ಮಧುಗಿರಿ: ಇದು ಕೃಷ್ಣಮೃಗಗಳ ಸ್ವಚ್ಛಂದದ ಬೀಡು
ಬೆಂಗಳೂರು, ಏಪ್ರಿಲ್ 5: ರಾಜಸ್ಥಾನದ ಧನ್ಬಾದ್ ಜಿಲ್ಲೆಯಲ್ಲಿರುವ ಕಂಕನಿ ಗ್ರಾಮ ಕೃಷ್ಣಮೃಗಗಳ ಬೀಡು. ಸ್ವಚ್ಛಂದವಾಗಿ ವಿಹರಿಸುವ ಕೃಷ್ಣಮೃಗಗಳು ಪ್ರವಾಸಿಗರ ಪ್ರಮುಖ ಆಕರ್ಷಣೆ.
ಸಲ್ಮಾನ್ ಖಾನ್ ಮತ್ತು ಅವರ ಸಹನಟರ ಮೇಲಿನ ಆರೋಪದ ಕಾರಣದಿಂದ ಈ ಪುಟ್ಟ ಗ್ರಾಮ ದೇಶದಾದ್ಯಂತ ಗಮನ ಸೆಳೆದಿದೆ. ಈ ಪ್ರಕರಣದ ಬಳಿಕ ಕೃಷ್ಣಮೃಗಗಳನ್ನು ನೋಡುವ ಸಲುವಾಗಿ ಅಲ್ಲಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ಅಂತಹುದೇ ಕೃಷ್ಣಮೃಗಗಳ ಆವಾಸ ಸ್ಥಳ ನಮ್ಮ ರಾಜ್ಯದಲ್ಲಿಯೂ ಇದೆ ಎಂಬುದು ಗೊತ್ತೇ?

ಹೌದು. ಅಪರೂಪದ ಕೃಷ್ಣಮೃಗಗಳ ಸಂತತಿಯನ್ನು ವೀಕ್ಷಿಸಲು ನೀವು ಮೃಗಾಲಯಕ್ಕೋ ಅಥವಾ ವನ್ಯಜೀವಿ ಉದ್ಯಾನಕ್ಕೋ ಹಣ ತೆತ್ತು ಹೋಗುವ ಅಗತ್ಯವಿಲ್ಲ. ಸುತ್ತಾಟದ ಹುಮ್ಮಸ್ಸು ಇದ್ದವರು ವಾಹನದಲ್ಲಿ ತೆರಳಿ ಈ ಸುರುಳಿಯಾಕಾರದ ಕೊಂಬಿನ ಜೀವಿಗಳನ್ನು ನೋಡಿ ಬರಬಹುದು. ಹಾಗೆಯೇ ಅದರ ಸಮೀಪದಲ್ಲಿರುವ ಬೃಹತ್ ಏಕಶಿಲಾ ಬೆಟ್ಟವನ್ನು ಏರಿ ಹೊಸ ಅನುಭವವನ್ನೂ ಪಡೆದುಕೊಳ್ಳಬಹುದು.
ಮಧುಗಿರಿ ಸಮೀಪದ ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ಧಾಮದಲ್ಲಿ ಕಾಲಿಟ್ಟರೆ, ಚೆಂಗನೆ ಪುಟಿದು ಓಡುವ ಚೆಂದದ ಕೃಷ್ಣಮೃಗಗಳು ಎದುರುಗೊಳ್ಳುತ್ತವೆ. ಮನುಷ್ಯರನ್ನು ಕಂಡರೆ ಭಯಪಟ್ಟು ಓಡಿದರೂ, ಆನತಿ ದೂರದ ಕುರುಚಲು ಗಿಡಗಳ ನಡುವಲ್ಲಿ ಅಡಗಿ ನಿಂತು ಭಯಮಿಶ್ರಿತ ಕೌತುಕದಿಂದ ಇಣುಕುತ್ತವೆ.
ಕೃಷ್ಣಮೃಗಗಳ ಸಂಖ್ಯೆ ಹೆಚ್ಚಳ:
ಇದು ನಿರ್ಬಂಧಗಳಿಲ್ಲದ ಕೃಷ್ಣಮೃಗ ಧಾಮ. ಸುಮಾರು 800 ಎಕರೆಗಳಷ್ಟು ವಿಸ್ತಾರವಾಗಿರುವ ಈ ಧಾಮದಲ್ಲಿ ಅಂದಾಜು 545 ಕೃಷ್ಣಮೃಗಗಳಿವೆ ಎಂದು 2015ರಲ್ಲಿ ನಡೆದ ಗಣತಿ ವರದಿ ತಿಳಿಸಿದೆ.

1997 ರ ವೇಳೆಗೆ 408 ಕೃಷ್ಣಮೃಗಗಳಿದ್ದವು. ನಂತರದ ದಿನಗಳಲ್ಲಿ ಕೃಷ್ಣಮೃಗಗಳ ಸಂಖ್ಯೆ ಏರಿಕೆಯಾದರೂ, 2009ರ ವೇಳೆಗೆ ಗಣನೀಯ ಕುಸಿತ ಕಂಡಿತ್ತು. ಈಗ
ಕೃಷ್ಣಮೃಗಳ ಸಂಖ್ಯೆ ಹೆಚ್ಚಳವಾಗಿರುವುದು ಗಣತಿಯಿಂದ ತಿಳಿದುಬಂದಿದೆ.
ರಕ್ಷಣೆ ಇದೆಯೇ?:
ಕಂಕನಿ ಗ್ರಾಮದಲ್ಲಿ ಗುಂಡಿನ ಮೊರೆತ ಕೇಳಿದ್ದ ಗ್ರಾಮಸ್ಥರು ಮನೆಯಿಂದ ಹೊರಬಂದಿದ್ದರು. ಕೃಷ್ಣಮೃಗಗಳ ರಕ್ಷಣೆಯನ್ನು ತಮ್ಮ ಕರ್ತವ್ಯ ಎಂದೇ ಭಾವಿಸಿರುವ ಅವರು ಸಲ್ಮಾನ್ ಮತ್ತು ಅವರ ಸಹನಟರನ್ನು ಹಿಡಿಯಲು ಪ್ರಯತ್ನಿಸಿದ್ದರು.
ಆದರೆ, ಮೈದನಹಳ್ಳಿಯ ಈ ಕೃಷ್ಣಮೃಗ ಧಾಮದ ಸುತ್ತಮುತ್ತ ಹಳ್ಳಿಗಳಿಲ್ಲ. ಈ ಹಾದಿಯಲ್ಲಿ ಮನೆಗಳೂ ವಿರಳ. ಇಲ್ಲಿನ ಕೃಷ್ಣಮೃಗಗಳು ಧಾಮದ ಆಚೆಗೂ ಇರುವ ಗೋಮಾಳದ ಪ್ರದೇಶಗಳಲ್ಲಿ ಮುಕ್ತವಾಗಿ ಅಡ್ಡಾಡುತ್ತವೆ.

ಪ್ರವಾಸಿಗರಿಗೆ ಇಲ್ಲಿ ಪ್ರವೇಶಕ್ಕೆ ಯಾವ ನಿರ್ಬಂಧವೂ ಇಲ್ಲ. ವಾಹನದಲ್ಲಿ ನೇರವಾಗಿ ಉದ್ಯಾನದೊಳಗೆ ಪ್ರವೇಶಿಸಬಹುದು. ಅಲ್ಲಿನ ರಸ್ತೆಗಳಲ್ಲಿ ಸುತ್ತಾಡಿ ಕೃಷ್ಣಮೃಗಗಳ ಚಿತ್ರಗಳನ್ನು ಸೆರೆಹಿಡಿದು ಖುಷಿಪಡಬಹುದು.
ಪ್ರವಾಸಿಗರಿಗೆ ಇದು ಅನುಕೂಲಕರವಾದರೂ, ಕೃಷ್ಣಮೃಗಗಳ ರಕ್ಷಣೆಗೆ ಯಾವ ವ್ಯವಸ್ಥೆಯೂ ಇಲ್ಲದಿರುವುದು ಆತಂಕಕಾರಿಯೂ ಹೌದು.
ಕಾವಲು ಮತ್ತು ಸೂಕ್ತ ಭದ್ರತೆಯುಳ್ಳ ಬೇಲಿ ಇಲ್ಲದಿರುವುದರಿಂದ ಕೃಷ್ಣಮೃಗಗಳಿಗೆ ತೊಂದರೆಯಾದರೂ ರಕ್ಷಣೆ ಮಾಡುವ ವ್ಯವಸ್ಥೆ ಇಲ್ಲ. ಸುತ್ತಮುತ್ತಲು ಜನ ವಸತಿ ಇಲ್ಲದಿರುವುದರಿಂದ ಬೇಟೆಯಂತಹ ಚಟುವಟಿಕೆ ನಡೆದರೂ ಅವು ಗಮನಕ್ಕೆ ಬಾರದೆ ಹೋಗುವ ಸಾಧ್ಯತೆಯೇ ಹೆಚ್ಚು.
ಹೋಗುವುದು ಹೇಗೆ?:
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸರಹದ್ದಿನಲ್ಲಿರುವ ಈ ಪುಟ್ಟ ಧಾಮಕ್ಕೆ ಸ್ವಂತ ವಾಹನದಲ್ಲಿ ಹೋಗುವುದು ಸಲೀಸು. ಬೆಂಗಳೂರಿನಿಂದ ಸುಮಾರು 110 ಕಿಮೀ ದೂರದಲ್ಲಿ ಈ ಹಳ್ಳಿಯಿದೆ.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಇಲ್ಲಿಗೆ ತೆರಳಿದರೆ ಕೃಷ್ಣಮೃಗಗಳ ದೊಡ್ಡ ಹಿಂಡೇ ಗೋಚರಿಸುತ್ತದೆ. ಸದ್ದುಗದ್ದಲ ಮಾಡದೆ ಅವುಗಳ ಸ್ವಚ್ಛಂದಕ್ಕೆ ಧಕ್ಕೆ ಮಾಡದಿದ್ದರೆ, ಹೆಚ್ಚು ಸಮಯ ದರ್ಶನ ನೀಡುತ್ತವೆ.
ಮಧುಗಿರಿ ಮಾರ್ಗದಲ್ಲಿಯೇ ಬೃಹತ್ ಏಕಶಿಲಾ ಬೆಟ್ಟವಿದೆ. ಪ್ರವಾಸಕ್ತರಿಗೆ ಇದು ತುಸು ತ್ರಾಸದಾಯಕ ಎನಿಸಿದರೂ ಅದನ್ನು ಹತ್ತಿಳಿಯುವ ಸಾಹಸ ಅದ್ಭುತ ಅನುಭವ ನೀಡುವುದು ನಿಜ.











Click it and Unblock the Notifications