ಟಿಕ್ ಟಾಕ್ ಸಾಹಸಕ್ಕೆ ಬಲಿಯಾದ ತುಮಕೂರಿನ ಕುಮಾರ್ ಕೊನೆ ಮಾತುಗಳು
ತುಮಕೂರು, ಜೂನ್ 24: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆಯ ಕುಮಾರ್ ಮೃತಪಟ್ಟ ಸುದ್ದಿ ನಿಮ್ಮ ಗಮನಕ್ಕೆ ಬಂದಿರಬಹುದು. ಟಿಕ್ ಟಾಕ್ ವಿಡಿಯೋಗೆ ಸಾಹಸ ಮಾಡುವಾಗ ಮೂಳೆ ಮುರಿದುಕೊಂಡ ಕುಮಾರ್, ಬದುಕಿ ಉಳಿಯಲಿಲ್ಲ. ಕರ್ನಾಟಕದಲ್ಲಿ ಟಿಕ್ ಟಾಕ್ ಗೆ ಬಲಿಯಾದ ಮೊದಲ ಜೀವ ಕುಮಾರ್ ದು.
ಕುಮಾರ್ ಮೂಳೆ ಮುರಿದುಕೊಂಡು, ನೋವು ಅನುಭವಿಸುತ್ತಿದ್ದಾಗ ತುಮಕೂರಿನ ಪತ್ರಕರ್ತರೊಬ್ಬರು ಅವರನ್ನು ಮಾತನಾಡಿಸಿದ್ದರು. ಇದೀಗ ಆ ಪತ್ರಕರ್ತರನ್ನು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಿ, ಆ ದಿನ ಕುಮಾರ್ ಏನು ಹೇಳಿದ್ದರು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲೈಕ್ಸ್, ಕಾಮೆಂಟ್ಸ್ ಗಳಿಗೆ ಹೀಗೆ ಸಾಹಸ ಮಾಡಲು ಮುಂದಾದೆ. ಆದರೆ ನನ್ನ ಪರಿಸ್ಥಿತಿ ನೋಡಿ ಹೀಗಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ಬೇಕಂತೆ. ನಾನು ಹೀಗೆ ಮಾಡಬಾರದಿತ್ತು. ಇಂಥದ್ದೊಂದು ತಪ್ಪು ನಾನು ಮಾಡಬಾರದಿತ್ತು ಎಂದು ಅಲವತ್ತುಕೊಂಡಿದ್ದರಂತೆ ಕುಮಾರ್.

ರಾಮು ಮೆಲೋಡೀಸ್ ನಲ್ಲಿ ನೃತ್ಯಪಟು- ಗಾಯಕರಾಗಿದ್ದ ಕುಮಾರ್ ತಮ್ಮ ಬದುಕನ್ನು ಕೈಯಾರೆ ಕೊನೆ ಮಾಡಿಕೊಂಡಿದ್ದಾರೆ. ನಾಲ್ಕು ಜನರ ಮೆಚ್ಚುಗೆಗೆ ಪ್ರಾಣ ಕಳೆದುಕೊಳ್ಳಬೇಕಾ? ಅದರ ಬದಲಿಗೆ ಇನ್ನೊಬ್ಬರಿಗೆ ಸಹಾಯ ಮಾಡಬಹುದಿತ್ತಲ್ಲವಾ? ಸಾಮಾಜಿಕ ಮಾಧ್ಯಮಗಳು, ಟಿಕ್ ಟಾಕ್ ವಿಡಿಯೋದಂಥವು ಪ್ರಾಣ ಬಲಿ ತೆಗೆದುಕೊಳ್ಳುವ ಮಟ್ಟಕ್ಕೆ ಬಲಿತವೆ? ಎಂಬ ಪ್ರಶ್ನೆಗಳು ಮೂಡುತ್ತವೆ.
ನಾನು ಮಾಡಿದಂತೆ ಯಾರೂ ಮಾಡಬಾರದು ಎಂದು ಕುಮಾರ್ ಮನವಿ ಮಾಡಿದ್ದರು. ಆದರೆ ಕೆಲವರು ಕುಮಾರ್ ಆ ಥರ ಹುಚ್ಚು ಸಾಹಸಕ್ಕೆ ಮುಂದಾಗುವ ವ್ಯಕ್ತಿಯಲ್ಲ ಎಂಬ ಸಮರ್ಥನೆಗೆ ಇಳಿದಿದ್ದಾರೆ. ಇರಲಿ, ಕೊನೆ ಬಾರಿಗೆ ಕುಮಾರ್ ಜತೆ ಮಾತನಾಡಿದ್ದ ಮಾಧ್ಯಮದವರಿಂದ ಇಲ್ಲಿನ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಆದರೆ, ಕುಮಾರ್ ಕುಟುಂಬದ ಕಡೆಗೆ ಅಂಥ ಅನುಕೂಲವಿಲ್ಲ. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಕುಮಾರ್ ಆದಾಯ ಕೂಡ ಲಾಟರಿ ಇದ್ದಂತೆ ಇತ್ತು. ಕಾರ್ಯಕ್ರಮಗಳು ಇದ್ದಾಗ ಮಾತ್ರ ಹಣ. ಇಲ್ಲದಿದ್ದರೆ ಇಲ್ಲ. ಸೀಸನ್ ಇರುವಾಗ ಒಂದಿಷ್ಟು ದುಡ್ಡು ನೋಡಿದರೆ, ಉಳಿದ ಸಮಯದಲ್ಲಿ ಆದಾಯ ಇರುತ್ತಿರಲಿಲ್ಲ. ಒಂದು ಕಡೆ ಮಗನನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ದುಡಿಮೆಯ ಕೈ ಮುರಿದ ವೇದನೆ ಹೀಗೆ ಪರಿಪರಿಯ ನೋವನ್ನು ಕುಮಾರ್ ಕುಟುಂಬ ಅನುಭವಿಸುತ್ತಿದೆ.












Click it and Unblock the Notifications