.
ಕಾನೂನು ಹೋರಾಟದ ಮೊರೆ ಹೋಗುವುದಾಗಿ ಎಚ್ಚರಿಕೆ
ತಮ್ಮ ಆರೋಗ್ಯ ಸುಧಾರಿಸಿದ ನಂತರ, ದೇವರನ್ನು ಮರಳಿ ನೀಡುವಂತೆ ಶಿರೂರು ಶ್ರೀಗಳು ಹತ್ತುದಿನಗಳ ಕೆಳಗೆ ಅದಮಾರು ಶ್ರೀಗಳಲ್ಲಿ ಕೇಳಿದ್ದರು. ಆದರೆ, ಪಟ್ಟದದೇವರು ಮಠಕ್ಕೆ ವಾಪಸ್ ಬರದ ಹಿನ್ನಲೆಯಲ್ಲಿ, ಸಿಟ್ಟಾಗಿರುವ ಶಿರೂರು ಶ್ರೀಗಳು ಕಾನೂನು ಹೋರಾಟದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಶಿಷ್ಯ ಸ್ವೀಕಾರದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರದ ಶಿರೂರು ಶ್ರೀಗಳು
ಈ ಎಲ್ಲಾ ಬೆಳವಣಿಗೆಗಳ ನಡುವೆ, ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡುವ ತನಕ, ಮಠದ ಪಟ್ಟದದೇವರಿಗೆ ಕೃಷ್ಣಮಠದಲ್ಲೇ ಪೂಜೆ ಸಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಶಿಷ್ಯ ಸ್ವೀಕಾರದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರದ ಶಿರೂರು ಶ್ರೀಗಳು, ಮುಂದೆ ನೋಡೋಣ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಪರ್ಯಾಯ ಅನ್ನುವುದು ದುಡ್ಡುಮಾಡಲು ಇರುವಂತದ್ದು
'ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿರುತ್ತೇವೆ. ನಮಗೂ ಆಸೆ ಅನ್ನೋದು ಇರುವುದಿಲ್ಲವೇ? ನನಗೆ ಮಕ್ಕಳು ಇರುವುದು ಹೌದು, ಇದೇನು ಹೊಸದಲ್ಲ. ಉಡುಪಿ ಅಷ್ಟಮಠದ ಇತರ ಯತಿಗಳಿಗೂ ಮಕ್ಕಳಿದ್ದಾರೆ. ಕೆಲವರಿಗೆ ನಾಲ್ಕೈದು ಮಕ್ಕಳಿದ್ದಾರೆ. ಪರ್ಯಾಯ ಅನ್ನುವುದು ದುಡ್ಡುಮಾಡಲು ಇರುವಂತದ್ದು' ಎಂದು ಶಿರೂರು ಶ್ರೀಗಳದ್ದು ಎನ್ನಲಾಗುವ ವಿಡಿಯೋ ಭಾರೀ ಸಂಚಲನ ಮೂಡಿಸಿತ್ತು.