ಗುರುವಂದನೆ: ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳ ಸನ್ಯಾಸ ಸ್ವೀಕಾರಕ್ಕೆ 80
ಹಿಂದೂ ಧರ್ಮ ಪ್ರಚಾರ, ದಲಿತರ ಕೇರಿ, ನೆರೆಪೀಡಿತರ ಮನೆಗೆ ಭೇಟಿ.. ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು, ಪಾದರಸದಂತೆ ಜನತಾ ಜನಾರ್ಧನ ಸೇವೆಗೆ ಧಾವಿಸುವ ಪೂಜ್ಯ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿಕೊಂಡು ಎಂಬತ್ತು ಸಂವತ್ಸರಗಳಾದವು.
ಶ್ರೀಗಳು ಸನ್ಯಾಸ ಸ್ವೀಕರಿಸಿ ಎಂಬತ್ತು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ಉಡುಪಿಯಲ್ಲಿ ಗುರುವಾರ (ಡಿ 27) ನಡೆಯತ್ತಿದೆ.ರಾಷ್ಟಪತಿ, ರಾಜ್ಯಪಾಲರು, ಶ್ರೀಗಳ ಶಿಷ್ಯೆ ಉಮಾಭಾರತಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
"ಕೃಷ್ಣನನ್ನು ಐದು ಬಾರಿ ಪರ್ಯಾಯದ ಮೂಲಕ ಆರಾಧಿಸಲು ಸಿಕ್ಕಿದ್ದು ನನ್ನ ಜೀವನದ ಅತಿದೊಡ್ಡ ಪುಣ್ಯ. ಕೃಷ್ಣನ ಸೇವೆ ಹೇಗೆ ನನಗೆ ಮುಖ್ಯವೋ, ಜನರ ಸೇವೆಯೂ ನನಗೆ ಅಷ್ಟೇ ಮುಖ್ಯ" ಎಂದು ಪೇಜಾವರ ಶ್ರೀಗಳು ಆಶೀರ್ವಚನ ನೀಡುತ್ತಾ ಈ ಸಂದರ್ಭದಲ್ಲಿ ಹೇಳಿದ್ದು.
ವಯಸ್ಸು 87 ಆದರೂ, ಯುವಕರು ನಾಚುವಂತೆ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಗಳಿಗೆ ವಂದಿಸುತ್ತಾ, ಅವರು ನಡೆದು ಬಂದ ಮತ್ತು ತಮ್ಮನ್ನು ತೊಡಗಿಸಿಕೊಂಡ ಸನ್ಮಾರ್ಗದ ಒಂದು ಕಿರು ಪರಿಚಯ.
87ರ ಹರೆಯದ ಪೇಜಾವರ ಶ್ರೀಗಳಿಗೆ ಕೃಷ್ಣಮಠದಲ್ಲಿ ಗುರುವಂದನೆ
ಉಡುಪಿಯಿಂದ 100 ಕಿ.ಮೀ ದೂರದಲ್ಲಿರುವ ರಾಮಕುಂಜ ಎನ್ನುವ ಗ್ರಾಮದಲ್ಲಿ ಏಪ್ರಿಲ್ 27, 1931ರಂದು ಜನಿಸಿದ ಪೇಜಾವರ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ. ತಮ್ಮ ತಂದೆ-ತಾಯಿಯ ಜೊತೆಗೆ ಉಡುಪಿಗೆ ಆಗಮಿಸಿದ್ದಾಗ, ಅಂದಿನ ಯತಿಗಳಾಗಿದ್ದ ವಿಶ್ವಮಾನ್ಯ ತೀರ್ಥರು, ವೆಂಕಟರಮಣನನ್ನು ನೋಡಿ, ಸನ್ಯಾಸತ್ವ ಸ್ವೀಕರಿಸುವಂತೆ ಕೇಳಿದರು. ಅದರಂತೇ, ಡಿಸೆಂಬರ್ 3, 1938ರಂದು ಹಂಪೆಯ ಮುಖ್ಯಪ್ರಾಣನ ಸನ್ನಿಧಾನದಲ್ಲಿ ಸನ್ಯಾಸ ದೀಕ್ಷೆ ನೀಡಲಾಯಿತು.
ರಾಮಕುಂಜ ಎನ್ನುವ ಪುಟ್ಟ ಹಳ್ಳಿಯ ಎಂಟರ ಬಾಲ್ಯದ ಬಾಲಕ, ಪೇಜಾವರ ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ವೆಂಕಟರಮಣ 'ವಿಶ್ವೇಶತೀರ್ಥ'ರಾದರು. ಪಲಿಮಾರು ಮಠದ ವಿದ್ಯಾಮಾನ್ಯ ತೀರ್ಥರಲ್ಲಿ ವ್ಯಾಸಂಗಕ್ಕೆ ನಿಂತ ಪೇಜಾವರ ಶ್ರೀಗಳಿಗೆ, ಇನ್ನಷ್ಟು ಆಳವಾದ ಅಧ್ಯಯನವನ್ನು ನಡೆಸಲು ಭಂಡಾರಕೇರಿಯ ಗುರುಕುಲ ವಾಸ ಉತ್ತಮ ವಾತಾವರಣವನ್ನು ಒದಗಿಸಿತ್ತು.
ಪೇಜಾವರ ಶ್ರೀ ವಿಶ್ವೇಶ ತೀರ್ಥರ ಎಕ್ಸ್ ಕ್ಲೂಸಿವ್ ಸಂದರ್ಶನ
ಜನವರಿ 18, 1952ರಂದು, ಅಂದರೆ ತಮ್ಮ 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ಮಾಡಿದ ಶ್ರೀಗಳು, ಅನ್ನದಾನ - ಜ್ಞಾನದಾನಗಳಲ್ಲಿ ಸಾಟಿಯಿಲ್ಲದಂತೆ ಪರ್ಯಾಯವನ್ನು ನಡೆಸಿ ಸೈ ಎನಿಸಿಕೊಂಡಿದ್ದರು. ಜೊತೆಗೆ, ಮಾಧ್ವರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ ತಮ್ಮ ಮೊದಲ ಪರ್ಯಾಯದ ಅವಧಿಯಲ್ಲೇ ಮಾಧ್ವ ತತ್ವಜ್ಞಾನ ಸಮ್ಮೇಳನ ನಡೆಸಿದ ಕೀರ್ತಿ ಪೇಜಾವರ ಶ್ರೀಗಳದ್ದು.
ಬೆಂಗಳೂರಿನ ಕತ್ರಿಗುಪ್ಪೆ ರಸ್ತೆಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ
ಜುಲೈ 28, 1956ರಂದು ಬೆಂಗಳೂರಿನ ಕತ್ರಿಗುಪ್ಪೆ ರಸ್ತೆಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿದ ಪೇಜಾವರ ಶ್ರೀಗಳು, ನಿರಂತರವಾಗಿ ಶಾಸ್ತ್ರಾಧ್ಯಾಯನ ನಡೆಸುವ ಗುರುಕುಲದ ಮಾದರಿಯ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರವನ್ನು ತೆರೆದರು. ಅಲ್ಲಿಂದ ಇಲ್ಲಿಯ ವರೆಗೆ ವಿದ್ಯಾಪೀಠದಿಂದ ಕಲಿತು ಹೊರಬಂದ ಖ್ಯಾತ ವಿದ್ವಾಂಸರುಗಳು ಸಾವಿರಾರು.
ಗೀತಾ ಸಾರೋದ್ಧಾರ ಪುಸ್ತಕ ರೂಪದಲ್ಲಿ ಮೂಡಿಬಂತು
1968ರಂದು ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಭಗವದ್ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ 'ಗೀತಾ ಸಾರೋದ್ಧಾರ' ಪುಸ್ತಕ ರೂಪದಲ್ಲಿ ಮೂಡಿಬಂತು. ರಥಬೀದಿಯಲ್ಲಿ 'ಶ್ರೀಕೃಷ್ಣ ಚಿಕಿತ್ಸಾಲಯ'ವನ್ನು ತೆರೆದು, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಈ ಅವಧಿಯಲ್ಲಿ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. 'ಹಿಂದೂಗಳೆಲ್ಲ ಒಂದಾಗಿ ಬದುಕಬೇಕು' ಎನ್ನುವ ಸಂದೇಶವನ್ನು ಶ್ರೀಗಳು ಈ ವೇದಿಕೆಯಲ್ಲಿ ಸಾರಿದರು. ಈ ಅವಧಿಯಲ್ಲಿ ಬಡಗುಮಾಳಿಗೆಯನ್ನೂ ಶ್ರೀಗಳು ನಿರ್ಮಿಸಿದರು.
ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂದರ್ಶನ
ಮೂರನೇ ಪರ್ಯಾಯ ಅವಧಿ
ಇದಾದ ನಂತರ 1984-86ರ ಮೂರನೇ ಪರ್ಯಾಯ ಅವಧಿಯಲ್ಲಿ ಕೃಷ್ಣಧಾಮ ಎನ್ನುವ ಕಟ್ಟಡವನ್ನು, 2000-2002ರ ನಾಲ್ಕನೇ ಪರ್ಯಾಯ ಅವಧಿಯಲ್ಲಿ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಗಳು ಹಮ್ಮಿಕೊಂಡಿದ್ದರು. ವಾದಿರಾಜ ಗುರುಗಳ ನಂತರ, ಪಂಚಮ ಪರ್ಯಾಯವನ್ನು 2016-18ರ ಅವಧಿಯಲ್ಲಿ ಸಮರ್ಥವಾಗಿ ಮುಗಿಸಿದ ಶ್ರೀಗಳು ಎನ್ನುವ ಹೆಗ್ಗಳಿಕೆ ಪೇಜಾವರ ಶ್ರೀಗಳದ್ದು. ವಿಶ್ವಪ್ರಸನ್ನ ತೀರ್ಥರನ್ನು ತಮ್ಮ ಉತ್ತರಾಧಿಕಾರಿಯಾಗಿ ಪೇಜಾವರ ಹಿರಿಯ ಶ್ರೀಗಳು ನೇಮಿಸಿದರು.
ಜಾತಿಯಲ್ಲಿ ಶೂದ್ರನ ಮಗ ಸ್ವಭಾವದಲ್ಲಿ ಬ್ರಾಹ್ಮಣನಿರಬಹುದು
ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಪೇಜಾವರ ಶ್ರೀಗಳು, ಜಾತಿಯಲ್ಲಿ ಶೂದ್ರನ ಮಗ ಸ್ವಭಾವದಲ್ಲಿ ಬ್ರಾಹ್ಮಣನಿರಬಹುದು, ಜಾತಿಯಲ್ಲಿ ಬ್ರಾಹ್ಮಣನ ಮಗ ಸ್ವಭಾವದಲ್ಲಿ ಶೂದ್ರನಿರಬಹುದು ಎನ್ನುವ ನಿಲುವನ್ನು ತಾಳಿದ್ದವರು. ಹರಿಜನ ಕೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎದುರಾದ ಹತ್ತು ಹಲವು ಟೀಕೆಗಳನ್ನು ಸಮರ್ಥವಾಗಿ ನಿಭಾಯಿಸಿ ಟೀಕಾಕಾರರ ಬಾಯಿಮುಚ್ಚಿಸಿದ್ದರು.
ಯತಿ ಧರ್ಮದ ಯಾವ ನಿಯಮಗಳನ್ನೂ ಕೈ ಬಿಡಲಿಲ್ಲ
ಶ್ರೀಗಳು ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡಿದ್ದರೂ, ಯತಿ ಧರ್ಮದ ಯಾವ ನಿಯಮಗಳನ್ನೂ ಕೈ ಬಿಡದೇ, ಅಖಂಡವಾದ ಬ್ರಹ್ಮಚರ್ಯೆ, ಪಟ್ಟದದೇವರ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ ಇವರ ಸನ್ಯಾಸ ಜೀವನದ ಅವಿಭಾಜ್ಯ ಅಂಗದಂತೆ ನಡೆಯುತ್ತಿತ್ತು. 1978ರಂದು ಆಂಧ್ರದ ಜನತೆ ಚಂಡಮಾರುತದಿಂದ ತತ್ತರಿಸಿದಾಗ, 150ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಅಲ್ಲಿನ ಜನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರಬೇಕು ಎನ್ನುವ ವಿಚಾರ
ಉಡುಪಿಯ ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರಬೇಕು ಎನ್ನುವ ವಿಚಾರ ಮುನ್ನಲೆಗೆ ಬಂದಾಗ, ಅಷ್ಟಮಠಗಳ ಪರವಾಗಿ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿದ್ದ ಪೇಜಾವರ ಶ್ರೀಗಳು ತಮ್ಮ ಪಂಚಮ ಪರ್ಯಾಯ ಅವಧಿಯಲ್ಲಿ, ಮಠದ ಆವರಣದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ, ರಾಷ್ಟ್ರಮಟ್ಟದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದರು. ಶ್ರೀಗಳ ಈ ಸರ್ವಧರ್ಮ ಸಮಭಾವಕ್ಕೆ ಸ್ವಾಗತವೂ ಸಿಕ್ಕಿತು, ಪ್ರತಿರೋಧವೂ ವ್ಯಕ್ತವಾಯಿತು.
ಡಾ. ವೀರೇಂದ್ರ ಹೆಗ್ಗಡೆಯವರ ಒಡನಾಟ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದಂತ ಡಾ. ವೀರೇಂದ್ರ ಹೆಗ್ಗಡೆಯವರು ಹಲವು ಬಾರಿ ಹೇಳಿದ್ದುಂಟು. ಪೇಜಾವರ ಶ್ರೀಗಳ ಸಮಾಜಮುಖಿ ಕೆಲಸ ನನಗೆ ಯಾವತ್ತೂ ಪ್ರೇರಣೆ. ಅವರ ಒಡನಾಟ ಸಿಕ್ಕಿದ್ದು ನನ್ನ ಪುಣ್ಯ. ಪೇಜಾವರ ಶ್ರೀಗಳ ಸಮಾಜಮುಖಿ, ಧಾರ್ಮಿಕ ಕೆಲಸಗಳು ಇನ್ನು ಮುಂದೆಯೂ ಸಾಂಗವಾಗಿ ನೇರವೇರಿ,ಅವರ ಆಶೀರ್ವಾದ, ಮಾರ್ಗದರ್ಶನ ನಮ್ಮೆಲ್ಲರಿಗೂ ಸಿಗುವಂತಾಗಲಿ.