ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಅಧಿಕಾರ: ದೇವೇಗೌಡ
ತುಮಕೂರು, ಫೆಬ್ರವರಿ 16: ಯಾರು ಏನೇ ಕುಹಕವಾಡಿದರೂ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಶತಸಿದ್ಧ ಎಂದು ಮಾಜಿ ಪ್ರಧಾನಿ ದೇವೇಗೌಡ ಆತ್ಮವಿಶ್ವಾಸದಿಂದ ನುಡಿದರು.
ತುಮಕೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ, ರೇವಣ್ಣ ಅವರೊಂದಿಗೆ ಜೆಡಿಎಸ್ ನ ಎಲ್ಲ ಮುಖಂಡರನ್ನು ಕಣಕ್ಕಿಳಿಸಲಿದ್ದಾರೆ ಅವರ ಹೆಸರನ್ನು ಬಿಡುಗಡೆ ಮಾಡಲಿದ್ದೇವೆ. ಈ ವಿಚಾರವಾಗಿ ವಿವಿಧ ಜಿಲ್ಲೆಗಳಲ್ಲಿ 4-5 ತಂಡಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಫೆಬ್ರವರಿ 24 ಅಥವಾ 25ರಂದು ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಸ್ಪರ್ಧಿಸಲಿದ್ದಾರೆ ಎಂದರು.[ರೇವಣ್ಣನ ಕನಸಿಗೆ ಗೌಡರ ಎಳ್ಳುನೀರು, ಗೌಡ್ರ ಮನೆಯಲ್ಲಿ ಗದ್ದಲ?]
ಇನ್ನು ಕಾಂಗ್ರೆಸ್, ಬಿಜೆಪಿ ಹೈಕಮಾಂಡಿಗೆ ಕಪ್ಪ ನೀಡುವ ವಿಚಾರಕ್ಕೆ ಹೊರಳಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಅನಗತ್ಯ ಆರೋಪ- ಪ್ರತ್ಯಾರೋಪ ಮಾಡುತ್ತಾ ತಿರುಗಾಡುತ್ತಿದೆ. ಅವರುಗಳು ಹೈಕಮಾಂಡಿಗೆ ಕಪ್ಪ ನೀಡುತ್ತಿರುವುದು ಹೊಸತೇನಲ್ಲ ಸಂಪ್ರದಾಯವಾಗಿ ನೀಡುತ್ತಾ ಬಂದಿವೆ. ಆದರೆ ಜೆಡಿಎಸ್ ರೈತರಿಗಾಗಿ ಹೋರಾಡುತ್ತಿದೆ ಎಂದರು.
ಮಾರ್ಚ್ 15ರಂದು ನೂತನ ಜೆಡಿಎಸ್ ಕಚೇರಿ ಉದ್ಘಾಟನೆ ಮಾಡಲಿದ್ದು, ಜಯಪ್ರಕಾಶ್ ನಾರಾಯಣ ಹೆಸರಿನ ಕಚೇರಿ ಉದ್ಘಾಟನೆಯಾಗಿದೆ. ಇದರ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಲಿದೆ. ಜನತಾ ಪರಿವಾರವನ್ನು ಒಗ್ಗೂಡಿಸು ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿಲ್ಲ. ಜಮೀರ್ ಅಹಮದ್ ರಂತೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಅವರಿಂದಲೇ ಪಕ್ಷ ಸಂಘಟನೆಯಾಗುತ್ತೆ ಅನ್ನೋದು ಸುಳ್ಳು ಎಂದು ಮಾರ್ಮಿಕವಾಗಿ ನುಡಿದರು.