ಪಾವಗಡ: ಭರದಿಂದ ಸಾಗಿದೆ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ
ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆಗಸ್ಟಿನಲ್ಲಿ ಮೊದಲ ಹಂತದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ.
ಪಾವಗಡ, ಮಾರ್ಚ್ 6: ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ತುಮಕೂರು ಜಿಲ್ಲೆಯ ಪಾವಗಡದಲ್ಲಿ ತಲೆ ಎತ್ತುತ್ತಿದೆ. ಸುಮಾರು 13 ಸಾವಿರ ಎಕರೆ ಜಾಗದಲ್ಲಿ ಬೃಹತ್ ಪಾರ್ಕ್ ನಿರ್ಮಾಣವಾಗುತ್ತಿದ್ದು 2018ರ ಅಂತ್ಯಕ್ಕೆ 2700 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಿದೆ.
2020ಕ್ಕೆ ದೇಶದಲ್ಲಿ 100 ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಅದರಂತೆ ಕರ್ನಾಟಕದಲ್ಲಿ ಈ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ಇದರ ನಿರ್ಮಾಣದ ಹೊಣೆ ಹೊತ್ತಿದೆ. [ತುಮಕೂರು: ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ್ ಆಗಸ್ಟಿನಿಂದ ಕಾರ್ಯಾರಂಭ]

ಈ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕರ್ನಾಟಕದಲ್ಲಿ ಅತಿಹೆಚ್ಚು ಉಷ್ಣಾಂಶವಿರುವ ಪಾವಗಡ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಕಳೆದ 50 ವರ್ಷಗಳಿಂದ ಸರಿಯಾಗಿ ಮಳೆಯೇ ಬಂದಿಲ್ಲ. ಕಳೆದ 60 ವರ್ಷಗಳಲ್ಲಿ 54 ಬಾರಿ ಬರಪೀಡಿತ ತಾಲೂಕು ಎಂದು ಘೋಷಣೆಯಾದ ತಾಲೂಕಿದು. ಇಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು ಕುಡಿಯಲು ಯೋಗ್ಯವಾಗಿಲ್ಲ. ಈ ಜಾಗದಲ್ಲೇ ಇಂಥಹದ್ದೊಂದು ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.
ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ 12 ಸಾವಿರ ಎಕರೆ ಪ್ರದೇಶವನ್ನು ರೈತರಿಂದ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 21 ಸಾವಿರ ರೂಪಾಯಿಯಂತೆ ಜಮೀನು ಬಾಡಿಗೆ ನೀಡಲಾಗುತ್ತದೆ. ಅಲ್ಲದೆ ಎರಡು ವರ್ಷಕ್ಕೊಮ್ಮೆ ಬಾಡಿಗೆಯನ್ನು ಶೇಕಡಾ 5ರಷ್ಟು ಹೆಚ್ಚು ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.

2000 ಮೆಗಾವ್ಯಾಟ್ ವಿದ್ಯುತ್ ನ್ನು ಕರ್ನಾಟಕ ಉತ್ಪಾದಿಸಲಿದ್ದರೆ ಇನ್ನುಳಿದ 700 ಮೆಗಾವ್ಯಾಟ್ ಖಾಸಗಿ ಸಂಸ್ಥೆಗಳು ಉತ್ಪಾದನೆ ಮಾಡಲಿವೆ. ಯಾರ್ರೊ ಇನ್ಫ್ರಾಸ್ಟ್ರಕ್ಚರ್, ಪರಮಪೂಜ್ಯ ಸೋಲಾರ್ ಎನರ್ಜಿ ಪ್ರೈ ಲಿ, ಫಾರ್ಚುಮ್ ಫಿನ್ ಸೂರ್ಯ ಎನರ್ಜಿ ಪ್ರೈ ಲಿ, ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಪ್ರೈ ಲಿ, ಟಾಟಾ ರಿನವೇಬಲ್ ಎನರ್ಜಿ ಲಿ, ರಿನ್ಯೂ ಪವರ್ ಈ ವಿದ್ಯುತ್ ಉತ್ಪಾದನೆ ಮಾಡಲಿದೆ.
ಖಾಸಗಿ ಸಂಸ್ಥೆಗಳು ಉತ್ಪಾದನೆ ಮಾಡುವ ಶೇಕಡಾ 90 ವಿದ್ಯುತ್ತನ್ನು ಎಸ್ಕಾಮ್ ಯೂನಿಟ್ ಗೆ 3.5 ರಿಂದ 4.35 ರೂಪಾಯಿ ದರದಲ್ಲಿ ಖರೀದಿಸಲಿದೆ. [ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]
ಈ ತಾಲೂಕಿನಿಂದ ವರ್ಷಕ್ಕೆ 8-10 ಸಾವಿರ ಜನ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಬರುತ್ತಾರೆ. ಇದನ್ನು ತಡೆಯಲು ಸರಕಾರ ಪಾವಗಡ ಸುತ್ತ ಮುತ್ತ 15,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎನ್ನುತ್ತಾರೆ ಇಂಧನ ಸಚಿವ ಡಿ.ಕೆ ಶಿವಕುಮಾರ್.
ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆಗಸ್ಟಿನಲ್ಲಿ ಮೊದಲ ಹಂತದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಒಟ್ಟು 810 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಮಾರ್ಗಗಳ ನಿರ್ಮಾಣವೂ ಭರದಿಂದ ಸಾಗುತ್ತಿದೆ.
ವಿದ್ಯುತ್ ಕೊರತೆ ಇಲ್ಲ:
ಶಿವರಾತ್ರಿಯಂದು 10,242 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯನ್ನು ನಾವು ಪೂರೈಸಿದ್ದೇವೆ. ಇನ್ನೂ 1,000 ಮೆಗಾವ್ಯಾಟ್ ಬೇಡಿಕೆ ಬಂದರೂ ಪೂರೈಸಲು ನಮ್ಮಲ್ಲಿ ಸಾಮರ್ಥ್ಯವಿದೆ. ವಿದ್ಯುತ್ ಕೊರತೆ ಉಂಟಾಗಲಾರದು ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications