ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ
ತುಮಕೂರು, ಮಾರ್ಚ್ 19: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಗಂಗೆ ಶಾಪ ಇದೆ. ಅವರು ತುಮಕೂರಿನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂದು ತುಮಕೂರು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ದೇವೇಗೌಡರಿಗೆ ಗಂಗೆ ಶಾಪ ಇರುವುದಾಗಿ ಈಗಾಗಲೇ ಜೋತಿಷಿಗಳು ಹೇಳಿದ್ದಾರೆ. ಈ ವಿಚಾರ ಸ್ವತಃ ದೇವೇಗೌಡರಿಗೂ ತಿಳಿದಿದೆ. ಈ ಶಾಪ ಇರುವಾಗ ಅವರು ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸಿದರೆ ಸೋಲುವುದು ಗ್ಯಾರಂಟಿ ಎಂದು ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.
ಹೇಮಾವತಿ ನೀರು ಬಿಡದೆ ತುಮಕೂರು ಜಿಲ್ಲೆಗೆ ದೇವೇಗೌಡರು ವಂಚಿಸಿದ್ದಾರೆ. ಲಕ್ಷಾಂತರ ರೈತರ ಕಣ್ಣೀರ ಶಾಪದಿಂದಾಗಿ ಗಂಗಾ ಮಾತೆ ದೇವೇಗೌಡರ ಮೇಲೆ ಮುನಿಸಿಕೊಂಡು ಶಾಪ ನೀಡಿದ್ದಾಳೆ. ಈ ಶಾಪದಿಂದ ಅವರು ಸೋಲುವುದು ನಿಶ್ಚಿತ ಎಂದಿದ್ದಾರೆ.

ತುಮಕೂರು ಕ್ಷೇತ್ರದಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನ್ನ ಪರ ಹೆಚ್ಚಿನವರು ಒಲವು ತೋರಿಸಿದ್ದಾರೆ. ಅಲ್ಲದೆ, ನಾನು ಯಡಿಯೂರಪ್ಪ ಅವರ ಶಿಷ್ಯ ಎಂಬುದು ಜನರಿಗೆ ಗೊತ್ತು. ಹೀಗಾಗಿ ನನಗೇ ಟಿಕೆಟ್ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಪ್ರಬಲ ಅಭ್ಯರ್ಥಿಗಳು ಇಲ್ಲದ ಕಾರಣ ದೇವೇಗೌಡ ಅವರೇ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications