ಪಕ್ಷಕ್ಕೆ ವಾಪಸ್ ಬನ್ನಿ; ಜೆಡಿಎಸ್ ಶಾಸಕನಿಗೆ ಬಿಗ್ ಆಫರ್ ಕೊಟ್ಟ ಅಧ್ಯಕ್ಷರು!
ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿ ಸಿ. ಎಂ. ಇಬ್ರಾಹಿಂ ಪಕ್ಷದಿಂದ ಅಮಾನತುಗೊಂಡಿರುವ ಶಾಸಕನಿಗೆ ಮತ್ತೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ತುಮಕೂರು, ಮಾರ್ಚ್ 14; ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರ ನಡೆಸಬೇಕು ಎಂಬುದು ಜೆಡಿಎಸ್ ಪಕ್ಷದ ಗುರಿ. ಇದಕ್ಕಾಗಿಯೇ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪಂಚರತ್ನ ರಥಯಾತ್ರೆ ಮೂಲಕ ಜನರ ಬಳಿ ಹೋಗಲಾಗಿದೆ. ಅಲ್ಲದೇ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು 93 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.
ಹಲವು ನಾಯಕರು, ಮಾಜಿ ಶಾಸಕರು, ಹಾಲಿ ಶಾಸಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಅಮಾನತುಗೊಂಡಿರುವ ಜೆಡಿಎಸ್ ಶಾಸಕನಿಗೆ ಪಕ್ಷಕ್ಕೆ ವಾಪಸ್ ಬನ್ನಿ ಎಂದು ಬಿಗ್ ಆಫರ್ ನೀಡಲಾಗಿದೆ. ಈಗಾಗಲೇ ಶಾಸಕರು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧವಿದ್ದು, ಪಕ್ಷಕ್ಕೆ ಬಂದರೆ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಬೆದರಿಸಿದ್ದಾರೆ.

ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿ ಸಿ. ಎಂ. ಇಬ್ರಾಹಿಂ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ಗೆ ಪಕ್ಷಕ್ಕೆ ಮರಳಿ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಚಟುವಟಿಕೆಗಳಿಂದ ದೂರವಾಗಿದ್ದ ವಾಸಣ್ಣ (ಎಸ್. ಆರ್. ಶ್ರೀನಿವಾಸ್) ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕಾರಣಕ್ಕೆ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷರು ಹೇಳಿದ್ದೇನು?; ತುಮಕೂರಿನಲ್ಲಿ ಮಾತನಾಡಿದ ಸಿ. ಎಂ. ಇಬ್ರಾಹಿಂ, "ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಎಸ್. ಆರ್. ಶ್ರೀನಿವಾಸ್ ಮೇಲೆ ಗೌರವವಿದೆ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಎಲ್ಲರಿಗೂ ಕೈ ಮುಗಿದು ಒಳಗೆ ಬಾ ಯಾತ್ರಿಕನೇ" ಎಂದು ಎಸ್. ಆರ್. ಶ್ರೀನಿವಾಸ್ಗೆ ಆಹ್ವಾನ ನೀಡಿದರು.

"ಕೃಷ್ಣನಿಗೂ ಅಪವಾದ ಬಂತು. ಅವರಿಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ. ಯೋಚನೆ ಮಾಡಿ, ಶ್ರೀನಿವಾಸ್ ಅವರ ಮಗ, ಧರ್ಮಪತ್ನಿ ಎಲ್ಲರೂ ಒಳ್ಳೆಯವರು. ಮನೆಯಲ್ಲಿ ಕುಳಿತು ವಿಚಾರ ಮಾಡಿ" ಎಂದು ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ರನ್ನು ಸಿ. ಎಂ. ಇಬ್ರಾಹಿಂ ಪಕ್ಷಕ್ಕೆ ಮತ್ತೆ ಸ್ವಾಗತಿಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿ; ಎಸ್. ಆರ್. ಶ್ರೀನಿವಾಸ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಳಿಕ ಜೆಡಿಎಸ್ ಕಾರ್ಯಕರ್ತರು ಅವರ ತಿಥಿ ಕಾರ್ಡ್ ಮಾದರಿಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಜೆಡಿಎಸ್ ಪಕ್ಷ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು, ಅಲ್ಲದೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭೆ ಸ್ಪೀಕರ್ಗೆ ಮನವಿ ಮಾಡಿತ್ತು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುಬ್ಬಿಗೆ ಬಂದಾಗ ಎಸ್. ಆರ್. ಶ್ರೀನಿವಾಸ್ ರಾಹುಲ್ ಗಾಂಧಿ ಸ್ವಾಗತಿಸಿದ್ದರು. ಅಲ್ಲದೇ ಭಾರತ್ ಜೋಡೋ ಯಾತ್ರೆಯೆಲ್ಲಿ ಹೆಜ್ಜೆ ಹಾಕಿದ್ದರು. ಬಳಿಕ ಮಾತನಾಡಿ, "ಶಾಸಕನಾಗಿ ಜೊತೆಗೆ ಸಚಿವರಾಗುವವರೆಗೂ ನನ್ನ ಜೊತೆಯಲ್ಲೇ ಇರುವ ನನ್ನ ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿ ಕಾಂಗ್ರೆಸ್ ಸೇರಲು ಸಿದ್ಧನಿದ್ದೇನೆ. ಆದರೆ ಪಕ್ಷ ಸೇರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ" ಎಂದು ಹೇಳಿದ್ದರು.
ಕಾಂಗ್ರೆಸ್ ಸೇರಲು ವಿರೋಧ; ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರಲು ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ. 10 ತಲೆ ರಾವಣನ ಪೋಸ್ಟರ್ ಬಿಡುಗಡೆ ಮಾಡಿ ಶಾಸಕರನ್ನು ರಾವಣನಿಗೆ ಹೋಲಿಕೆ ಮಾಡಿದ್ದರು. ಒಂದು ವೇಳೆ ಎಸ್. ಆರ್. ಶ್ರೀನಿವಾಸ್ಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಹೇಳಿದ್ದರು. 2018ರ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಕೆ. ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು, 13,938 ಮತಗಳನ್ನು ಪಡೆದಿದ್ದರು.











Click it and Unblock the Notifications