ತುಮಕೂರಿನಲ್ಲಿ ತಿಂಗಳಿಗೊಂದು ಬಲಿ ಪಡೆದ ಚಿರತೆ ಸೆರೆ ಕಾರ್ಯಾಚರಣೆ
ತುಮಕೂರು, ಜನವರಿ.13: ತುಮಕೂರಿನಲ್ಲಿ ತಿಂಗಳಿಗೆ ಒಂದು ಬಲಿ ಪಡೆದ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಸುತ್ತಮುತ್ತಲಿನಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮ, ದೊಡ್ಡಮಳಲವಾಡಿ, ಚಿಕ್ಕಮಳಲವಾಡಿ ಹಾಗೂ ಹೆಬ್ಬೂರು ಗ್ರಾಮಗಳಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಸಿ.ಎಸ್.ಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಬೋನ್ ಗಳನ್ನು ಇರಿಸಲಾಗಿದೆ. ಬನ್ನೇರುಘಟ್ಟ ಬಂಡೀಪುರ, ನಾಗರಹೊಳೆ ಅರಣ್ಯ ಸಿಬ್ಬಂದಿ ಹಾಗೂ ಸ್ಪೆಷಲ್ ಟೈಗರ್ ಫೋರ್ಸ್ ಸೇರಿದಂತೆ 60ಕ್ಕೂ ಹೆಚ್ಚು ಸಿಬ್ಬಂದಿಯು ಚಿರತೆ ಸೆರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ನಾಲ್ಕು ಚಿರತೆಗಳು ಇರುವ ಶಂಕೆ:
ತುಮಕೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ಕಳೆದ ಮೂರು ತಿಂಗಳಿನಲ್ಲಿ ಮೂವರು ಪ್ರಾಣ ಬಿಟ್ಟಿದ್ದರು. ಸಿ.ಎಸ್. ಪುರ ಬಳಿ ಇದೀಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಚಿರತೆಗಳು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕಳೆದ ವಾರವಷ್ಟೇ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಚಿರತೆ ದಾಳಿಗೆ ಜನವರಿ.09ರಂದು ಐದು ವರ್ಷದ ಪುಟ್ಟ ಬಾಲಕ ಸಮರ್ಥಗೌಡ ಬಲಿಯಾಗಿದ್ದನು. ಇದರಿಂದ ಕೆರಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications