ನಾಳೆ ಮಧ್ಯಾಹ್ನ 3 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ: ಎಚ್ಡಿಕೆ
ತುಮಕೂರು, ಜನವರಿ 21: ಸೋಮವಾರ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ ಅವರು, ಸ್ವಾಮೀಜಿಗಳ ಎಲ್ಲ ಭಕ್ತಾದಿಗಳಿಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ. ಭಕ್ತರು ಶಾಂತರೀತಿಯಿಂದ ಅಂತಿಮ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಮಗೆ ಹಲವು ವರ್ಷಗಳಿಂದ ಅವರು ಮಾರ್ಗದರ್ಶನ ನೀಡಿದ್ದವರು. ಮುಂದೆಯೂ ಅವರ ಬದುಕು ನಮಗೆ ಮಾರ್ಗದರ್ಶನವಾಗಲಿದೆ. ಕಲಿಯುಗದಲ್ಲಿ ಒಬ್ಬ ಪವಾಡ ಪುರುಷರಾಗಿ, ದೈವಿಕ ವ್ಯಕ್ತಿಯಾಗಿ ನಮ್ಮ ಜೊತೆಯಲ್ಲಿದ್ದು ದಾರಿ ತೋರಿದವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಶಿವಕುಮಾರ ಸ್ವಾಮೀಜಿಗಳ ನಿಧನ ನಾಡಿಗೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ. ಪರಮಪೂಜ್ಯ ಸ್ವಾಮೀಜಿಗಳು ಶಿಕ್ಷಣ, ಅನ್ನ ದಾಸೋಹದ ಮೂಲಕ ಲಕ್ಷಾಂತರ ಬಡ ಕುಟುಂಬದ ಮಕ್ಕಳಿಗೆ ಆಶ್ರಯ ನೀಡಿ ದೇಶದ ಭವಿಷ್ಯ ಮಾಡುವ ಮಹಾನ್ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಾಳೆ ಸರ್ಕಾರಿ ರಜೆ
ಸ್ವಾಮೀಜಿಗಳ ನಿಧನದ ಗೌರವಾರ್ಥ ಮಂಗಳವಾರ ಎಲ್ಲ ಸರ್ಕಾರಿ ಶಾಲೆ ಕಾಲೇಜು ಹಾಗೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಮೂರು ದಿನಗಳ ಕಾಲ ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ಶೋಕ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸೂಕ್ತ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬಸವ ಯುಗದ ಎರಡನೆಯ ಅಧ್ಯಾಯ
ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು, ಆತ್ಮದ ಬೆಳಕು, ಕೋಟ್ಯಂತರ ಭಕ್ತರ ಜೀವನಕ್ಕೆ ದಾರಿ ತೋರಿದವರು. ಮುಂದೆಯೂ ಅವರ ಬದುಕು ನಮಗೆ ದಾರಿ ತೋರಿಸುತ್ತದೆ. ಬಸವ ಯುಗದ ಎರಡನೆಯ ಅಧ್ಯಾಯ ಅಂತ್ಯವಾದ ಈ ಸಂದರ್ಭದಲ್ಲಿ ಇನ್ನೊಬ್ಬ ಅನುಭವ ಬಸವನಣ್ಣನನ್ನು ನೋಡಲಾರೆವು ಎಂದು ಭಾವನೆ ಜನರಲ್ಲಿ ಮೂಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಾರ್ಥಕ ಕೆಲಸ ಮಾಡಿದವರು
ಲಕ್ಷಾಂತರ ಬಡಮಕ್ಕಳಿಗೆ ಶಿಕ್ಷಣ ನೀಡಿ ಸ್ವಾಭಿಮಾನದಿಂದ ಕಾಲಮೇಲೆ ಬದುಕುವ ವ್ಯವಸ್ಥೆ ಮಾಡಿದ ಸಾರ್ಥಕ ಕೆಲಸ ಮಾಡಿದ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.
ವೈದ್ಯರು ಎಲ್ಲ ಪರಿಶ್ರಮ ಹಾಕಿದ್ದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. 111 ವರ್ಷ ಪೂರ್ಣ ತುಂಬಿ 112ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಲಿಂಗೈಕ್ಯರಾಗಿದ್ದಾರೆ. ಮುಖ್ಯಮಂತ್ರಿಯವರ ಮನವಿಯಂತೆ ಭಕ್ತರು ಶಾಂತ ರೀತಿಯಲ್ಲಿ ಮಧ್ಯಾಹ್ನವರೆಗೂ ದರ್ಶನ ಪಡೆಯಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಭಾರತ ರತ್ನ ಕೊಡಲಿ: ಪರಮೇಶ್ವರ್
ಸ್ವಾಮೀಜಿಗಳು ಲಿಂಗೈಕ್ಯರಾಗಿರುವುದು ರಾಜ್ಯ ಹಾಗೂ ದೇಶಕ್ಕೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
ಅವರಂತಹ ಮತ್ತೊಬ್ಬ ಶ್ರೀಗಳು ನಮ್ಮ ಸಮಾಜಕ್ಕೆ ಬರಲಿ ಎಂದು ಪ್ರಾರ್ಥಿಸುತ್ತೇನೆ. ಇಡೀ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಅವರ ಆದರ್ಶಗಳು ನಮ್ಮ ಸಮಾಜಕ್ಕೆ ದೀಪವಾಗಿವೆ. ಅವರಿಗೆ ಭಾರತ ರತ್ನ ಕೊಡಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಒತ್ತಾಯಿಸಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಾರಿ ಮತ್ತೆ ರಾಜ್ಯದ ಕೋಟ್ಯಂತರ ಜನರ ಪರವಾಗಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇಚ್ಛಾಮರಣದ ಶಕ್ತಿಯಿತ್ತು
ನಮ್ಮೆಲ್ಲರ ಪಾಲಿನ ನಟಡೆದಾಡುವ ದೇವರು, ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿಗಳು ಪರಮಪೂಜ್ಯ ಸಿದ್ದಗಂಗಾ ಶಿವಕುಮಾರ ಮಹಾಸ್ವಾಮೀಜಿ ನಮ್ಮನ್ನು ಅಗಲಿದ್ದಾರೆ. ಇಷ್ಟಲಿಂಗ ಪೂಜೆಯ ದಿವ್ಯ ಶಕ್ತಿ ಅವರಲ್ಲಿತ್ತು. 12ನೇ ಶತಮಾನದ ಬಸವಾದಿ ಶರಣರ ತತ್ವಗಳು ದಾಸೋಹದ ಸಿದ್ಧಾಂತದ ಪರಿಕಲ್ಪನೆಯನ್ನು ಚಾಚೂ ತಪ್ಪದೆ ಪಾಲಿಸಿದವರು ಶ್ರೀಗಳು.
ಅವರು 111 ವರ್ಷ ಪವಾಡದಂತೆ ಬದುಕಿದ್ದರು. ಯಾವಾಗ ಬೇಕಾದಾಗ ಇಚ್ಛಾ ಮರಣ ಹೊಂದುವ ದಿವ್ಯಶಕ್ತಿ ಅವರಲ್ಲಿತ್ತು. ಈಗ ಅವರು ಅಗಲಿದ್ದಾರೆ. ನಮಗೆ, ನಾಡಿಗೆ ಇಡೀ ದೇಶಕ್ಕೆ ದುಃಖದ ಸಂದರ್ಭವಿದು.

ಅಂತಿಮ ದರ್ಶನಕ್ಕೆ ವ್ಯವಸ್ಥೆ
ಲಕ್ಷಾಂತರ ಭಕ್ತರನ್ನು ಹೊಂದಿರುವ ಸ್ವಾಮೀಜಿಗಳನ್ನು ನೋಡಲು ಎಲ್ಲರಿಗೂ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಎಲ್ಲರಿಗೂ ಅವರ ಸರ್ಶನ ಪಡೆಯುವ ಆಸೆ ಇದೆ. ಅದಕ್ಕೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದ್ದು ಬರುವ ಜನರಿಗೆ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಿದ್ದಾರೆ. ಎಲ್ಲವೂ ಸುಗಮವಾಗಿ ನಡೆಯಲು ಗೌರಯುತವಾಗಿ ನಡೆಯುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications