ತುಮಕೂರು: 8 ವರ್ಷಗಳಿಂದ ಹೆಣ್ಣು ಸಿಗುತ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿ ಮಾಡಿ ಎಂದ ರೈತ
ರೈತ, ದೇಶಕ್ಕೆ ಅನ್ನದಾತ ಎನ್ನುವ ಹೆಸರನ್ನಿಟ್ಟು ಕೊಂಡಾಡುವ ಕೆಲಸ ಮಾತ್ರ ನಿರಂತರವಾಗಿ ಆಗುತ್ತಿದೆ. ಆದರೆ, ರೈತರ ಕಷ್ಟಗಳು ಮಾತ್ರ ಹಾಗೇ ಉಳಿದಿವೆ. ಕೃಷಿ ಕೂಡ ಒಂದು ಕೆಲಸ, ಒಂದು ಉದ್ಯಮ ಅದರಲ್ಲಿ ಲಾಭ - ನಷ್ಟ ಎರಡೂ ಇದೆ.
ರೈತರನ್ನು ಹಾಡಿ ಹೊಗಳುವ ಮಂದಿ ಇದ್ದರೂ, ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಅನೇಕ ಬಾರಿ ಈಗಾಗಲೇ ರೈತರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಹೆಣ್ಣು ಹುಡುಕುವ ಕಷ್ಟಗಳ ಬಗ್ಗೆ ತಿಳಿಸಿದ್ದಾರೆ.

ಕಳೆದ 8 ವರ್ಷಗಳಿಂದ ಮಗನಿಗೆ ಹೆಣ್ಣು ಹುಡುಕಿ ಸುಸ್ತಾಗಿರುವ ರೈತರೊಬ್ಬರು ಈಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದು, ಮಗನಿಗೆ ಹೆಣ್ಣು ಹುಡುಕುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೌದು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರೈತರೊಬ್ಬರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ಸರ್ಕಾರವೇ ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಬೇಕು ಎಂದು ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಟಿ.ಬಿ.ಜಯಚಂದ್ರ ಜನತಾ ದರ್ಶನ
ಶಿರಾ ನಗರದಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ಜನತಾ ದರ್ಶನದ ವೇಳೆ ರೈತರು ಮನವಿ ಮಾಡಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ಜನತಾ ದರ್ಶನದಲ್ಲಿ ಭಾಗಿಯಾಗಿದ್ದರು.
ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರೈತ ಜಯರಾಮಪ್ಪ ಜನತಾ ದರ್ಶನಕ್ಕೆ ಆಗಮಿಸಿದ್ದರು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ದಯವಿಟ್ಟು ನಮ್ಮ ಮಕ್ಕಳಿಗೆ ಹೆಣ್ಣು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೊಗಳಿಕೆ ಬೇಡ, ಹೆಣ್ಣು ಕೊಡಿಸಿ
ಅನ್ನದಾತ, ನಾಡಿಗೆ ಅನ್ನಹಾಕುವ ದೇವರು, ದೇಶದ ಬೆನ್ನೆಲುಬು ಎನ್ನುವ ಹೊಗಳಿಕೆ ಮಾತುಗಳು ನಮಗೆ ಬೇಡ, ಕನ್ಯಾಭಾಗ್ಯ ಜಾರಿಗೆ ತಂದು ರೈತರ ಮಕ್ಕಳಿಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡಿಸಿ, ಇಲ್ಲ ಸರ್ಕಾರಿ ಕೆಲಸ ಕೊಡಿಸಿ ಎಂದಿದ್ದಾರೆ.
ಎಲ್ಲರಿಗೂ ಜಾಸ್ತಿ ಓದಿರುವವರು ಬೇಕು, ಕೆಲಸದಲ್ಲಿ ಇರುವವರೇ ಬೇಕು ಎಂದರೆ ಹೇಗೆ. ರೈತರ ಮಕ್ಕಳು ಮದುವೆ ಆಗುವುದು ಯಾವಾಗ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಮಕ್ಕಳಿಗೆ ಹೆಣ್ಣು ಕೊಡುವ ಯೋಜನೆ ಜಾರಿ ಮಾಡಲಿ ಎಂದರು.
ಕಳೆದ ಎಂಟು ವರ್ಷಗಳಿಂದ ನನ್ನ ಮಗನಿಗೆ ಹೆಣ್ಣು ಹುಡುಕಿ ಸುಸ್ತಾಗಿದ್ದೇನೆ. ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ, ಅದಕ್ಕಾಗಿ ನೊಂದು ಜನತಾ ದರ್ಶನದಲ್ಲಿ ಮನವಿ ಮಾಡಲು ಬಂದಿದ್ದೇನೆ ಎಂದಿದ್ದಾರೆ.
ರೈತನ ಮನವಿಯನ್ನು ಕೇಳಿದ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡದೆ ಆಯ್ತು ನೋಡೋಣ ಎಂದು ಹೇಳಿದ್ದಾರೆ.












Click it and Unblock the Notifications