ಸಿದ್ದರಾಮಯ್ಯಗೆ ತುಮಕೂರಿನಿಂದ ಹಳೆ ಚಡ್ಡಿಗಳನ್ನು ಕಳುಹಿಸಿ ಪ್ರತಿಭಟನೆ
ತುಮಕೂರು, ಜೂ. 9: ರಾಜ್ಯದಾದ್ಯಂತ ಆರ್.ಎಸ್.ಎಸ್. ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ, ಇಂದು ಗುರುವಾರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಚಡ್ಡಿ ರವಾನಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿ ಹಿರಿಯ, ಕಿರಿಯ ಮುಖಂಡರು ಹಾಗೂ ಎಸ್ಸಿ ಮೋರ್ಚಾದ ಪದಾಧಿಕಾರಿಗಳು, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್, ಬಿಜೆಪಿಗೆ ಆರ್.ಎಸ್.ಎಸ್ ಮಾತೃ ಸಮಾನ. ನನ್ನಂತಹ ಲಕ್ಷಾಂತರ ಜನರನ್ನು ಬೆಳೆಸಿ, ಪಕ್ಷದಲ್ಲಿ ಹಲವು ಹುದ್ದೆಗಳನ್ನು ನೀಡಿದೆ.ಇದರ ಅರಿವಿಲ್ಲದ ಸಿದ್ದರಾಮಯ್ಯ ಆರ್.ಎಸ್.ಎಸ್.ನಲ್ಲಿ ದಲಿತರನ್ನು ಕೀಳಾಗಿ ಕಾಣಲಾಗುತ್ತಿದೆ. ನಿಮ್ಮ ಯೋಗ್ಯತೆ ಇಷ್ಟೇ ಎಂದು ಚಡ್ಡಿ ರವಾನೆ ಆಂದೋಲನದ ನೇತೃತ್ವ ವಹಿಸಿರುವ ಚಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು.

ಕಾಂಗ್ರೆಸ್ ಸ್ಥಿತಿ ಏನು ಅರ್ಥಮಾಡಿಕೊಳ್ಳಿ
ಸಿದ್ದರಾಮಯ್ಯ ಅವರು ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂರನ್ನು ಓಲೈಸಿ, ದಲಿತರು, ಹಿಂದುಳಿದವರನ್ನು ಹೀನಾಯವಾಗಿ ಕಾಣುತ್ತಿದ್ದಾರೆ.ಇದು ತರವಲ್ಲ.ನೀವು ಮುಸ್ಲಿಂ ಓಲೈಸುವ ಕೆಲಸವನ್ನು ಮುಂದುವರೆಸಿ, ಆದರೆ ಆರ್.ಎಸ್.ಎಸ್ ತಂಟೆಗೆ ಬರಬೇಡಿ, ಇದೇ ಚಾಳಿಯನ್ನು ಮುಂದುವರೆಸಿದರೆ ನಿಮ್ಮಗೆ ಕಂಡಲ್ಲಿ ಘೇರಾವ್ ಹಾಕುವ ಪ್ರತಿಭಟನೆಯನ್ನು ಆರ್ ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಬೇಕಾಗುತ್ತದೆ ಎಂದು ಓಂಕಾರ್ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ಭೈರಪ್ಪ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿಯ ಆಡಳಿತದಲ್ಲಿ ಫಲಾನುಭವಿಗಳಾಗಿರುವ ಲಕ್ಷಾಂತರ ಜನರು ನಮ್ಮ ಸಮಾವೇಶಗಳಲ್ಲಿ ಸೇರುತ್ತಿರುವುದನ್ನು ನೋಡಿ ಸಿದ್ದರಾಮಯ್ಯ ಅವರಿಗೆ ಸಹಿಸಲಾಗದೆ ಈ ರೀತಿಯ ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಎನು ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ, ಕಳೆದ 10 ವರ್ಷದ ಹಿಂದೆ ಹುಟ್ಟಿದ ಪಕ್ಷವೂ 2 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.138 ವರ್ಷದ ಪಕ್ಷವಾಗಿರುವ ಕಾಂಗ್ರೆಸ್ ಸಹ 2 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ನಿಮ್ಮ ಹೇಳಿಕೆಗಳು ಹೀಗೆಯೇ ಮುಂದುವರೆದರೆ ಗಾಂಧಿ ಕಂಡ ಕಾಂಗ್ರೆಸ್ ಮುಕ್ತ ಭಾರತಕ್ಕೆ ನೀವೆ ನಾಂಧಿ ಹಾಡಿದಂತಾಗುತ್ತದೆ ಎಂದರು.

ದ್ರೋಹ ಬಗೆದು ಸಿಎಂ ಆದ ಸಿದ್ದರಾಮಯ್ಯ
ಬಿಜೆಪಿ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಬಿಜೆಪಿಯ ಜನಪರತೆಯನ್ನು ನೋಡಿ, ಸಿದ್ದರಾಮಯ್ಯ ಅವರ ಮಾತಿನ ದಾಟಿ ಮತ್ತು ಕಾರ್ಯವೈಖರಿ ಬದಲಾಗಿದೆ. ನೀವು ಅಧಿಕಾರಕ್ಕಾಗಿ ಏನು ಮಾಡಲು ಹೇಸುವವರಲ್ಲ. ರಾಜಕೀಯ ಜೀವನ ನೀಡಿದ ಜೆಡಿಎಸ್ ಗೆ ದ್ರೋಹ ಬಗೆದು, ಕಾಂಗ್ರೆಸ್ ನಲ್ಲಿ ಸಿ.ಎಂ.ಆಗಿ, ಈಗ ಅಲ್ಲಿಯೂ ಡಿಕೇಶಿ, ಡಾ.ಜಿ.ಪರಮೇಶ್ವರ್ ಅಂತಹವರಿಗೆ ದ್ರೋಹ ಬಗೆಯಲು ಹೊರಟಿದ್ದೀರಿ, ಅಧಿಕಾರಕ್ಕಾಗಿ ಎಂತಹ ಕೆಳಮಟ್ಟಕ್ಕೂ ಇಳಿಯಲು ಸಿದ್ದ ಎಂಬುದನ್ನು ನಿಮ್ಮ ರಾಜಕೀಯ ನಡೆಗಳೇ ಹೇಳುತ್ತವೆ.ವಿಧಾನಸಭೆಯಲ್ಲಿ ಮಾತನಾಡುವಾಗ ನಿಮ್ಮ ಪಂಜೆ ಉದುರಿದಾಗ, ನಿಮ್ಮ ಮಾನ ಕಾಪಾಡಿದ್ದು ಇದೇ ಚಡ್ಡಿ, ಅಂತಹ ಚಡ್ಡಿಯ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಪಿ.ಲೋಕೇಶ್, ನರಸಿಂಹಮೂರ್ತಿ,ವೈ.ಹೆಚ್.ಹುಚ್ಚಯ್ಯ, ರಮೇಶ್, ಹೆಚ್.ಎನ್.ಚಂದ್ರಶೇಖರ್,ಕೆ.ಪಿ.ಮಹೇಶ್,ವರದಯ್ಯ,ಹನುಮಂತರಾಜು,ಆಟೋ ಯಡಿಯೂರಪ್ಪ,ಶಬ್ಬೀರ್, ಗಣೇಶ್.ಜಿ. ಪ್ರಸಾದ್, ಎಂ.ಗೋಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಳೆ ಚಡ್ಡಿ ಕಳುಹಿಸಿ ಆಕ್ರೋಶ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ನವರ ಚಡ್ಡಿ ಸುಡುವ ಅಭಿಯಾನ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಹಳೆ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುವ ಮೂಲಕ ಹಿಂದೂ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಎಸ್.ಎಸ್.ಮುಖಂಡ ಮಂಜುನಾಥ ಮಾತನಾಡಿ, ಸಿದ್ದರಾಮಯ್ಯನವರು ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರಾಗಿದ್ದರೂ ಸಹ ತಮ್ನ ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಯಾಗಿರುವ ಆರ್.ಎಸ್.ಎಸ್ ಟೀಕಿಸುವುದು ಖಂಡನೀಯ. ಅವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲಾ, ಮುಂದಿನ ತಿಂಗಳು ಬೆಂಗಳೂರಿನ ರಾಮೂಹಳ್ಳಿ ಸಮೀಪ ಆರ್.ಎಸ್.ಎಸ್.ನ ಕ್ಯಾಂಪ್ ನಡೆಯುತ್ತದೆ ಅಲ್ಲಿ ಹೋಗಿ ಅವರು ಕ್ಯಾಂಪಿಗೆ ಸೇರಿಕೊಂಡು ಸಂಘದ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಸಂಘದ ತತ್ವ ಸಿದ್ದಾಂತವನ್ನು ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಸಂಘದ ತತ್ವ ಸಿದ್ದಾಂತಗಳನ್ನೇ ತಿಳಿಯದೆ ವಿನಾಕಾರಣ ಸಂಘದವನ್ನು ಟೀಕಿಸುವುದು ಸರಿಯಲ್ಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯವನರು ಚಡ್ಡಿ ವಿಷಯಕ್ಕೆ ದೊಡ್ಡ ಬೆಲೆ ನೀಡಬೇಕಾಗುತ್ತದೆ.

ರಾಜಕೀಯ ಲಾಭಕ್ಕಾಗಿ ಮಾತನಾಡುವುದು ಸರಿಯಲ್ಲ
ಮಂಡ್ಯದಲ್ಲಿ ಒಂದು ವೇಳೆ ಅವರು ಚಡ್ಡಿಗಳನ್ನು ಸುಡುವುದಾದರೆ ನಾವುಗಳೆ ಅವರು ಇರುವ ಸ್ಥಳಕ್ಕೆ ಲಕ್ಷಾಂತರ ಚಡ್ಡಿಗಳನ್ನು ಕಳುಹಿಸುತ್ತೇವೆ ಅವರು ಅವುಗಳನ್ನು ಸುಟ್ಟುಕೊಂಡೆ ಕಾಲ ಕಳೆಯಲಿ ಎಂದು ಟೀಕಿಸಿದರು.
ಕಾಂಗ್ರೆಸ್ ಯುವ ಅಧ್ಯಕ್ಷ ನಲಪಾಡ್ ಪ್ರತಿ ಜಿಲ್ಲೆಗೂ ಬಂದು ಚಡ್ಡಿ ಸುಡುತ್ತೇನೆ ಎಂದು ಹೇಳಿದ್ದಾರೆ ಅವರಿಗೆ ಯಾವುದೆ ಕಷ್ಟ ಅಗಬಾರದು ಅಂತಾ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಚಡಿಗಳನ್ನು ಕೆಪಿಸಿಸಿ ಕಚೇರಿಗೆ ನಾವೇ ಕಳುಹಿಸುತ್ತೇವೆ. ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಿಂದ ಚಡ್ಡಿಗಳು ಕೆಪಿಸಿಸಿ ಕಚೇರಿಗೆ ಬರುತ್ತವೆ ಆಗ ನಲಪಾಡ್ ಮತ್ತು ಕಾಂಗ್ರೆಸ್ ಮುಖಂಡರು ಎಲ್ಲಾ ಜಿಲ್ಲೆಗಳ ಚಡ್ಡಿಗಳ ಸುಡುವೆ ಕೆಲಸವನ್ನು ಮಾಡಲಿ. ಯಾವುದೇ ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತೊಂದು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡಲಿ ಅದನ್ನು ಬಿಟ್ಟು ಸದಾಕಾಲ ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಸಂಘದ ವಿರುದ್ಧ ಮಾತನಾಡಬಾರದು ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಬಸವರಾಜ ಸ್ವಾಮಿಗಳು, ಹಿಂದೂ ಸಂಘಟನೆಯ ಹಿರಿಯ ಮುಖಂಡ ಕುಕ್ಕಿಲಿ ಮಂಜುನಾಥ್, ಮುರುಗೇಶ್, ಲೋಕೇಶ್, ತೆರ್ನೆನಹಳ್ಳಿ ಪ್ರದೀಪ್, ಅರುಣ್ಕುಮಾರ್ ಮತ್ತಿತ್ತರರು ಹಾಜರಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications