ಮೋದಿ ವಿರುದ್ಧ ಫೇಸ್ ಬುಕ್ ಸಮರಕ್ಕೆ ವಿರಾಮ: ಕಾಪುವಿನಲ್ಲಿ ಅನುಪಮಾ
ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಹೆಸರು ಕೇಳದವರೇ ಇಲ್ಲ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಆಳುವ ಪಕ್ಷದ ಮಂತ್ರಿಯನ್ನೇ ಎದುರು ಹಾಕಿಕೊಂಡಾಕೆ ಅನುಪಮಾ. ವರ್ಷದ ಹಿಂದೆ ಆಗ ಸಚಿವರಾಗಿದ್ದ ಪರಮೇಶ್ವರ್ ನಾಯಕ್ ಜೊತೆ ಅನುಪಮಾ ಶಣೈ ಜಗಳ ಮಾಡಿಕೊಂಡಿದ್ದು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು.
ಮಾತ್ರವಲ್ಲ, ಕಾಂಗ್ರೆಸ್ ಸರಕಾರದ ಸಚಿವರು ಪೊಲೀಸ್ ಇಲಾಖೆಯಲ್ಲಿ ಮೂಗು ತೂರಿಸುತ್ತಾರೆ, ದಕ್ಷ ಹೆಣ್ಣು ಮಕ್ಕಳನ್ನು ಕರ್ತವ್ಯ ಮಾಡಲು ಬಿಡುವುದಿಲ್ಲ ಎಂಬ ಆರೋಪವೂ ಆಗ ಕಾಂಗ್ರೆಸ್ ಸರಕಾರದ ವಿರುದ್ಧ ಕೇಳಿ ಬಂದಿತ್ತು. ಮುಂದೆ ಈ ಹೆಣ್ಣು ಮಗಳು ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿದ್ದು ಇತಿಹಾಸ.
ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅನುಪಮಾ ಶೆಣೈ ಈಗ ಖಾದಿ ಧರಿಸಿ ರಾಜಕಾರಣಿಗಳಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಸ್ವಕ್ಷೇತ್ರ ಕಾಪುವಿನಿಂದ ಕಣಕ್ಕಿಳಿಯಲಿದ್ದಾರೆ. ಶೆಣೈ ಸ್ಥಾಪಿಸಿದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸುಮಾರು 60 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದು, ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಗೆ ತಕ್ಕಪಾಠ ಕಲಿಸುತ್ತೇವೆ ಅನ್ನೋ ವಿಶ್ವಾಸದಲ್ಲಿದೆ.
ಅನುಪಮಾ ಶೆಣೈ, ಜನ್ಮಸ್ಥಳ ಉಡುಪಿ ಜಿಲ್ಲೆಯಾದರೂ ಕಾರ್ಯಕ್ಷೇತ್ರ ಬಳ್ಳಾರಿಯಲ್ಲೇ ಅನುಪಮಾ ಫೇಮಸ್ಸು. ಹಾಗಾಗಿ ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಊಹಾಪೋಹ ಇತ್ತು. ಆದರೆ ಸದ್ಯ ಅವರು ತನ್ನ ತವರೂರು ಕಾಪು ಕ್ಷೇತ್ರದಿಂದಲೇ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಆರಂಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಾಗ, ಅನುಪಮಾ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ನಾನು ಬಿಜೆಪಿ ಅಲ್ಲ ಅಂತ ತೋರಿಸಿಕೊಳ್ಳೋಕೆ, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದರು.
ಇದೇ ಕಾರಣಕ್ಕೆ ಮೋದಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳಿಗೆ, ಸೆರಗಿನಲ್ಲಿಟ್ಟ ಕೆಂಡದ ಥರ ಕಾಟ ಕೊಡ್ತೇನೆ ನೋಡ್ತಾ ಇರಿ ಅಂತಾರೆ ಅನುಪಮಾ. ಮುಂದೆ ಓದಿ..

ಪ್ರಧಾನಿ ಮೋದಿ ವಿರುದ್ಧದ ಫೇಸ್ ಬುಕ್ ಸಮರಕ್ಕೆ ಅಲ್ಪ ವಿರಾಮ
ಪ್ರಧಾನಿ ಮೋದಿ ವಿರುದ್ಧದ ಫೇಸ್ ಬುಕ್ ಸಮರಕ್ಕೆ ಅಲ್ಪ ವಿರಾಮ ಘೋಷಿಸಿರುವ ಅನುಪಮಾ ವಿಧಾನ ಸಭಾ ಚುನಾವಣೆಯನ್ನು ಮುಂದಿನ ಗುರಿಯಾಗಿ ಇರಿಸಿಕೊಂಡಿದ್ದಾರೆ. 'ಬೆಂಡೆ ಕಾಯಿ' ಇವರ ಪಕ್ಷದ ಅಧಿಕೃತ ಚಿಹ್ನೆಯಾಗಿದ್ದು, ರಾಜಕಾರಣಿಗಳನ್ನು ಬೆಂಡೆತ್ತುತ್ತೇನೆ ನೋಡ್ತಾ ಇರಿ ಅನ್ನೋ ವಿಶ್ವಾಸದ ಮಾತನಾಡ್ತಾರೆ.

ಕರಾವಳಿಯಲ್ಲಿ ಅಭಿಮಾನಿಗಳ ಸಂಖ್ಯೆಯೂ ಏನೇನೂ ಇಲ್ಲ.
ಆದರೆ ಕಾಪು ಕ್ಷೇತ್ರ ಹುಟ್ಟೂರಾದರೂ ಇಲ್ಲಿ ಅವರ ಜನಪ್ರಿಯತೆ ಕಮ್ಮಿ. ಉತ್ತರಕರ್ನಾಟಕ ಭಾಗಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಅವರ ಅಭಿಮಾನಿಗಳ ಸಂಖ್ಯೆಯೂ ಏನೇನೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯನ್ನು 'ಫಕೀರ' ಎಂದು ಕರೆದ ನಂತರವಂತೂ ಕಾಂಗ್ರೆಸ್ ವಿರೋಧಿ ಯುವ ಜನಾಂಗ ಕೂಡಾ ಅನುಪಮಾರಿಗೆ ಬೆನ್ನು ಮಾಡಿದೆ.

ಅನುಪಮಾ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಂತೂ ಅನುಪಮಾ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಾಪುವಿನ ಹಾಲಿ ಶಾಸಕ ಈ ಹಿಂದೆ ನಗರಾಭಿವೃದ್ಧಿ ಮಂತ್ರಿಯಾಗಿದ್ದರು. ಕಾಪುವನ್ನು ಪುರಸಭೆ ಮಾಡಿದ್ದಲ್ಲದೇ ತಾಲೂಕು ಕೇಂದ್ರವಾಗಿಯೂ ಘೋಷಿಸಿದ್ದು ವಿನಯಕುಮಾರ್ ಸೊರಕೆಯವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಬಿಲ್ಲವ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
ಜೊತೆಗೆ ಸೊರಕೆ, ಬಲಿಷ್ಠ ಬಿಲ್ಲವ ಸಮುದಾಯಕ್ಕೆ ಸೇರಿದವರು.ಈ ಕ್ಷೇತ್ರದಲ್ಲಿ ಬಿಲ್ಲವ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದು ಬಿಟ್ಟರೆ ಮೊಗವೀರ ಸಮುದಾಯವದ ಜನ, ಮೊಗವೀರ ಸಮುದಾಯದ ಲಾಲಾಜಿ ಮೆಂಡನ್ ಪರ ಇದ್ದಾರೆ. ಲಾಲಾಜಿ ಮೆಂಡನ್ ಬಹುತೇಕ ಬಿಜೆಪಿ ಅಭ್ಯರ್ಥಿಯಾಗುವ ಹಾದಿಯಲ್ಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಯ ನೇರ ಹಣಾಹಣಿಯ ಕ್ಷೇತ್ರ.

ಅನುಪಮಾ ಶಣೈ ಗೆ ಇಲ್ಲಿ ಸಮದಾಯದ ಬೆಂಬಲವೂ ತುಂಬ ಕಡಿಮೆ
ಇನ್ನು ಜಿಎಸ್ ಬಿ ಸಮುದಾಯಕ್ಕೆ ಸೇರಿದ ಅನುಪಮಾ ಶಣೈ ಗೆ ಇಲ್ಲಿ ಸಮದಾಯದ ಬೆಂಬಲವೂ ತುಂಬ ಕಡಿಮೆ. ರಾಜ್ಯದಲ್ಲೂ ಅನುಪಮಾ ಹವಾ ಈಗ ಕಡಿಮೆಯಾಗಿದೆ. ರಾಜಕಾರಣದ ಪಟ್ಟುಗಳು ಇವರಿಗಿನ್ನೂ ಹೊಸತು, ಸ್ವಕ್ಷೇತ್ರದಲ್ಲಾದರೂ ಒಂದಿಷ್ಟು ಮತಗಳಿಸಿ ತೋರಿಸಿದರೆ, ಅಂದು ಸರ್ಕಾರದ ವಿರುದ್ದ ಬಂಡೆದ್ದದ್ದು ಸಾರ್ಥಕ ಎನ್ನಬಹುದು. ಒಟ್ಟಾರೆ ಮೇ ಹದಿನೈದನೇ ತಾರೀಕಿನಂದು ಅನುಪಮಾ ಶೆಣೈ ರಾಜಕೀಯ ಭವಿಷ್ಯ ನಿರ್ಧಾರವಾಗಬಹುದು.












Click it and Unblock the Notifications