ತುಮಕೂರಿನ ಗಡ್ಡ ರವಿಯದು ನೂರಾರು ಕೋಟಿ ಸಾಮ್ರಾಜ್ಯವೆ? ಕೊಲೆಗೆ ಕಾರಣ?

ತುಮಕೂರು, ಅಕ್ಟೋಬರ್ 4: ತುಮಕೂರಿನ ಮಾಜಿ ಮೇಯರ್- ರೌಡಿಶೀಟರ್ ಗಡ್ಡ ರವಿ ಹೀಗೆ ಕೊಲೆ ಆಗಬಹುದು ಎಂಬ ಅಂದಾಜು ಸ್ವತಃ ಆತನಿಗೇ ಇರಲಿಲ್ಲ. ಆತನ ಬೆಳವಣಿಗೆ, ಉಚ್ಛ್ರಾಯ ಸ್ಥಿತಿ, ಅಂತ್ಯ ಎಲ್ಲವನ್ನೂ 39 ವರ್ಷದೊಳಗೆ ನೋಡಿದ ರವಿಕುಮಾರ್ ಅಲಿಯಾಸ್ ರವಿಯ ವ್ಯವಹಾರಗಳು ಬಹಳ ದೊಡ್ಡ ಮಟ್ಟದಲ್ಲಿದ್ದವು ಎಂಬುದು ಈಗ ಗೊತ್ತಾಗುತ್ತಾ ಇದೆ.

ಆತ ಘೋಷಿಸಿಕೊಂಡಿದ್ದ ಆಸ್ತಿಯೇ ಐವತ್ತು ಕೋಟಿ ರುಪಾಯಿಗೂ ಹೆಚ್ಚಿತ್ತು. ಅದರ ಆಚೆಗೂ ವ್ಯವಹಾರಗಳು ಸಾಕಷ್ಟಿದ್ದವು. ಕೆಲವು ರಾಜಕಾರಣಿಗಳು, ಪೊಲೀಸರು, ಮಠದ ಸ್ವಾಮಿಗಳ ಜತೆಗೂ ರವಿಯ ವ್ಯಾವಹಾರಿಕ ಸಂಬಂಧಗಳು ಇದ್ದವು. ಆತ ಖರೀದಿಸಿದ್ದ ಆಡಿ ಕಾರಿನ ಬಗ್ಗೆ ಹಾಗೂ ಅದು ಯಾರ ಹೆಸರಿನಲ್ಲಿದೆ ಎಂಬುದು ಚರ್ಚೆ ಆಗುತ್ತಿರುವುದು ಅದೇ ಹಿನ್ನೆಲೆಯಲ್ಲಿ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ.

ಒಂದು ಕಾಲಕ್ಕೆ ಆಟೋ ಓಡಿಸುತ್ತಿದ್ದ ರವಿಯು ಆಂಜನಿ ಶಿಷ್ಯ. ಯಾವಾಗ ಆಂಜನಿ ಕೊಲೆ ಆಯಿತೋ ಅದೇ ತಂಡದಲ್ಲಿದ್ದ ಟೋಪಿ ಸತೀಶ ಪ್ರವರ್ಧಮಾನಕ್ಕೆ ಬಂದು, ಕೌನ್ಸಿಲರ್ ಆಗಿದ್ದು ಆಯಿತು. ಆ ನಂತರದ ಅವಕಾಶ ಸಿಕ್ಕಿದ್ದು ರವಿಗೆ. ಇವರಿಬ್ಬರ ಮಧ್ಯೆ ವೈಮನಸ್ಯ ಇದ್ದದ್ದು ನಿಜ. ಆದ್ದರಿಂದಲೇ ರವಿ ಕೊಲೆಯಾದಾಗ ಟೋಪಿ ಸತೀಶನ ಹೆಸರು ಕೇಳಿಬಂದಿತ್ತು.

ಪೊಲೀಸರು, ರಾಜಕಾರಣಿಗಳು ಸಿಟ್ಟಿಗೆ ಕಾರಣ

ಪೊಲೀಸರು, ರಾಜಕಾರಣಿಗಳು ಸಿಟ್ಟಿಗೆ ಕಾರಣ

ಕೆಲವು ಪೊಲೀಸ್ ಅಧಿಕಾರಿಗಳು ರವಿಯ ಹತ್ತಿರ ಸೈಟುಗಳನ್ನು ಖರೀದಿ ಮಾಡಿದ್ದರು. ಅವುಗಳನ್ನು ತಮ್ಮ ಹೆಸರಿಗೆ ನೋಂದಣಿ ಕೂಡ ಮಾಡದೆ ಹಾಗೇ ಬಿಟ್ಟಿದ್ದರು. ಮತ್ತೂ ಕೆಲವರು ಲಕ್ಷಾಂತರ ರುಪಾಯಿಯನ್ನು ರವಿಯ ಮೂಲಕವೇ ಹೂಡಿಕೆ ಮಾಡಿದ್ದರು. ರವಿ ಬಲಿಷ್ಠನಾಗುತ್ತಾ ಹೋದಂತೆ ಕೆಲವರ ಆಸ್ತಿಗೆ, ಹಣಕ್ಕೆ ಕೈ ಎತ್ತಿದ ಕಾರಣಕ್ಕೆ ಸಿಟ್ಟು ಇತ್ತು. ಇನ್ನು ಜೆಡಿಎಸ್ ನ ರಾಜಕಾರಣಿಯೊಬ್ಬರ ಪರವಾಗಿ ಪ್ರಚಾರ ಮಾಡಲು ಕೇಳಿಕೊಂಡು, ಅದರ ಸಲುವಾಗಿ ನೀಡಿದ್ದ ಹಣವನ್ನು ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡದೆ, ಅದರಲ್ಲಿ ಕೋಟಿಗಟ್ಟಲೆ ಬೆಲೆಯ ಭೂಮಿಯನ್ನು ರವಿ ಖರೀದಿಸಿದ್ದ ಬಗ್ಗೆ ಗುಸುಗುಸು ಹರಿದಾಡುತ್ತಿತ್ತು. ಈ ವಿಚಾರವಾಗಿ ಆ ರಾಜಕಾರಣಿಗೂ ಸಿಟ್ಟಿತ್ತು ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.

ಕೊಲೆಯ ಯತ್ನದ ಬಗ್ಗೆ ಕರೆದು ಎಚ್ಚರಿಕೆ

ಕೊಲೆಯ ಯತ್ನದ ಬಗ್ಗೆ ಕರೆದು ಎಚ್ಚರಿಕೆ

ರವಿಯ ಕೊಲೆಗೆ ಸ್ಕೆಚ್ ಹಾಕಲಾಗುತ್ತಿದೆ. ಪ್ರಯತ್ನಗಳು ಜಾರಿಯಲ್ಲಿವೆ ಎಂಬುದನ್ನು ಸ್ವತಃ ಪೊಲೀಸರೇ ಆತನಿಗೆ ತಿಳಿಸಿದ್ದರು. ಎಚ್ಚರಿಕೆಯಿಂದ ಇರುವಂತೆ ಕೂಡ ಹೇಳಿ ಕಳುಹಿಸಿದ್ದರು. ಈ ವಿಚಾರದಲ್ಲಿ ರವಿ ಯಾಮಾರಿದ್ದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಆತನನ್ನು ಹತ್ತಿರದಿಂದ ಬಲ್ಲವರು. ಸದಾ ಮೈ ತುಂಬ ಕಣ್ಣು ಎಂಬಂತೆ ಎಚ್ಚರವಾಗಿರುತ್ತಿದ್ದ ರವಿ, ಇತ್ತೀಚೆಗೆ ಕೆಲವರ ಜತೆಗೆ ರಾಜೀ-ಸಂಧಾನ ಕೂಡ ಮಾಡಿಕೊಂಡು, ಗುಬ್ಬಿಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದದ್ದು ಗೊತ್ತಿತ್ತು. ರವಿ ಬೆಳೆಯುತ್ತಿದ್ದ ವೇಗಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರೂ ಅಚ್ಚರಿ ಪಡುವಂತಿರಲಿಲ್ಲ ಎನ್ನುತ್ತಾರೆ.

ರವಿ ಹೆಸರಲ್ಲಿದ್ದ ಆಸ್ತಿ, ಹಣದ ಕಥೆ ಏನು?

ರವಿ ಹೆಸರಲ್ಲಿದ್ದ ಆಸ್ತಿ, ಹಣದ ಕಥೆ ಏನು?

ಚೀಟಿ ವ್ಯವಹಾರ ನಡೆಸುತ್ತಿದ್ದ ರವಿಯ ಬಳಿ ಹಣ ನೀಡಿದ್ದ ಸಾಕಷ್ಟು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಇದ್ದಾರೆ. ಕೆಲವರ ಪಾಲಿಗೆ ಬೇನಾಮಿಯಾಗಿ ಕೂಡ ರವಿಕುಮಾರ್ ವ್ಯವಹಾರ ನಡೆಸುತ್ತಿದ್ದದ್ದು ಇತ್ತು. ಈಗ ರವಿಯ ಕೊಲೆ ಆಗುವ ಮೂಲಕ ಆ ಆಸ್ತಿಗಳು, ಹಣ ಇತ್ಯಾದಿ ಕಥೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗೆ ನೋಡಿದರೆ ಈಗ ಪೊಲೀಸರಿಗೆ ಶರಣಾಗಿರುವ ಸುಜಯ್ ಭಾರ್ಗವ್ ಜತೆಗೆ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವುದು ದೊಡ್ಡ ವಿಚಾರ ಆಗಿರಲಿಲ್ಲ. ಆದರೆ ಇಬ್ಬರ ಮಧ್ಯೆ ಕೆಲವರು ದ್ವೇಷ ಬಿತ್ತಿದರು. ರವಿಯನ್ನು ಕೊಲೆ ಮಾಡಲು ಸುಜಯ್ ಹಾಗೂ ಸುಜಯ್ ನನ್ನು ಕೊಲೆ ಮಾಡಲು ರವಿ ಹವಣಿಸುತ್ತಿರುವುದಾಗಿ ಸದಾ ಸುದ್ದಿ ಚಾಲ್ತಿಯಲ್ಲಿ ಇರುವಂತೆ ನೋಡಿಕೊಂಡರು.

ಬೆಳವಣಿಗೆಯೇ ಮುಳುವಾಯಿತೆ?

ಬೆಳವಣಿಗೆಯೇ ಮುಳುವಾಯಿತೆ?

ಮಾಜಿ ಮೇಯರ್, ಹಾಲಿ ಕೌನ್ಸಿಲರ್ ಆಗಿದ್ದ ರವಿಕುಮಾರ್ ಗೆ ಒಂದು ಗಂಡುಮಗು ಇದೆ. ಈಗ ಆತನ ಪತ್ನಿ ಏಳು ತಿಂಗಳ ಗರ್ಭಿಣಿ. ಹೆಸರು, ಹಣ, ಅಧಿಕಾರ ಎಲ್ಲ ಇದ್ದರೂ ತುಮಕೂರಿನ ಬಟವಾಡಿ ಸೇತುವೆ ಬಳಿ ರವಿ ಕೊಲೆಯಾಗಿದ್ದು ವಿವಿಧ ರೀತಿಯ ಪ್ರತಿಕ್ರಿಯೆ ಹಾಗೂ ಅನುಮಾನಕ್ಕೆ ಕಾರಣವಾಗಿದೆ. ರವಿಯ ಬೆಳವಣಿಗೆಯೇ ಮುಳುವಾಯಿತು ಅನ್ನೋರು ಇರುವಂತೆಯೇ ಆತನ ಹಣಕಾಸಿನ ವ್ಯವಹಾರಗಳು, ರಾಜಕಾರಣದ ದ್ವೇಷ, ಮೈಮರೆವು, ಯಾರೇನು ಮಾಡಿಯಾರು ಎಂಬ ಧೋರಣೆಯಿಂದಲೇ ಹೀಗಾಯಿತು ಎನ್ನುವವರೂ ಇದ್ದಾರೆ. ರವಿಕುಮಾರ್ ಕೊಲೆ ಪ್ರಕರಣದಲ್ಲಿ ಶರಣಾಗಿ, ಸದ್ಯಕ್ಕೆ ಪೊಲೀಸರ ವಶದಲ್ಲಿರುವ ಸುಜಯ್ ಭಾರ್ಗವ್ ಏನು ಬಾಯಿ ಬಿಡುತ್ತಾನೋ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+