ತುಮಕೂರು : ರೌಡಿ ಶೀಟರ್, ಮಾಜಿ ಮೇಯರ್ ಬೆಳ್ಳಂಬೆಳಗ್ಗೆ ಹತ್ಯೆ
ತುಮಕೂರು, ಸೆಪ್ಟೆಂಬರ್ 30 : ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್, ಹಾಲಿ ಮಹಾನಗರ ಪಾಲಿಕೆ ಸದಸ್ಯ ರವಿಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ. ಕ್ಯಾತಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ತುಮಕೂರು ನಗರದ ಹೊರವಲಯದ ಬಟವಾಡಿ ಬಳಿ ರವಿ ಕುಮಾರ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ರವಿ ಕುಮಾರ್ ಕ್ಯಾತಸಂದ್ರ ಪೊಲೀಸ್ ಠಾಣೆಯ ಹಳೆ ರೌಡಿ ಶೀಟರ್ ಆಗಿದ್ದರು.
ಬೆಳಗ್ಗೆ 8 ಗಂಟೆಗೆ ಟೆಂಪೋದಲ್ಲಿ ಬಂದ 7 ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ರವಿ ಕುಮಾರ್ ಅವರು ಇಂದು ಬೆಳಗ್ಗೆ ವಾಕಿಂಗ್ ಮುಗಿಸಿ ರಸ್ತೆ ಪಕ್ಕದ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು. ಆಗ 7 ಜನರ ತಂಡ ಅವರ ಮೇಲೆ ಕಾರದ ಪುಡಿ ಎರಚಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದುಷ್ಕರ್ಮಿಗಳು ಹತ್ಯೆಗೆ ಬಳಸಿದ ಟೆಂಪೋ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪತ್ತೆಯಾಗಿದೆ. ಕೊಲೆಯಾದ ಸ್ಥಳದಿಂದ ಸುಮಾರು 2 ಕಿ.ಮೀ.ದೂರದಲ್ಲಿ ಕೆಎ 09, 6484 ಸಂಖ್ಯೆಯ ಟೆಂಪೋವನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದು, ಅದರಲ್ಲಿ ಲಾಂಗುಗಳು ಸಿಕ್ಕಿವೆ.
ಹಾಲಿನ ವಾಹನದ ಸ್ಟಿಕ್ಕರ್ : ದುಷ್ಕರ್ಮಿಗಳು ಟೆಂಪೋನಲ್ಲಿ ಕೊಲೆ ಮಾಡಲು ಬಂದಾಗ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಟೆಂಪೋಗೆ ಹಾಲಿನ ವಾಹನ ಎಂದು ಸ್ಟಿಕ್ಕರ್ ಅಂಟಿಸಿದ್ದರು.
ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರವಿ ಕುಮಾರ್, ಕೆಲವು ದಿನಗಳ ಹಿಂದೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications