ಆಡು ಮಾರಿ ಸಿಎಂ ನಿಧಿಗೆ ದೇಣಿಗೆ ನೀಡಿದ್ದ ಸುಬೈದಾ ಕೇರಳ ಪ್ರಮಾಣವಚನ ಸಮಾರಂಭದಲ್ಲಿ ವಿಶೇಷ ಅತಿಥಿ
ಕೊಲ್ಲಂ, ಮೇ 20: ತನ್ನ ಜೀವನೋಪಾಯದ ಮಾರ್ಗವಾಗಿದ್ದ ತನ್ನ ಆಡು, ಕುರಿಗಳನ್ನು ಎರಡು ಬಾರಿ ಮಾರಿ, ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡಿದ ಸುಬೈದಾ ಉಮ್ಮಾ, ಪಿಣರಾಯಿ ನೇತೃತ್ವದ 2.0 ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿನ್ನೆಯಷ್ಟೇ ಅವರಿಗೆ ಕಲೆಕ್ಟರ್ ವಿವಿಐಪಿ ಪಾಸ್ ನೀಡಿದ್ದಾರೆ.
ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸಿಎಂ ಪಿಣರಾಯಿ ವಿಜಯನ್ ನಡೆಸುತ್ತಿದ್ದ ಎಲ್ಲಾ ಪತ್ರಿಕಾಗೋಷ್ಠಿ ಟಿವಿ ಮೂಲಕ ನೋಡುತ್ತಿದ್ದ ಸುಬೈದಾ, ಕೆಲವು ಮಕ್ಕಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದನ್ನು ನೋಡಿದ್ದರು. ಈ ಮಕ್ಕಳಂತೆ ತಾನು ಕೂಡಾ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸುಬೈದಾ, ನಾಲ್ಕು ಆಡುಗಳನ್ನು 12,000 ರೂ. ಗಳಿಗೆ ಮಾರಾಟ ಮಾಡಿ, ಈ ಪೈಕಿ 5,000 ರೂಗಳನ್ನು ಕಲೆಕ್ಟರ್ಗೆ ಹಸ್ತಾಂತರಿಸಿ, ಉಳಿದ ಹಣದಲ್ಲಿ ಬಡವರಿಗೆ ಆಹಾರ ಪೂರೈಸಿದ್ದಾರೆ.
ಇತ್ತೀಚೆಗೆ, ಕೋವಿಡ್ ಲಸಿಕೆ ಉಚಿತವಾಗಿ ಲಭ್ಯವಾಗುವುದಿಲ್ಲ ಎಂಬ ಸುದ್ದಿಯನ್ನು ಕೇಳಿ ಸುಬೈದಾ ಮತ್ತೆ ದೇಣಿಗೆ ನೀಡಲು ನಿರ್ಧರಿಸಿದ್ದು, ಎರಡು ಕುರಿಮರಿ ಮತ್ತು ಎರಡು ದೊಡ್ಡ ಆಡುಗಳನ್ನು ಮತ್ತೆ 16,000 ರೂ.ಗೆ ಮಾರಾಟ ಮಾಡಿ ಇದರಲ್ಲಿ 5,000 ರೂಗಳನ್ನು ಕಲೆಕ್ಟರ್ಗೆ ಹಸ್ತಾಂತರಿಸಿ, ಉಳಿದ ಹಣದಲ್ಲಿ ಬಡವರಿಗೆ ಆಹಾರ ಪೂರೈಸಲು ವ್ಯಯಿಸಿದ್ದಾರೆ.

ಸುಬೈದಾ ಉಮ್ಮಾ ಮತ್ತು ಆಕೆಯ ಕುಟುಂಬವು ಪಲ್ಲಿತೋತ್ತಂ ಪೊಲೀಸ್ ಠಾಣೆ ಎದುರಿನ ಸಂಗಮಂ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಸುಬೈದಾ ಮತ್ತು ಆಕೆಯ ಪತಿ ಅಬ್ದುಲ್ ಸಲಾಮ್ ತಮ್ಮ ಮನೆಯ ಬಳಿ ಚಹಾ ಅಂಗಡಿಯೊಂದನ್ನು ತೆರೆದಿದ್ದು ಆದರೆ ಅದರಲ್ಲಿ ಸಾಕಷ್ಟು ಆದಾಯವಿಲ್ಲದ ಹಿನ್ನೆಲೆ ಆಡುಗಳನ್ನು ಸಾಕುತ್ತಿದ್ದಾರೆ. ನಿಶಾ, ಶೀಜಾ ಮತ್ತು ಕುಂಜುಮೊನ್ ಎಂಬ ಮೂವರು ಮಕ್ಕಳಿದ್ದಾರೆ. ಮೂವರು ವಿವಾಹಿತರು.
ಕೇರಳದ ಪಿಣರಾಯ್ ವಿಜಯನ್ ನೇತೃತ್ವದ 2.0 ಸರ್ಕಾರದ ನೂತನ ಸಚಿವರುಗಳು ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಹೊಸಬರಿಗೆ ಈ ಸಂಪುಟದಲ್ಲಿ ಅವಕಾಶ ನೀಡಿರುವುದು ಮಾದರಿ ನಡೆ ಎಂದು ಶ್ಲಾಘಿಸಲಾಗಿದ್ದರೂ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ. ಶೈಲಜಾಗೆ ಅವಕಾಶ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
Courtesy: thenewsminute












Click it and Unblock the Notifications