ಶ್ರೀಲಂಕಾದ ಆ ವಿಮಾನಗಳು ಇಲ್ಲಿಗೆ ಬಂದರೆ ಕೇರಳಕ್ಕೆ ದುಡ್ಡೇ ದುಡ್ಡು!
ತಿರುವನಂತಪುರಂ, ಜುಲೈ 6: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಇಂಧನ ಕೊರತೆಯು ಇಡೀ ರಾಷ್ಟ್ರವೇ ಪರಾವಲಂಬಿ ಆಗುವಂತೆ ಮಾಡಿದೆ. ಶ್ರೀಲಂಕಾದ ವಿಮಾನಗಳು ಹಾರಾಡುವುದಕ್ಕೆ ಕೇರಳವನ್ನು ಅವಲಂಬಿಸಿವೆ. ಆ ಮೂಲಕ ರಾಜ್ಯದ ವ್ಯಾಪಾರಕ್ಕೆ ಮತ್ತೊಂದು ಅವಕಾಶವನ್ನು ತೆರೆದಿಟ್ಟಿವೆ.
ಶ್ರೀಲಂಕಾದ ವಿಮಾನಗಳು ಇಂಧನವನ್ನು ಭರ್ತಿ ಮಾಡಿಸಿಕೊಳ್ಳುವುದಕ್ಕಾಗಿ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿವೆ. ಇದರಿಂದ ರಾಜ್ಯ ಸರ್ಕಾರವು ಹೆಚ್ಚು ಆದಾಯ ಗಳಿಸುವುದಕ್ಕೆ ಸಾಧ್ಯವಾಗುತ್ತಿದೆ. ಶ್ರೀಲಂಕಾದ ವಿಮಾನಗಳು ಕೇರಳಕ್ಕೆ ಲಾಭವನ್ನು ತಂದು ಕೊಡುತ್ತಿವೆ. ಅದು ಹೇಗೆ ಎಂಬುದನ್ನು ಈ ವರದಿಯ ಮೂಲಕ ತಿಳಿದುಕೊಳ್ಳಿ.
ಪೆಟ್ರೋಲ್ ಕೊರತೆಯಿಂದ ಶಾಲೆಗಳನ್ನೇ ಮುಚ್ಚಿದ ಶ್ರೀಲಂಕಾ!
ಕಳೆದ ಮೇ ತಿಂಗಳ ಕೊನೆಯ ವಾರದಿಂದ, ಇಂಧನ ತುಂಬಲು ತಾಂತ್ರಿಕ ಲ್ಯಾಂಡಿಂಗ್ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸುಮಾರು 1 ಲಕ್ಷ ರೂ ಹೆಚ್ಚುವರಿ ಆದಾಯವನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಮೇಲಿನ ತೆರಿಗೆಯಿಂದ ಆದಾಯವನ್ನು ಪಡೆಯುತ್ತಿದೆ.
ಇಂಧನ ತುಂಬಲು ಹೆಚ್ಚಿನ ವಿಮಾನಗಳನ್ನು ಆಕರ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ವಿಮಾನಗಳಿಗೆ ಇಂಧನ ತುಂಬಿಸುವುದರ ಮೇಲೆ ಶೇ.5ರಷ್ಟು ತೆರಿಗೆ ವಿನಾಯಿತಿಯನ್ನು ನೀಡುತ್ತಿದೆ.
ಶ್ರೀಲಂಕಾದ ವಿಮಾನಗಳಿಗೆ ಇಂಧನ, ಕೇರಳಕ್ಕೆ In-ಧನ!
ಕಳೆದ ಮೇ ತಿಂಗಳಿನಿಂದ ಇದುವರೆಗೂ ಶ್ರೀಲಂಕಾದ ಹಲವು ವಿಮಾನಗಳು ಇಂಧನ ಭರ್ತಿ ಮಾಡಿಸಿಕೊಳ್ಳುವುದಕ್ಕಾಗಿ ಟೆಕ್ನಿಕಲ್ ಲ್ಯಾಂಡಿಂಗ್ ಆಗಿವೆ. ಅದಾನಿ ಗ್ರೂಪ್ ನಿರ್ವಹಿಸುವ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಧನ ಭರ್ತಿಗಾಗಿ ಶ್ರೀಲಂಕಾದಿಂದ 55 ವಿಮಾನಗಳು ಆಗಮಿಸಿದ್ದವು. ಅದೇ ರೀತಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂಧನ ಭರ್ತಿ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಹಿನ್ನೆಲೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಇದುವರೆಗೂ 10 ವಿಮಾನ ನಿಲ್ದಾಣಗಳು ಬಂದು ಇಂಧನ ಭರ್ತಿ ಮಾಡಿಸಿಕೊಂಡಿವೆ ಎಂದು ವರದಿಯಾಗಿದೆ.
ತಿರುವನಂತಪುರಂ ವಿಮಾನಗಳಿಗೆ ಇಂಧನ ತುಂಬುವ ಕೇಂದ್ರ
ತಿರುವನಂತಪುರಂ ವಿಮಾನ ನಿಲ್ದಾಣವು ವಿಮಾನದ ಇಂಧನ ತುಂಬಿಸುವ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂದು ವಿಮಾನಯಾನ ಕ್ಷೇತ್ರದ ತಜ್ಞರು ಹೇಳಿದ್ದಾರೆ. ಮಾಜಿ ವಿಮಾನ ನಿಲ್ದಾಣದ ನಿರ್ದೇಶಕ ವಿ. ಎನ್. ಚಂದ್ರನ್ ಮಾತನಾಡಿ, ಸಿಂಗಾಪುರ-ಗಲ್ಫ್ ವಾಯುಮಾರ್ಗವು ತಿರುವನಂತಪುರದ ಮೇಲೆ ಹಾದುಹೋಗುತ್ತದೆ. ಪ್ರತಿನಿತ್ಯ ಸುಮಾರು 200 ವಿಮಾನಗಳು ಈ ಮಾರ್ಗದಲ್ಲಿ ಹಾರಾಟ ನಡೆಸುತ್ತವೆ. ಹೀಗಾಗಿ, ತಿರುವನಂತಪುರಂ ವಿಮಾನ ನಿಲ್ದಾಣವು ಇಂಧನ ತುಂಬುವ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ಆದಾಗ್ಯೂ, ವಿಮಾನಗಳು ಹೆಚ್ಚು ಆಧುನೀಕರಣಗೊಂಡಂತೆ ತಾಂತ್ರಿಕ ಲ್ಯಾಂಡಿಂಗ್ ಮತ್ತು ಇಂಧನ ತುಂಬುವ ಅಗತ್ಯವು ಕಡಿಮೆಯಾಗುತ್ತಾ ಹೋಗುತ್ತದೆ.
ತಿರುವನಂತಪುರಂನಲ್ಲಿ ಸಿಬ್ಬಂದಿ ಬದಲಾವಣೆಗೂ ಅವಕಾಶ
ಶ್ರೀಲಂಕಾದಲ್ಲಿನ ಪರಿಸ್ಥಿತಿಯಿಂದಾಗಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬುವುದರ ಜೊತೆಗೆ ಸಿಬ್ಬಂದಿ ಬದಲಾವಣೆಗೂ ಸಹ ಅನುಮತಿ ನೀಡಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ತಿರುವನಂತಪುರದಲ್ಲಿ ಇಂಧನ ತುಂಬಿಸಿಕೊಳ್ಳಲು ಬಂದಿದ್ದ 55 ವಿಮಾನಗಳ ಪೈಕಿ 44 ವಿಮಾನಗಳು ಶ್ರೀಲಂಕಾ ಏರ್ಲೈನ್ಸ್ಗೆ ಸೇರಿದ್ದವು. ಉಳಿದ ವಿಮಾನಗಳು ಫ್ಲೈ ದುಬೈ, ಓಮನ್ ಏರ್ ಮತ್ತು ಏರ್ ಅರೇಬಿಯಾಗೆ ಸೇರಿವೆ ಎಂದು ತಿಳಿದು ಬಂದಿದೆ.
ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಬಿಕ್ಕಟ್ಟಿನ ಲಾಭ
ದೇಶದಲ್ಲಿ ಸೃಷ್ಟಿ ಆಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಇಂಧನ ಕೊರತೆಯ ಸಮಸ್ಯೆಯನ್ನು ನೀಗಿಸಿಕೊಳ್ಳುವುದಕ್ಕೆ ಶ್ರೀಲಂಕಾ ಭಾರತದ ಮೇಲೆ ಅವಲಂಬಿಸಿದೆ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಆರ್ಥಿಕ ಬಿಕ್ಕಟ್ಟು ಆದಾಯವನ್ನು ತಂದು ಕೊಡುತ್ತಿವೆ. ಅತಿಹೆಚ್ಚು ಆಹಾರ, ಇಂಧನ ಮತ್ತು ಮೂಲಭೂತ ಸವಲತ್ತುಗಳು ಈ ರಾಜ್ಯಗಳಿಂದ ರವಾನೆ ಆಗುತ್ತಿವೆ.
Recommended Video