ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಇಳಿಸಿ, ಕಾರಿನಲ್ಲಿ ಕರೆದೊಯ್ದು 40 ಲಕ್ಷ ಮೌಲ್ಯದ ಚಿನ್ನ, ಎರಡೂವರೆ ಲಕ್ಷ ರು. ನಗದು ದರೋಡೆ ಮಾಡಿರುವ ಕಳ್ಳರು.
ಉಡುಪಿ, ಮಾರ್ಚ್ 18: ಚಿನ್ನದ ವ್ಯಾಪಾರಿಯೊಬ್ಬರನ್ನು ಬಲವಂತವಾಗಿ ಕರೆದೊಯ್ದು ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆಗೈದ ಘಟನೆ ಮಣಿಪಾಲ ಸಮೀಪದ ಈಶ್ವರ ನಗರದಲ್ಲಿ ನಡೆದಿದೆ.
ಕೇರಳದ ತ್ರಿಶೂರ್ ನಿವಾಸಿ ದಿಲೀಪ್ ದರೋಡೆಗೊಳಗಾದ ವ್ಯಾಪಾರಿ. ಇವರಲ್ಲಿದ್ದ ನಲವತ್ತು ಲಕ್ಷ ರೂ. ಮೌಲ್ಯದ ಚಿನ್ನ, ಎರಡೂವರೆ ಲಕ್ಷ ರೂ. ನಗದನ್ನು ದುಷ್ಕರ್ಮಿಗಳು ದರೋಡೆಗೈದಿದ್ದಾರೆ.
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದಿಲೀಪ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿ ಕಾರಿನಲ್ಲಿ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ. ಬಳಿಕ ದಿಲೀಪ್ ಅವರನ್ನು ಪಡುಬಿದ್ರೆಯಲ್ಲಿ ಬಿಟ್ಟು ದರೋಡೆಕೋರರು ಪರಾರಿಯಾಗಿದ್ದಾರೆ.

ಉಡುಪಿಯಲ್ಲಿ ಶೀಘ್ರವೇ ಮೆಡಿಕಲ್ ಕಾಲೇಜು ?: ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ. ಈ ಕುರಿತ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸುಸಜ್ಜಿತ ಮೆಡಿಕಲ್ ಕಾಲೇಜನ್ನು ಬ್ರಹ್ಮಾವರ ಕೊ-ಆಪರೇಟಿವ್ ಸಕ್ಕರೆ ಕಾರ್ಖಾನೆಗೆ ಸೇರಿದ 25 ಎಕ್ರೆ ಜಾಗದಲ್ಲಿ ಅಸ್ಥಿತ್ವಕ್ಕೆ ತರಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಕ್ಕರೆ ಕಾರ್ಖಾನೆಯು 110 ಎಕರೆ ಜಾಗವನ್ನು ಹೊಂದಿದೆ. 2004ರಿಂದ ಕೆಲಸವನ್ನು ಸ್ಥಗಿತಗೊಳಿಸಿದೆ.
ರಾಜ್ಯ ಸರ್ಕಾರ ಪ್ರಸ್ತಾವನೆಗೆ ಎರಡನೇ ಹಂತದಲ್ಲಿ ಅಂದರೆ ಈಗಾಗಲೇ ಅನುಮತಿ ನೀಡಲಾಗಿರುವ ಆರು ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ನಿಧಿ ಬಿಡುಗಡೆಗೊಳಿಸಿದ ಬಳಿಕ ಅನುಮತಿ ನೀಡುವ ಸಾಧ್ಯತೆ ಇದೆ. ಇನ್ನು ಇತ್ತೀಚಿಗೆ ಉಡುಪಿಯಲ್ಲಿ ಉದ್ಘಾಟನೆಗೊಂಡ ಸಾರ್ವಜನಿಕ ಔಷಧಿ ಅಂಗಡಿಗಳು ಪ್ರಾರಂಭದಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಕಾರ್ಯಾರಂಭಿಸಲಿದೆ.
ನಂತರ ದಿನದ 24 ಗಂಟೆಗಳ ಕಾಲ ತೆರೆದಿರುತ್ತದೆ. ಇದೇ ವೇಳೆ ಈ ಔಷಧಿ ಅಂಗಡಿಗಳಲ್ಲಿ 90 ಶೇಕಡಾ ರಿಯಾಯಿತಿ, ಬ್ರಾಂಡೆಡ್ ಔಷಧಿಗಳಿಗೂ ಶೇಕಡಾ 10ರಷ್ಟು ರಿಯಾಯಿತಿ ನೀಡಲಿದೆ. ಶಸ್ತ್ರ ಚಿಕಿತ್ಸಾ ಉಪಕರಣಗಳು ಕೂಡ ಶೇಕಡಾ 25ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ.












Click it and Unblock the Notifications