ಅಯ್ಯಪ್ಪನ ದರ್ಶನ ಮಾಡದೆ ಹಿಂದಿರುಗಲ್ಲ : ಇಬ್ಬರು ಮಹಿಳೆಯರ ಸವಾಲು
ತಿರುವನಂತಪುರಂ, ಡಿಸೆಂಬರ್ 24 : ನಮ್ಮ ಮೇಲೆ ಎಂತಹ ಹಲ್ಲೆಗಳಾದರೂ ತಾವು ಅಯ್ಯಪ್ಪ ಸ್ವಾಮಿಯ ದರುಶನ ಮಾಡದೆ ಹಿಂದಿರುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಐವತ್ತು ವರ್ಷ ಕೆಳಗಿನ ಇಬ್ಬರು ಮಹಿಳೆಯರು ಸವಾಲು ಹಾಕಿದ್ದಾರೆ.
ಅವರಿಬ್ಬರು ಪೊಲೀಸ್ ಬಿಗಿಭದ್ರತೆಯಲ್ಲಿ ಶಬರಿಲೆ ದೇವಸ್ಥಾನಕ್ಕೆ ಚಾರಣ ಮಾಡುತ್ತಿದ್ದು, ದೇಗುಲದಿಂದ ಕೇಲವೇ ಕಿ.ಮೀ. ದೂರದಲ್ಲಿದ್ದಾರೆ. ಆದರೆ, ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಪೊಲೀಸರ ಅವಶ್ಯಕತೆಯಿದೆ ಎಂದು ಕೋರಲಾಗಿದೆ.
ಆ ಇಬ್ಬರಲ್ಲಿ ಒಬ್ಬರಾಗಿರುವ ಬಿಂದು ಎನ್ನುವವರು ತಾವು ಯಾವುದೇ ಕಾರಣಕ್ಕೂ ಹಿಂತಿರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕೋಳಿಕ್ಕೋಡ್ ನಲ್ಲಿರುವ ಅವರ ಮನೆಯ ಎದಿರು ಹಲವು ಪ್ರತಿಭಟನಾಕಾರರು ಬಿಂದು ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಬಿಂದು ಅವರ ಜೊತೆ ಕೋಳಿಕ್ಕೋಡ್ ನ ದುರ್ಗಾ ಎಂಬುವವರು ಕೂಡ ಯಾತ್ರೆ ಕೈಗೊಂಡಿದ್ದಾರೆ.

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾವುದೇ ವಯಸ್ಸಿನ ಮಹಿಳೆ ಅರ್ಹಳು ಎಂದು ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿರುವುದರಿಂದ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವುದು ಕೇರಳ ಸರಕಾರಕ್ಕೆ ಭಾರೀ ಸವಾಲಿನದಾಗಿದೆ. ಏಕೆಂದರೆ, ಮಹಿಳೆಯರು ಪ್ರವೇಶಿಸಲು ಯತ್ನಿಸಿದಾಗಲೆಲ್ಲ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ಭಾನುವಾರ ಕೂಡ ಹನ್ನೊಂದು ಮಹಿಳೆಯರು ಶಬರಿಲೆಗೆ ಹೋಗಲು, ಪಂಪಾದಿಂದ 5 ಕಿ.ಮೀ. ಚಾರಣ ಮಾಡಲು ಅಣಿಯಾಗಿದ್ದರು. ಆದರೆ, ಪ್ರತಿಭಟನೆಯನ್ನು ಪೊಲೀಸರಿಂದ ಹತ್ತಿಕ್ಕಲು ಸಾಧ್ಯವಾಗದ ಕಾರಣ ಅವರೆಲ್ಲರನ್ನು ಪಂಪಾ ಬೇಸ್ ಕ್ಯಾಂಪ್ ನಿಂದಲೇ ವಾಪಸ್ ಕಳುಹಿಸಲಾಯಿತು. ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಅನಿವಾರ್ಯವಾಗಿ ಅವರು ವಾಪಸ್ ಮರಳಬೇಕಾಯಿತು.
ಮಕರ ಸಂಕ್ರಾಂತಿಗೆಂದು ಡಿಸೆಂಬರ್ 30ರಿಂದಲೇ ಮತ್ತೆ ತೆರೆಯಲಿರುವುದರಿಂದ 40ಕ್ಕೂ ಹೆಚ್ಚು ಮಹಿಳೆಯರು ಶಬರಿಮಲೆಗೆ ಪ್ರವಾಸ ಕೈಗೊಂಡು ದೇಗುಲ ಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಆದರೆ, ಕೇರಳ ಪೊಲೀಸರು ನಕಲಿ ಭಕ್ತೆಯರಿಗೆ ಅನವಶ್ಯಕವಾಗಿ ಭದ್ರತೆ ನೀಡಿ ದೇಗುಲಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.












Click it and Unblock the Notifications