72ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದ ನೂತನ ಸಚಿವ ಎಸ್.ಅಂಗಾರ
ಉಡುಪಿ, ಜನವರಿ 26: ಉಡುಪಿ ಜಿಲ್ಲಾಡಳಿತದ ವತಿಯಿಂದ ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಬಳಿಕ ಗೃಹ ರಕ್ಷಕ ದಳದಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಪೊಲೀಸ್ ತಂಡಗಳಿಂದ ಧ್ವಜಾರೋಹಣದ ಬಳಿಕ ಆಕರ್ಷಕ ಪಥಸಂಚಲನ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72ನೇ ಗಣರಾಜ್ಯೋತ್ಸವ ಸಂಭ್ರಮ
ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಗಣರಾಜ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದ ಜನರನ್ನು ರಂಜಿಸಿದರು. ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿಯರು ನಡೆಸಿಕೊಟ್ಟ ನೃತ್ಯ ರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು.
ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ: ಅಂಗಾರ
ರಾಜ್ಯದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಕಸರತ್ತಿನ ಕುರಿತು ಮಾಧ್ಯಮದವರು ಸಚಿವರ ಗಮನ ಸೆಳೆದಾಗ, ನಾನು ಆರು ಬಾರಿ ಶಾಸಕನಾಗಿದ್ದರೂ, ನಾನ್ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಆರು ಅವಧಿಗೆ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಅಧಿಕಾರದ ಹಿಂದೆ ಹೋಗಿಲ್ಲ.ಈಗ ಅಧಿಕಾರ ನನ್ನ ಹಿಂದೆ ಬಂದಿದೆ ಎಂದು ಬಂದರು ಮತ್ತು ಮೀನುಗಾರಿಕಾ ನೂತನ ಸಚಿವ ಎಸ್.ಅಂಗಾರ ಹೇಳಿದರು.
ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇವತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ. ನನ್ನನ್ನು ಉಡುಪಿಗೆ ಉಸ್ತುವಾರಿ ಸಚಿವನನ್ನಾಗಿ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇವತ್ತು ಧ್ವಜಾರೋಹಣ ಮಾಡಲಷ್ಟೇ ಬಂದಿದ್ದೇನೆ ಎಂದರು.
ನಾನು ಸಂಘಟನೆಯಲ್ಲಿ ಬೆಳೆದು ಬಂದವನು, ನನಗೂ ಜವಾಬ್ದಾರಿ ಇದೆ. ಸರಕಾರಕ್ಕೆ ಸಹಕಾರ ನೀಡಬೇಕಾಗುತ್ತದೆ. ಮೀನುಗಾರಿಕೆ ಕುರಿತು ನನಗೆ ಮೊದಲು ತಿಳಿದುಕೊಳ್ಳಬೇಕಿದೆ ಎಂದ ಅವರು, ಇಲಾಖೆಯ ಕುರಿತು, ಮೀನುಗಾರಿಕೆ ಯೋಜನೆಗಳ ಕುರಿತು ಅಧ್ಯಯನ ಮಾಡಬೇಕಿದೆ.
ಅದಕ್ಕಿಂತ ಮೊದಲು ಬಂದರುಗಳಿಗೆ ಭೇಟಿ ನೀಡಿ, ಇಲಾಖೆ, ಮೀನುಗಾರರ ಸಮಸ್ಯೆಗಳು ಮತ್ತು ಕಾರ್ಯಯೋಜನೆಗಳ ಬಗ್ಗೆ ಮೊದಲು ತಿಳಿದುಕೊಂಡು ನಂತರ ಅದನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
Recommended Video