ಶಬರಿಮಲೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಉಚಿತ ಊಟವಿಲ್ಲ
ತಿರುವನಂತಪುರಂ, ನವೆಂಬರ್.18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಸೇವೆಗೆ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಈ ಬಾರಿ ಉಚಿತವಾಗಿ ಉಪಹಾರ ಮತ್ತು ಊಟವನ್ನು ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ದೇವಸ್ವಂ ಆಡಳಿತ ಮಂಡಳಿಯು ಯಾವುದೇ ರೀತಿ ಸಬ್ಸಿಡಿ ನೀಡಿಲ್ಲವಾದ್ದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಊಟ ಮತ್ತು ಉಪಹಾರದ ಹಣವನ್ನು ಪೊಲೀಸ್ ಸಿಬ್ಬಂದಿಯಿಂದಲೇ ಪಡೆಯಲಾಗುತ್ತಿದೆ.
ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಉಚಿತ ಆಹಾರ ಒದಗಿಸುವಲ್ಲಿ ಸರ್ಕಾರವೇ ಸಬ್ಸಿಡಿ ನೀಡುತ್ತಿಲ್ಲ. ಇದನ್ನು ಮುಚ್ಚಿಹಾಕುವುದಕ್ಕಾಗಿ ದೇವಸ್ವಂ ಆಡಳಿತ ಮಂಡಳಿ ವಿರುದ್ಧ ವೃಧಾ ಆರೋಪ ಮಾಡಲಾಗುತ್ತಿದೆ ಎಂದು ಮಂಡಳಿ ಹೇಳುತ್ತಿದೆ.

ಆಡಳಿತ ಮಂಡಳ ಆದಾಯಕ್ಕೆ ಭಾರಿ ಹೊಡೆತ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಶಬರಿಮಲೆ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ನಿಗದಿಗೊಳಿಸಲಾಗಿದೆ. ಇದರಿಂದಾಗಿ ದೇವಸ್ಥಾನದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ ವರ್ಷ ಈ ಅವಧಿಗೆ 80,000 ಯಾತ್ರಾರ್ಥಿಗಳು ಅಯ್ಯಪ್ಪಸ್ವಾಮಿ ಸನ್ನಿಧಿಗೆ ಭೇಟಿ ನೀಡಿದ್ದು, 263 ಕೋಟಿಗೂ ಅಧಿಕ ಮೊತ್ತದ ಆದಾಯ ಬಂದಿತ್ತು. ಈ ಹಿನ್ನೆಲೆ ದಿನಕ್ಕೆ ಕೇವಲ 1000 ಯಾತ್ರಾರ್ಥಿಗಳು ಮತ್ತು ರಜೆ ದಿನಗಳಲ್ಲಿ 2,000 ಯಾತ್ರಾರ್ಥಿಗಳು ಶಬರಿಮಲೆಗೆ ತೆರಳುವುದಕ್ಕೆ ಅವಕಾಶ ನೀಡಲಾಗಿದೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಆಡಳಿತ ಮಂಡಳಿಯು ಮನವಿ ಮಾಡಿದ್ದು, ಆ ಮೂಲಕವಾದರೂ ನಷ್ಟವನ್ನು ಕೊಂಚ ಮಟ್ಟಿಗೆ ಸರಿದೂಗಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ.












Click it and Unblock the Notifications