ಕುಂದಾಪುರ ವ್ಯಕ್ತಿಯಿಂದ ಅಪರೂಪದ ನೀಲಿ ತಲೆ ಗಿಳಿ ವಶಕ್ಕೆ!
ಉಡುಪಿ, ಜನವರಿ 17 : ಪಶ್ಚಿಮ ಘಟ್ಟಗಳಲ್ಲಿ ಅಪರೂಪವಾಗಿ ಕಂಡು ಬರುವ ಹಾಗೂ ವಿನಾಶದ ಅಂಚಿನಲ್ಲಿರುವ ನೀಲಿ ಬಣ್ಣದ ಗಿಳಿಯೊಂದನ್ನು ಇಟ್ಟುಕೊಂಡು ಗಿಳಿ ಶಾಸ್ತ್ರ ಹೇಳುತ್ತಾ ಜೀವನ ಸಾಗಿಸುತ್ತಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು, ಆತನಿಂದ ಗಿಳಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ತೀರಾ ಅಪರೂಪವೆಂದು ಹೇಳಬಹುದಾದ ಈ ಗಿಳಿಯು, ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಮೊದಲು ಹೆಚ್ಚಾಗಿ ಕಂಡುಬರುತ್ತಿತ್ತು ಎಂದು ಇಲ್ಲಿನ ಹಿರಿತಲೆಗಳು ಹೇಳುತ್ತಾರೆ.
ಇತ್ತೀಚೆಗೆ, ಉಡುಪಿಯಲ್ಲಿರುವ ಕೆಲವಾರು ತಿಂಗಳುಗಳಿಂದ ಬೀಡುಬಿಟ್ಟಿದ್ದ ವ್ಯಕ್ತಿಯೊಬ್ಬ ತನ್ನಲ್ಲಿದ್ದ ಈ ನೀಲಿ ಬಣ್ಣದ ಗಿಳಿಯ ಮೂಲಕ ಗಿಳಿಶಾಸ್ತ್ರ ಹೇಳುತ್ತಿದ್ದಾನೆಂಬ ಮಾಹಿತಿ ಅಧಿಕಾರಿಗಳಿಗೆ ಇತ್ತೀಚೆಗೆ ಸಿಕ್ಕಿತ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಮಾಹಿತಿ ಮೇರಿಗೆ ಕುಂದಾಪುರ ಅರಣ್ಯ ವಲಯದ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಹಾಗೂ ಗುರುರಾಜ್ ಅವರುಳ್ಳ ತಂಡ ಕಾರ್ಯಾಚರಣೆ ನಡೆಸಿದ ಆತನನ್ನು ಬಂಧಿಸಿದ್ದಾರೆ.
ಆತನಿಂದ ವಶಪಡಿಸಿಕೊಂಡ ಗಿಳಿಯನ್ನು ಮಂಗಳೂರಿನ ವಾಮಂಜೂರಿನಲ್ಲಿರುವ ಪಿಲಿಕುಳಕ್ಕೆ ವನ್ಯಜೀವಿ ಧಾಮಕ್ಕೆ ಬಿಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕೊಟ್ಟಿಲ್ಲ.
ಆ ಗಿಳಿಯ ಪ್ರಬೇಧ ಹಾಗೂ ಅದರ ಮಹತ್ವ, ಗಿಳಿ ಶಾಸ್ತ್ರದ ವ್ಯಕ್ತಿಗೆ ಆ ಗಿಳಿ ಸಿಕ್ಕ ಬಗೆ ಮುಂದಿನ ತನಿಖೆಯಲ್ಲಿ ಬಹಿರಂಗಗೊಳ್ಳಲಿದೆ ಎನ್ನಲಾಗಿದೆ.