ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ದೇವೇಗೌಡರ ಮಾರ್ಮಿಕ ಹೇಳಿಕೆ!
ತುಮಕೂರು, ಜನವರಿ 16: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಿದ್ದಗಂಗಾ ಶ್ರೀಗಳ ದರ್ಶನ ಪಡೆದು ಶ್ರೀಗಳ ಆರೋಗ್ಯದ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ದೇವೇಗೌಡ ಅವರು, 'ಸಾವನ್ನು ತಡೆದಿಟ್ಟುಕೊಳ್ಳುವ ಶಕ್ತಿ ಇದ್ದ ಭೀಷ್ಮ ಕೂಡ ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗ ಮಾಡಿದ, ಈಗ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗಿದೆ' ಎಂದಿದ್ದಾರೆ.
ಭಕ್ತರ ಒತ್ತಡಕ್ಕೆ ಮಣಿದು ಕಿಟಕಿ ಮೂಲಕ ಸಿದ್ದಗಂಗಾ ಶ್ರೀ ದರ್ಶನಕ್ಕೆ ಅವಕಾಶ
ಶ್ರೀಗಳ ಆರೋಗ್ಯದ ಕುರಿತ ದೇವೇಗೌಡ ಅವರ ಈ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದೇ ಆಸ್ಪತ್ರೆಯಿಂದ ಶ್ರೀಗಳನ್ನು ಮಠಕ್ಕೆ ಕರೆತಂದಿರುವುದನ್ನೂ, ದೇವೇಗೌಡರ ಈ ಹೇಳಿಕೆಯನ್ನು ಸಮೀಕರಿಸಿದರೆ ಹೊಸ ಅರ್ಥವೊಂದು ಹುಟ್ಟುತ್ತಿರುವ ಅನುಮಾನ ಸಹ ವ್ಯಕ್ತವಾಗುತ್ತದೆ.
ಸ್ವಾಮಿಗಳನ್ನು 1968ರಿಂದಲೂ ನಾನು ಬಲ್ಲೆ. ಅವರು ಶಿಕ್ಷಣ, ಅನ್ನದಾನ, ಸಮಾಜ ಸೇವೆಗಳ ಮೂಲಕ ದೇವರನ್ನು ತಲುಪುವ ದಾರಿಯನ್ನು ಕಂಡುಕೊಂಡಿದ್ದಾರೆ ಎಂದು ದೇವೇಗೌಡ ಅವರು ಶ್ರೀಗಳ ಜೊತೆಗಿನ ಸಾಮಿಪ್ಯವನ್ನು ನೆನಪಿಸಿಕೊಂಡಿದ್ದಾರೆ.
ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಹಿಂತಿರುಗಿದ ನಡೆದಾಡುವ ದೇವರು
ಶ್ರೀಗಳಿಗೆ 111 ವಯಸ್ಸಾಗಿದೆ. ಪ್ರಕೃತಿ ಸಹಜವಾಗಿ ಆರೋಗ್ಯದಲ್ಲಿ ವ್ಯತ್ಯ ಆಗಿದೆ. ಪುನರಪಿ ಜನನಂ ಅನ್ನು ಹಾಗೆ ಶ್ರೀಗಳು ಪರಮೇಶ್ವರನ ಸಾನಿಧ್ಯಕ್ಕೆ ಹೋಗಲು ದಾರಿ ಮಾಡಿಕೊಂಡಿದ್ದಾರೆ ಎನಿಸುತ್ತದೆ ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು: ಖರ್ಗೆ ಆಗ್ರಹ
ಉತ್ತರಾಯಣ ಪುಣ್ಯಕಾಲದಲ್ಲಿ ಶ್ರೀಗಳ ದರ್ಶನ ಪಡೆದಿದ್ದೇನೆ. ವೈದ್ಯರು ಹೇಳುವ ಪ್ರಕಾರ ಅವರ ರಕ್ತದೊತ್ತಡ ಮತ್ತು ಸಕ್ಕರೆ ಅಂಶ ಸಾಮಾನ್ಯವಾಗಿದೆ. ಆದರೆ ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಇದೆ. ಶ್ರೀಗಳು ಕೆಲವೊಮ್ಮೆ ತಾವೇ ಉಸಿರಾಡುತ್ತಾರೆ, ಅದಾಗದೇ ಇದ್ದಾಗ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೇವೇಗೌಡರು ಮಾಹಿತಿ ನೀಡಿದರು.