ಶಬರಿಮಲೆ ಪೂಜೆ ಪುನರಾರಂಭ: ಮುಖ್ಯ ಅರ್ಚಕ ಕ್ವಾರೆಂಟೈನ್
ತಿರುವನಂತಪುರಂ, ಡಿಸೆಂಬರ್ 30: ಶಬರಿಮಲೆ ಪವಿತ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಉತ್ಸವದ ಎರಡನೆಯ ಅವಧಿಯ ಪೂಜಾ ವಿಧಾನಗಳು ಬುಧವಾರ ಆರಂಭವಾಗಿದೆ. ಕೋವಿಡ್ ಪಾಸಿಟಿವ್ ಪತ್ತೆಯಾದ ಮೂವರು ವ್ಯಕ್ತಿಗಳ ಜತೆಗೆ ದೇವಸ್ಥಾನದ ಮುಖ್ಯ ಅರ್ಚಕ ಸಂಪರ್ಕಕ್ಕೆ ಬಂದಿರುವುದು ಆತಂಕ ಮೂಡಿಸಿದೆ. ಈ ನಡುವೆಯೇ ಮಕರವಿಳಕ್ಕು ಹಬ್ಬದ ಸಂಪ್ರದಾಯಗಳು ಸಂಜೆ ಶುರುವಾಗಿವೆ.
ಬುಧವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿದ್ದು, ಬುಕಿಂಗ್ ಪೋರ್ಟಲ್ ಮತ್ತೆ ಕಾರ್ಯಾರಂಭ ಮಾಡಿದೆ. ಗುರುವಾರ ಬೆಳಗಿನಿಂದ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಟ್ರಾವಂಕೋರ್ ದೇವಸ್ವಂ ಮಂಡಳಿ ತಿಳಿಸಿದೆ.
ಮಕರವಿಳಕ್ಕು ಹಬ್ಬವು ಜನವರಿ 14ರಂದು ನಡೆಯಲಿದ್ದು, ಅಂದು ವೈಭವೋಪೇತ ಪೂಜೆ ಆಚರಣೆಗಳು ನಡೆಯಲಿದೆ. ಜನವರಿ 20ರಿಂದ ದೇವಸ್ಥಾನದ ಬಾಗಿಲು ಮುಚ್ಚಲಿದೆ. ಮುಖ್ಯ ಅರ್ಚಕ ವಿ.ಕೆ. ಜಯರಾಜನ್ ಪೊಟ್ಟಿ ಅವರು ಮಂಗಳವಾರದಿಂದ ಸ್ವತಃ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

'ಅರ್ಚಕರೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ ಮೂವರು ವ್ಯಕ್ತಿಗಳಲ್ಲಿ ಕೋವಿಡ್ 19 ಪಾಸಿಟಿವ್ ಕಂಡುಬಂದಿದೆ. ಅವರು ಶಬರಿಮಲೆಯಲ್ಲಿಯೇ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ. ಪ್ರಸ್ತುತ ದೇವಸ್ಥಾನದ ದೈನಂದಿನ ಆಚರಣೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನದ ಪೂಜಾ ಕಾರ್ಯದ ಉಸ್ತುವಾರಿ ಪಡೆದುಕೊಂಡ ಒಂದು ವರ್ಷದ ಬಳಿಕವಷ್ಟೇ ಮುಖ್ಯ ಅರ್ಚಕರು ಪವಿತ್ರ ಬೆಟ್ಟದ ದೇವಾಲಯವನ್ನು ತೊರೆಯಬಹುದಾಗಿದೆ.












Click it and Unblock the Notifications