ತುಮಕೂರು: ಕುಡಿಯೋಕೆ ನೀರು ಕೇಳಿದ್ರೆ ಮದ್ಯ ಕೊಟ್ಟ ಶಿಕ್ಷಕರು!
ತುಮಕೂರು, ಡಿಸೆಂಬರ್ 14: ಕುಡಿಯೋಕೆ ನೀರು ಕೇಳಿದರೆ ಎಣ್ಣೆ (ಮದ್ಯ) ಕೊಟ್ಟ ಶಿಕ್ಷಕರನ್ನು ಡಿಡಿಪಿಐ ಅಮಾನತು ಮಾಡಿರುವ ಘಟನೆ ತುಮಕೂರಿನ ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವಿಪುರದಲ್ಲಿ ನಡೆದಿದೆ.
ಇಲ್ಲಿನ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಶಾಲೆಯ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರೇ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದಾರೆ. ಶಾಲೆಯಿಂದ 8. 9. 10ನೇ ತರಗತಿಯ 65ಕ್ಕೂ ವಿದ್ಯಾರ್ಥಿಗಳು ಹೆಚ್ಚು ಪ್ರವಾಸಕ್ಕೆ ತೆರಳಿದ್ದ ವೇಳೆ ಬಸ್ನಲ್ಲಿ ಕುಣಿದು ದಣಿದಿದ್ದ ಮಕ್ಕಳಿಗೆ ಕುಡಿಯುವ ನೀರಿನ ಜೊತೆ ಮದ್ಯ ಬೆರೆಸಿ ಶಿಕ್ಷಕರು ಕುಡಿಸಿದ್ದಾರೆ.

ಪ್ರವಾಸದುದ್ದಕ್ಕೂ ಪಾನಮತ್ತರಾಗೇ ಇದ್ದು ಜೂಜು ಆಟದಲ್ಲಿ ತೊಡಗಿಕೊಂಡಿದ್ದ ಮುಖ್ಯಶಿಕ್ಷಕ ಸಚ್ಚಿದಾನಂದ್, ಶಿಕ್ಷಕ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಮೂವರು ಶಿಕ್ಷಕರು ನೀರಿನ ಬಾಟಲ್ ಗೆ ಮದ್ಯ ಮಿಕ್ಸ್ ಮಾಡಿ ಕುಡಿಯುವ ನೀರು ಎಂದು ಕುಡಿಸಿದ್ದರು.
ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಈ ಚಂಡಾಳ ಶಿಕ್ಷಕರು ನೀರಿನ ಬಾಟಲಿಗೆ ಮದ್ಯ ಬೆರೆಸಿದ್ದಾರೆ. ಶಿಕ್ಷಕರು ಕೊಟ್ಟ ದ್ರವ್ಯವನ್ನು ನೀರೆಂದು ತಿಳಿದು ಸೇವಿಸಿದ ಬಳಿಕ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ ಹಾಗೂ ಕೆಲವರು ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ನಂತರ ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿದ್ದಾರೆ.
ಮಕ್ಕಳಿಂದ ವಿಷಯ ತಿಳಿದ ಪೋಷಕರು ಸಿಟ್ಟಿಗೆದ್ದು ಶಾಲೆ ಬಳಿ ಬಂದು ಗಲಾಟೆ ಮಾಡಿದ್ದಾರೆ, ಮದ್ಯ ಕುಡಿಸಿದ ಶಿಕ್ಷಕರ ಅಮಾನತ್ತಿಗೆ ಗ್ರಾಮಸ್ಥರ ಪಟ್ಟು ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಮಧುಗಿರಿ ಡಿಡಿಪಿಐ ರವಿಶಂಕರರೆಡ್ಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಬಳಿಕ ಮೂರು ಜನ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications