ಉದ್ಯಾವರದಲ್ಲಿ ಅಪಾಯಕಾರಿ ಮೆಲಿಯೊಯಿಡೊಸಿಸ್ ಜ್ವರಕ್ಕೆ ವಿದ್ಯಾರ್ಥಿ ಬಲಿ
ಉಡುಪಿ, ಆಗಸ್ಟ್ .05: ತೀವ್ರ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಕಳವಳಕಾರಿ ಸಂಗತಿ ವರದಿಯಾಗಿದೆ. ಉದ್ಯಾವರ ಪಂಚಾಯತ್ ವ್ಯಾಪ್ತಿಯ ಕಲಾಯಿ ಬೈಲು ಗೋವಿಂದ ನಗರದ ಜಯ ಮತ್ತು ಪ್ರತಿಭಾ ಕುಂದರ್ ಅವರ ಮಗ ದೀಕ್ಷಿತ್ ಮೆಲಿಯೊಯಿಡೊಸಿಸ್(Melioidosis ) ಎಂಬ ಅಪಾಯಕಾರಿ ಜ್ವರದಿಂದ ಬಳಲಿ ಸಾವಪ್ಪಿದ್ದಾನೆ.
ಬುರ್ಕೊಲ್ಡೇರಿಯಾ ಸೆಡೋಮೊನಸ್(Burkholderia) ಎಂದು ಗುರುತಿಸಲಾದ ನೆಲ ಮತ್ತು ನೀರಿನಲ್ಲಿರುವ ಬ್ಯಾಕ್ಟೀರಿಯಾದಿಂದ ಈ ಜ್ವರ ಹರಡುತ್ತದೆ. ಥೈಲ್ಯಾಂಡ್, ವಿಯೆಟ್ನಾಂ, ಉತ್ತರ ಅಮೇರಿಕ ಮುಂತಾದೆಡೆ ಮೆಲಿಯೊಡೊಸಿಸ್ ಜ್ವರ ಸಾಮಾನ್ಯವಾಗಿದ್ದರೂ ನಮ್ಮಲ್ಲಿ ತೀರಾ ವಿರಳ ಎನ್ನಲಾಗಿತ್ತು.
ಆದರೆ ಇದೇ ಜ್ವರದಿಂದ ಬಾಲಕ ದೀಕ್ಷಿತ್ ಸಾವಪ್ಪಿದ್ದಾನೆ ಎಂದು ದೆಹಲಿಯ ಎನ್ಸಿಡಿಸಿ ವೈದ್ಯ ಡಾ. ಅಖಿಲೇಶ್ ನೇತೃತ್ವದ ವೈದ್ಯರ ತಂಡವು ಅಧ್ಯಯನದಿಂದ ತಿಳಿದುಬಂದಿದೆ.

ರೋಗ ಪತ್ತೆ ವಿಳಂಬ ಮತ್ತು ಸೂಕ್ತ ರೋಗ ನಿರೋಧಕ ಚಿಕಿತ್ಸೆ ಸಕಾಲದಲ್ಲಿ ಲಭಿಸದೆ ಇರುವುದರಿಂದ ಮೆದುಳಿಗೆ ಹಾನಿಯಾಗಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆರೋಗ್ಯ ಇಲಾಖೆಯು ಬಾಲಕನ ಮನೆ, ಪರಿಸರದ ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಿಸಿ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ ಮೂಲ ಪತ್ತೆಹಚ್ಚುವ ಕೆಲಸವನ್ನು ಎರಡು ದಿನಗಳಿಂದ ಮಾಡುತ್ತಿದೆ.
ದೀಕ್ಷಿತ್ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಎಂಐಟಿ ಸೇರ್ಪಡೆ ಅವಕಾಶ ಪಡೆದಿದ್ದ. ದೀಕ್ಷಿತ್ ಅವರಿಗೆ ಬಂದಿದ್ದ ಜ್ವರ ಸಾಂಕ್ರಾಮಿಕ ಕಾಯಿಲೆಯಾಗಿರದೆ, ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ ಮಾತ್ರ ಗುಣಪಡಿಸಬಹುದಾಗಿದೆ ಎಂಬುದು ಗಮನಾರ್ಹ.












Click it and Unblock the Notifications