ಶಬರಿಮಲೆ ದರ್ಶನ: ಭಕ್ತರ ಮಿತಿ ಹೆಚ್ಚಿಸುವ ಸಾಧ್ಯತೆ
ತಿರುವನಂತಪುರಂ, ನವೆಂಬರ್ 18: ಕೊರೊನಾ ವೈರಸ್ ಭೀತಿಯ ನಡುವೆಯೇ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ತೆರಳುವ ವಾರ್ಷಿಕ ಯಾತ್ರೆಯ ಅವಧಿ ಶುರುವಾಗಿದ್ದು, ಅಯ್ಯಪ್ಪನ ದರ್ಶನಕ್ಕೆ ವಿಧಿಸಲಾಗಿರುವ ದೈನಂದಿನ ಯಾತ್ರಿಕರ ಪ್ರವೇಶದ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಯಾತ್ರಿಕರ ಸಂಖ್ಯೆಯ ಮಿತಿಯನ್ನು ಹೆಚ್ಚಿಸುವ ಸಂಬಂಧ ಟ್ರಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ಕೇರಳ ಸರ್ಕಾರಕ್ಕೆ ಶಿಫಾರಸು ರವಾನಿಸಿದೆ. ಇನ್ನು ಒಂದೆರಡು ವಾರಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬರುವ ನಿರೀಕ್ಷೆಯಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲ ಸಂಸ್ಥೆಗಳ ಅಭಿಪ್ರಾಯ ಪಡೆದು ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಕೋವಿಡ್ 19 ಪರಿಸ್ಥಿತಿಯ ಕಾರಣದಿಂದ ವಾರದ ದಿನಗಳಲ್ಲಿ ದೈನಂದಿನ ಯಾತ್ರಿಕರ ಗರಿಷ್ಠ ಮಿತಿಯನ್ನು 1,000 ಮತ್ತು ರಜಾ ದಿನಗಳಲ್ಲಿ 2,000ಕ್ಕೆ ನಿಗದಿಗೊಳಿಸಲಾಗಿದೆ. ದೈನಂದಿನ ಮಿತಿಯಲ್ಲಿ ಕೊಂಚ ಸಡಿಲಿಕೆ ಮಾಡಿ ಇನ್ನಷ್ಟು ಭಕ್ತರಿಗೆ ಅವಕಾಶ ನೀಡಿದರೆ ಟಿಡಿಬಿಯ ಆದಾಯ ಕುಸಿತದಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಕೋವಿಡ್ 19 ಸೋಂಕು ಹೆಚ್ಚಾಗದಂತೆ ತಡೆಯಲು ನಿಲಕ್ಕಲ್ನಲ್ಲಿ ಪರೀಕ್ಷಾ ಕೇಂದ್ರಗಳು, ಸನ್ನಿಧಾನದಲ್ಲಿ ಸ್ಯಾನಿಟೈಸೇಷನ್ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ಅವಧಿಯಲ್ಲಿ ಒಂದು ದಿನಕ್ಕೆ 80,000ದವರೆಗೂ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದರು. ಕಳೆದ ವರ್ಷದ ಅವಧಿಯಲ್ಲಿಯೇ 263 ಕೋಟಿ ರೂ ಆದಾಯ ಬಂದಿತ್ತು. ಆದರೆ ಈ ಬಾರಿ ಅನೇಕ ನಿರ್ಬಂಧಗಳಿರುವುದರಿಂದ ವ್ಯಾಪಾರಿಗಳು ಅಂಗಡಿಗಳನ್ನು ಹಾಕುವ ಟೆಂಡರ್ನಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ದೇವಾಲಯದ ಆದಾಯ ಭಾರಿ ಕುಸಿತವಾಗುವ ಕಳವಳ ವ್ಯಕ್ತವಾಗಿದೆ.












Click it and Unblock the Notifications