ಶಬರಿಮಲೆಗೆ ಭಕ್ತರ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನ
ತಿರುವನಂತಪುರಂ, ನವೆಂಬರ್ 29: ಕೋವಿಡ್ ಸಂದರ್ಭದಲ್ಲಿಯೇ ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದೆ. ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು, ದೇವಾಲಯದ ಆದಾಯದಲ್ಲಿಯೂ ಚೇತರಿಕೆ ಕಂಡು ಬಂದಿದೆ.
ಕಳೆದ 12 ದಿನಗಳಲ್ಲಿ ಆದಾಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ ತಿರುವಂಕೂರು ದೇವಾಲಯದ ಆಡಳಿತ ಮಂಡಳಿ ಹೆಚ್ಚಿನ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕೊಡಲು ತೀರ್ಮಾನಿಸಿದೆ. ವಾರದ ದಿನಗಳಲ್ಲಿ 1000, ವಾರಾಂತ್ಯದಲ್ಲಿ 2 ಸಾವಿರ ಭಕ್ತರ ಭೇಟಿಗೆ ಈಗ ಅವಕಾಶವಿದೆ.
ಆಡಳಿತ ಮಂಡಳಿ ಅಧ್ಯಕ್ಷ ಎನ್. ವಾಸು ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ಸರ್ಕಾರದ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದೇವೆ. ಬಳಿಕ ಹೆಚ್ಚಿನ ಭಕ್ತರು ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.

ನಿಲಕಲ್ ಬೇಸ್ ಕ್ಯಾಂಪ್ನಲ್ಲಿ ಕೋವಿಡ್ ಪರೀಕ್ಷೆ ಮಾಡಿದ ಬಳಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಮೊದಲ 12 ದಿನದಲ್ಲಿ 13,529 ಭಕ್ತರು ಭೇಟಿ ನೀಡಿದ್ದಾರೆ. ಭಕ್ತರು, ದೇವಾಲಯದ ಸಿಬ್ಬಂದಿ ಸೇರಿ 37 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಸನ್ನಿಧಾನದಲ್ಲಿಯೇ ಪೊಲೀಸ್ ಸೇರಿದಂತೆ 9 ಮಂದಿಗೆ ಸೋಂಕು ತಗುಲಿದೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತ ಸಂಖ್ಯೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಆದಾಯವೂ ಕುಸಿತವಾಗಿದೆ. 12 ದಿನಗಳಲ್ಲಿ 2 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ದೇವಾಲಯದ ಆದಾಯ 40 ರಿಂದ 45 ಕೋಟಿ ಆಗಿತ್ತು.
ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದ್ದು, ಈ ಕುರಿತು ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ. ವರ್ಚುವಲ್ ಕ್ಯೂ ಬುಕ್ಕಿಂಗ್ ಸಂಖ್ಯೆ ಹೆಚ್ಚಳ ಮಾಡಲು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿದಾಗಿ ಸನ್ನಿಧಾನ, ಪಂಪಾ ಮತ್ತು ನಿಲಕಲ್ನಲ್ಲಿ ಉಚಿತ ಆಹಾರದ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಾಪಾಡಬೇಕಿದೆ.
ವರ್ಚುವಲ್ ಕ್ಯೂ ಮಾದರಿಯನ್ನು ಕೇರಳದ ಪೊಲೀಸ್ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಆಡಳಿತ ಮಂಡಳಿಯೇ ಇದರ ನಿರ್ವಹಣೆಯನ್ನು ನೋಡಿಕೊಳ್ಳಲಿದೆ.
"ಶಬರಿಮಲೆಗೆ ರೋಪ್ ವೇ ಆಳವಡಿಕೆ ಮಾಡುವ ಯೋಜನೆಗೆ ಇನ್ನು ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕಿಲ್ಲ. ಈ ಸಾಧ್ಯತೆ ಕುರಿತು ಅಧ್ಯಯನ ವರದಿ ಪೂರ್ಣಗೊಂಡಿದೆ" ಎಂದು ಆಡಳಿತ ಮಂಡಳಿ ಅಧ್ಯಕ್ಷ ಎನ್. ವಾಸು ಹೇಳಿದ್ದಾರೆ.











Click it and Unblock the Notifications