ಕೋವಿಡ್; ಕೇರಳದ ಟಿಡಿಬಿ ಆದಾಯ 21 ಕೋಟಿಗೆ ಕುಸಿತ!
ತಿರುವನಂತಪುರಂ, ಮೇ 28; ಕೋವಿಡ್ ಹಿನ್ನಲೆಯಲ್ಲಿ ಕೇರಳದಲ್ಲಿನ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಡಿಯಲ್ಲಿನ ಹಲವು ದೇವಾಲಯಗಳಿಗೆ ಭಕ್ತರ ಪ್ರದೇಶ ನಿಷೇಧಿಸಲಾಗಿದೆ. ಇದರಿಂದಾಗಿ ಮಂಡಳಿಗೆ ಭಾರೀ ನಷ್ಟವಾಗಿದೆ.
ಕೇರಳ ರಾಜ್ಯದ ದಕ್ಷಿಣ ಭಾಗದಲ್ಲಿರುವ ಎಲ್ಲಾ ಪ್ರಮುಖ ದೇವಾಲಯಗಳು ಟಿಡಿಬಿ ವ್ಯಾಪ್ತಿಗೆ ಬರುತ್ತದೆ. ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯ ಸಹ ಮಂಡಳಿ ವ್ಯಾಪ್ತಿಯಲ್ಲೇ ಇದೆ.
ಕೋವಿಡ್ ಪರಿಣಾಮ ಟಿಡಿಬಿ ಆದಾಯದಲ್ಲಿ ಭಾರೀ ಕುಸಿತವಾಗಿದೆ. ಇದರಿಂದಾಗಿ ಮಂಡಳಿ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ನೀಡಲು ಸಹ ಹಣದ ಕೊರತೆ ಎದುರಾಗಿದೆ.

ವರದಿಗಳ ಪ್ರಕಾರ ಟಿಡಿಬಿ ಪ್ರತಿ ತಿಂಗಳು ವೇತನ, ಪಿಂಚಣಿಗಾಗಿ ಸುಮಾರು 40 ಕೋಟಿ ರೂ. ಖರ್ಚು ಮಾಡುತ್ತಿದೆ. ಈಗ ವೇತನ ಪಾವತಿಗೆ ತೊಂದರೆ ಉಂಟಾಗಿದ್ದು, ಅನುದಾನ ನೀಡುವಂತೆ ಮಂಡಳಿ ಕೇರಳ ಸರ್ಕಾರದ ಮೊರೆ ಹೋಗಿದೆ.
ಟಿಡಿಬಿ ವ್ಯಾಪ್ತಿಯಲ್ಲಿರುವ ದೇವಾಲಯಗಳ ನಿರ್ವಹಣೆಗಾಗಿಯೇ ಪ್ರತಿ ತಿಂಗಳು 5 ಕೋಟಿ ರೂ. ಬೇಕು. ಮಂಡಳಿಯ ಆದಾಯ 261 ಕೋಟಿಯಿಂದ 21 ಕೋಟಿಗೆ ಕುಸಿತಕಂಡಿದೆ. ಇದರಿಂದಾಗಿ ಹಣದ ಮುಗ್ಗಟ್ಟು ಎದುರಾಗಿದೆ.
ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ನವೆಂಬರ್ ತಿಂಗಳಿನಲ್ಲಿ ಹಬ್ಬಗಳು ಆರಂಭವಾಗಲಿವೆ. ಆಗ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದು, ಮಂಡಳಿ ಆದಾಯವೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕೇರಳದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 24,48,555. ಸಕ್ರಿಯ ಪ್ರಕರಣಗಳ ಸಂಖ್ಯೆ 2,41,972. ಇದುವರೆಗೂ ರಾಜ್ಯದಲ್ಲಿ 8064 ಜನರು ಮೃತಪಟ್ಟಿದ್ದಾರೆ.












Click it and Unblock the Notifications