'ಅಯ್ಯ'ಪ್ಪಾ ಕೇಂದ್ರ ಸಚಿವರ ಬಾಯಲ್ಲಿ ಇದೆಂಥಾ ಮಾತು?
ತಿರುವನಂತಪುರಂ, ನವೆಂಬರ್.18: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಂದರೆ ವಿಶಿಷ್ಟ ಆಚರಣೆಗಳ ನೆಲೆ ಎಂಬ ನಂಬಿಕೆಯಿದೆ. ಈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೋ ಬೇಡವೋ ಎಂಬ ವಿಚಾರ ತಲೆತಲಾಂತರಗಳಿಂದಲೂ ಚರ್ಚೆ ಆಗುತ್ತಲೇ ಇದೆ.
ಮಹಿಳೆಯರಿಗೆ ದೇವಸ್ಥಾನ ಪ್ರವೇಶ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೋರ್ಟ್ ಕೂಡಾ ವಿಚಾರಣೆ ನಡೆಸಿದೆ. ಇದು ಕೋಟಿ ಕೋಟಿ ಭಕ್ತರ ನಂಬಿಕೆ ವಿಚಾರವಾಗಿದೆ. ಹೀಗಾಗಿ ಕೂಲಂಕುಶ ವಿಚಾರಣೆ ನಡೆಸುವುದಕ್ಕಾಗಿ ಸುಪ್ರೀಂಕೋರ್ಟ್, ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ನ ಸಪ್ತಸದಸ್ಯರ ಪೀಠಕ್ಕೆ ವಿಚಾರಣೆಯನ್ನು ವರ್ಗಾವಣೆಗೊಳಿಸಿತ್ತು.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಮುರಳೀಧರನ್ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ನೀಡಿರುವ ಒಂದೇ ಒಂದು ಹೇಳಿಕೆ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಯ್ಯಪ್ಪ ಸ್ವಾಮಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಛೇ.. ಛೇ.. ಇಂಥ ಮಾತು ಆಡೋದಾ?
ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರೆಲ್ಲ ನಗರದ ನಕ್ಸಲರಿದ್ದಂತೆ ಎಂದು ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿಕೆ ನೀಡಿದ್ದಾರೆ. ಈ ದೇವಸ್ಥಾನಕ್ಕೆ ತೆರಳುವ ಭಕ್ತರು ನಿಜವಾದ ಭಕ್ತರೇ ಅಲ್ಲ. ಅವರೆಲ್ಲ ಅರಾಜಕತೆವಾದಿಗಳು ಹಾಗೂ ನಾಸ್ತಿಕರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಅಯ್ಯ'ಪ್ಪಾ ಇಂಥಾ ಮಾತಾ ಹೇಳೋದು?
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿರುವವರು ಭಕ್ತರೇ ಅಲ್ಲ, ವೇಷ ಬದಲಿಸಿಕೊಂಡು ಹೋಗುತ್ತಿರುವ ನಗರದ ನಕ್ಸಲರು ಎಂದು ನನಗೆ ಅನಿಸುತ್ತದೆ. ಅಲ್ಲಿಗೆ ತೆರಳುವ ಎಲ್ಲರೂ ಭಕ್ತರೇ ಎಂಬುದನ್ನು ಮೊದಲು ಸಾಬೀತುಪಡಿಸಬೇಕು. ಈ ಬಗ್ಗೆ ದೇವಸ್ಥಾನಕ್ಕೆ ತೆರಳುವವವರನ್ನು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಮೂಲಕ ಮುರಳೀಧರ್ ವಿವಾದ ಸೃಷ್ಟಿಸಿದ್ದಾರೆ. ಶನಿವಾರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆದಿದ್ದು, ಅದರ ಮರುದಿನ ಎಂದರೆ ನವೆಂಬರ್.17ರ ಬಾನುವಾರ ಕೇಂದ್ರ ಸಚಿವರು ಇಂಥದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇವಸ್ಥಾನಕ್ಕೆ ಮಹಿಳೆಯರಿಗಿಲ್ಲ ಈ ಬಾರಿ ಪ್ರವೇಶ
ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆಯ ಋತು ನವೆಂಬರ್.16ರ ಶನಿವಾರದಿಂದ ಶುರುವಾಗಿದೆ. ಈ ಹಿಂದೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು, ಈ ಆದೇಶಕ್ಕೆ ಯಾವುದೇ ತಡೆ ನೀಡಿಲ್ಲ. ಹೀಗಿದ್ದರೂ ಈ ಬಾರಿ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಲಾಗುತ್ತಿಲ್ಲ. ಕಳೆದ ಶನಿವಾರ ದೇವಸ್ಥಾನಕ್ಕೆ ಹೊರಟಿದ್ದ 30 ಮಂದಿ ಮಹಿಳೆಯರ ತಂಡವನ್ನು ಪಂಪಾ ಬಳಿ ತಡೆದು ವಾಪಸ್ ಕಳುಹಿಸಲಾಗಿದೆ.

ಈ ಬಾರಿ ಪ್ರಚಾರ ಗಿಟ್ಟಿಸಿಕೊಳ್ಳಲು ಅವಕಾಶವಿಲ್ಲ
ಕಳೆದ ಬಾರಿ 10 ರಿಂದ 50ರ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಸ್ವತಃ ಕೇರಳ ಸರ್ಕಾರವೇ ಅವಕಾಶ ನೀಡಿತ್ತು. ಅದಕ್ಕಾಗಿ ಮಹಿಳಾ ಭಕ್ತರಿಗೆ ರಕ್ಷಣೆಯನ್ನೂ ಒದಗಿಸಲಾಗಿತ್ತು. ಆದರೆ, ಈ ಬಾರಿ ಸರ್ಕಾರವೇ ತನ್ನ ನಿಲುವು ಬದಲಿಸಿದೆ. ಪ್ರಚಾರಕ್ಕಾಗಿ ದೇವಸ್ಥಾನ ಪ್ರವೇಶಿಸಲು ಆಗಮಿಸುವ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ. ಬದಲಿಗೆ ಮಹಿಳಾ ಭಕ್ತರಿಗೆ ಶಬರಿಮಲೆಯಲ್ಲಿ ನಡೆದುಕೊಂಡು ಬಂದ ಆಚರಣೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ. ಆ ಮೂಲಕ ಮಹಿಳೆಯರನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆ ಹಿಡಿಯಲಾಗುತ್ತಿದೆ.












Click it and Unblock the Notifications