ಗೆಲ್ಲುವ ಕುದುರೆಗಷ್ಟೇ ಟಿಕೆಟ್: ಕರಂದ್ಲಾಜೆ ಮಾತಿಗೆ ಎಷ್ಟೊಂದು ಅರ್ಥ!
ತುಮಕೂರು, ಏಪ್ರಿಲ್ 10: ಚುನಾವಣೆ ಆಯೋಗವು ಕಾಂಗ್ರೆಸ್ ಆಣತಿಯಂತೆ ನಡೆಯುತ್ತಿದೆ. ಕೇಸರಿ ಎಲ್ಲೇ ಕಂಡರೂ ಅಳಿಸುವ ಕಾರ್ಯ ನಡೆಯುತ್ತಿದೆ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಮಂಗಳವಾರ ತಿಳಿಸಿದರು
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇಲ್ಲಿನ ಗಂಗಸಂದ್ರದ ರೈತ ಶಿವಕುಮಾರ್ ಮನೆಯಲ್ಲಿ ನಡೆದ ಬಿಜೆಪಿಯ ಮುಷ್ಟಿದಾನ್ಯ ಸಂಗ್ರಹ ಸಮಾರೋಪ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಸುಮಾರು ಐದು ಸಾವಿರ ಗ್ರಾಮ ಪಂಚಾಯಿತಿಗಳನ್ನು ನಮ್ಮ ಕಾರ್ಯಕರ್ತರು ತಲುಪಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಭೋಜನ ಮಾಡಬೇಕು ಎನ್ನುವ ಉದ್ದೇಶವಿತ್ತು ಎಂದರು.
ಆದರೆ, ಚುನಾವಣೆ ನೀತಿ ಜಾರಿಯಲ್ಲಿ ಇರುವುದರಿಂದ ನಮ್ಮ ಕಾರ್ಯಕರ್ತರ ಮನೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಜನರ ಭಾವನೆ ಯಡಿಯೂರಪ್ಪ ಅವರ ಪರವಾಗಿದೆ. ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರು ಕೃಷಿಯಿಂದ ಹಿಂದೆ ಸರಿಯುವಂತಾಗಿದೆ. ಯಾವುದೇ ರೈತರು ಆತ್ಮಹತ್ಯೆ ದಾರಿ ಹಿಡಿಯುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರಕಾರ ಬಂದ ಮೇಲೆ ರೈತರ ಕಷ್ಟಗಳು ಪರಿಹಾರವಾಗಲಿವೆ. ರೈತ ಬಂಧು ಯಡಿಯೂರಪ್ಪ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಿದ್ದೇವೆ. ಪ್ರತಿಯೊಂದು ಜಾತಿ- ಜನಾಂಗದ ಜೊತೆ ಸಂವಾದ ಮಾಡಲಿದ್ದೇವೆ ಎಂದರು
ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸಮೀಕ್ಷೆ ಮಾಡಿಸಿದ್ದು, ಗೆಲ್ಲುವ ಕುದುರೆಗಳಿಗೆ ಟಕೆಟ್ ನೀಡುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಎಲ್ಲೆಡೆ ಗೊಂದಲ ಸಾಮಾನ್ಯವಾಗಿದೆ. ಸಮಾಧಾನ ಮಾಡಿಸುವ ಕೆಲಸ ಮಾಡುತ್ತೇವೆ. ಯಾರಿಗೇ ನೋವಾದರೂ ಅವರ ಜೊತೆ ಬಿಜೆಪಿ ಇದ್ದೇ ಇರುತ್ತದೆ. ಯಾರೂ ಬೇಜಾರಾಗುವ ಅಗತ್ಯ ಇಲ್ಲ. ಜನವಿರೋಧಿ, ಹಿಂದೂವಿರೋಧಿ ಸರಕಾರವನ್ನು ಕಿತ್ತೊಗೆಯಬೇಕು ಎಂದರು.
ನಾನು ಸಂಸದೆ ಆಗಿರುವುದರಿಂದ ಯಾವುದೇ ಕ್ಷೇತ್ರದ ಆಕಾಂಕ್ಷಿ ಅಲ್ಲ. ನಾನು ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್, ಡಾ.ಹುಲಿನಾಯ್ಕರ್, ಹುಚ್ಚಯ್ಯ ಇತರರಿದ್ದರು.