ಕೇರಳ: ‘ಲೈಂಗಿಕ ಪ್ರಚೋದನಕಾರಿ ಉಡುಗೆ’ ಎಂಬ ಹೇಳಿಕೆ ನೀಡಿದ ನ್ಯಾಯಾಧೀಶರ ವರ್ಗಾವಣೆ
ತಿರುವನಂತಪುರಂ ಆಗಸ್ಟ್ 24: ಮಹಿಳೆ 'ಲೈಂಗಿಕ ಪ್ರಚೋದನಕಾರಿ' ಉಡುಪುಗಳನ್ನು ಧರಿಸಿದಾಗ ಲೈಂಗಿಕ ಕಿರುಕುಳದ ಅಪರಾಧ ನಿಲ್ಲುವುದಿಲ್ಲ ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೋಝಿಕ್ಕೋಡ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್ ಕೃಷ್ಣ ಕುಮಾರ್ ಅವರನ್ನು ಕೊಲ್ಲಂ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷರಾಗಿ ವರ್ಗಾವಣೆ ಮಾಡಲಾಗಿದೆ.
ಕೇರಳ ಹೈಕೋರ್ಟ್ ರಿಜಿಸ್ಟ್ರಾರ್-ಜನರಲ್ ಪಿ ಕೃಷ್ಣ ಕುಮಾರ್ ಅವರು ಮಂಗಳವಾರ ವರ್ಗಾವಣೆ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಮೂವರು ಜಿಲ್ಲಾ ಮಟ್ಟದ ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆ ಸೇರಿದೆ. ಎರಡು ಆಪಾದಿತ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ಗೆ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಧೀಶರ ಅವಲೋಕನಗಳು ಕೇರಳದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದವು. ಇದು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಪ್ರೇರೇಪಿಸಿತು.
ಮೊದಲ ಪ್ರಕರಣದಲ್ಲಿ ಚಂದ್ರನ್ಗೆ ಜಾಮೀನು ನೀಡುವಾಗ, ನ್ಯಾಯಾಧೀಶರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿನ ಅಪರಾಧಗಳು ನಿಲ್ಲುವುದಿಲ್ಲ ಎಂದು ಗಮನಿಸಿದರು. ಎರಡನೇ ಪ್ರಕರಣದಲ್ಲಿ, ಮಹಿಳೆ "ಲೈಂಗಿಕ ಪ್ರಚೋದನಕಾರಿ" ಉಡುಪುಗಳನ್ನು ಧರಿಸಿದಾಗ ಲೈಂಗಿಕ ಕಿರುಕುಳದ ಅಪರಾಧ ನಿಲ್ಲುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಯುವ ಬರಹಗಾರ್ತಿಯೊಬ್ಬರಿಂದ ದೂರು
ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರಾಗಿರುವ ಚಂದ್ರನ್ ಅವರ ವಿರುದ್ಧ 2020ರಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿತ್ತು. 2020ರ ಫೆಬ್ರವರಿ 8ರಂದು ನಂದಿ ಬೀಚ್ನಲ್ಲಿ ನಡೆದ ಶಿಬಿರ ಒಂದರಲ್ಲಿ ಚಂದ್ರನ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವ ಬರಹಗಾರ್ತಿಯೊಬ್ಬರು ದೂರು ನೀಡಿದ್ದರು. ತಮ್ಮ ಜಾಮೀನು ಅರ್ಜಿಯ ಜತೆಗೆ, 74 ವರ್ಷದ ಚಂದ್ರನ್ ಅವರು ನ್ಯಾಯಾಲಯಕ್ಕೆ ದೂರುದಾರ ಯುವತಿಯ ಫೋಟೊಗಳನ್ನು ಕೂಡ ಹಾಜರುಪಡಿಸಿದ್ದರು.
'ಪ್ರಚೋದನಾಕಾರಿ ಉಡುಪಿನಿಂದ ಲೈಂಗಿಕ ಕಿರುಕುಳ ಹೆಚ್ಚಳ'
ತನ್ನ ಆದೇಶವನ್ನು ಕಾಯ್ದಿರಿಸಿರುವ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯ, ಯುವತಿಯು 'ಲೈಂಗಿಕವಾಗಿ ಪ್ರಚೋದನಾಕಾರಿ ಉಡುಪುಗಳನ್ನು ಧರಿಸಿದ್ದರಿಂದ' ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A ಅಡಿಯಲ್ಲಿನ ಅಪರಾಧವು ಮಾನ್ಯವಾಗುವುದಿಲ್ಲ ಎಂದು ಕೇರಳ ಕೋರ್ಟ್ ಹೇಳಿತ್ತು.
"ಆರೋಪಿಯು ಜಾಮೀನು ಅರ್ಜಿಯ ಜತೆಗೆ ಹಾಜರುಪಡಿಸಿರುವ ಚಿತ್ರಗಳು, ದೂರುದಾರೆಯು ಸ್ವತಃ ಲೈಂಗಿಕ ಪ್ರಚೋದನಾಕಾರಿಯಾಗಿರುವ ಕೆಲವು ಉಡುಪುಗಳನ್ನು ಧರಿಸಿದ್ದರು ಎಂಬ ವಾಸ್ತವವನ್ನು ಬಹಿರಂಗಪಡಿಸಿದೆ. ಹೀಗಾಗಿ ಆರೋಪಿ ವಿರುದ್ಧದ ಸೆಕ್ಷನ್ 354ಎ ಮೇಲ್ನೋಟಕ್ಕೆ ಸಿಂಧುವಾಗುವುದಿಲ್ಲ" ಎಂದು ಕೋರ್ಟ್ ಹೇಳಿತ್ತು.
ಚಂದ್ರನ್ ಅನುಚಿತ ವರ್ತನೆ ಆರೋಪ ತಳ್ಳಿ ಹಾಕಿದ್ದ ಕೋರ್ಟ್
ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ 74 ವರ್ಷದ ಚಂದ್ರನ್ ಅವರು, ಬೇರೊಬ್ಬ ವ್ಯಕ್ತಿಯ ಮೇಲೆ ಬಲಾತ್ಕಾರ ನಡೆಸಲು ಸಾಧ್ಯ ಎನ್ನುವುದು ನಂಬಲು ಸಾಧ್ಯವಿಲ್ಲ ಎಂದು ಸಹ ಅಭಿಪ್ರಾಯಪಟ್ಟಿತ್ತು. "ದೈಹಿಕ ಸಂಪರ್ಕ ನಡೆದಿದೆ ಎಂದು ಒಪ್ಪಿಕೊಂಡರೂ, 74 ವರ್ಷವಾಗಿರುವ ಮತ್ತು ದೈಹಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಯು ದೂರುದಾರೆಯನ್ನು ಬಲವಂತವಾಗಿ ಎಳೆದು ತಮ್ಮ ತೊಡೆ ಮೇಲೆ ಕೂರಿಸಿಕೊಳ್ಳುವಂತೆ ಮಾಡಿದ್ದಾರೆ ಎನ್ನುವುದನ್ನು ನಂಬುವುದು ಅಸಾಧ್ಯ" ಎಂದು ಆದೇಶದಲ್ಲಿ ಹೇಳಲಾಗಿದೆ. 2020ರ ಫೆಬ್ರವರಿ 8ರಂದು ನಂದಿ ಬೀಚ್ನಲ್ಲಿ ಶಿಬಿರ ಆಯೋಜಿಸಿದ್ದ ಚಂದ್ರನ್ ಅವರು, ತಮ್ಮನ್ನು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದರು.
ಐಪಿಸಿಯ ಸೆಕ್ಷನ್ 354ಎ (2), 341 ಮತ್ತು 354ರ ಸೆಕ್ಷನ್ಗಳ ಅಡಿ ಈ ವರ್ಷದ ಜುಲೈನಲ್ಲಿ ಕೋಯಿಕ್ಕೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದೂರು ನೀಡಲು ಎರಡು ವರ್ಷ ಬೇಕೆ?
ಈ ಪ್ರಕರಣದ ಶುದ್ಧ ಸುಳ್ಳು ಮತ್ತು ಚಂದ್ರನ್ ಅವರ ವಿರೋಧಿಗಳು ಸೃಷ್ಟಿಸಿರುವ ಕಥೆ ಎಂದು ಅವರ ಪರ ವಕೀಲರು ಪ್ರತಿ ಆರೋಪ ಮಾಡಿದ್ದರು. 2020ರಲ್ಲಿಯೇ ಪ್ರಕರಣ ನಡೆದಿದ್ದರೆ, ದೂರು ನೀಡಲು ಎರಡು ವರ್ಷ ಏಕೆ ಬೇಕಾಯಿತು ಎಂದು ಅವರು ಪ್ರಶ್ನಿಸಿದ್ದರು.
ಚಂದ್ರನ್ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣ ಇದು. ಕೋಯಿಲಾಂಡಿಯಲ್ಲಿ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಚಂದ್ರನ್ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ದಾಖಲಿಸಲಾಗಿತ್ತು. ಆ ಪ್ರಕರಣದಲ್ಲಿ ಅವರು ಆಗಸ್ಟ್ 2ರಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
Recommended Video