ಶಬರಿಮಲೆ: 61 ಪೊಲೀಸರಿಗೆ ಕೋವಿಡ್ ಪಾಸಿಟಿವ್
ತಿರುವನಂತಪುರಂ, ಡಿಸೆಂಬರ್ 12: ಶಬರಿಮಲೆಯ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ತೆರಳುವ ಭಕ್ತರ ಮಿತಿಯನ್ನು ಹೆಚ್ಚಿಸಿದ ಬೆನ್ನಲ್ಲೇ ಆಘಾತಕಾರಿ ಸುದ್ದಿ ಹೊರಬಂದಿದೆ. ಕೊರೊನಾ ವೈರಸ್ ಸೋಂಕಿನ ಭೀತಿಯ ಕಾರಣ ಅನೇಕ ಕಟ್ಟುನಿಟ್ಟಿನ ನಿಯಮಗಳ ಅಡಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಭಕ್ತರ ನಿಯಂತ್ರಣ ಹಾಗೂ ವ್ಯವಸ್ಥೆಯನ್ನು ಸಮಪರ್ಕವಾಗಿ ನಿರ್ವಹಿಸಲು ನಿಯೋಜಿಸಲಾಗಿರುವ ಮತ್ತಷ್ಟು ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶಬರಿಮಲೆ ಯಾತ್ರೆ ಅವಧಿ ಆರಂಭವಾದ ಸುಮಾರು 25 ದಿನಗಳಲ್ಲಿ ಇದುವರೆಗೂ 183 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಅವರಲ್ಲಿ ಶೇ 75ರಷ್ಟು ಮಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಯೇ ಇದ್ದಾರೆ.
ಶಬರಿಮಲೆ ಮಕರವಿಳಕ್ಕು 2020ರ ಕೊರೊನಾ ವೈರಸ್ ಸೋಂಕಿನ ಸ್ಥಿತಿಗತಿಯ ಕುರಿತಾಗಿ ಡಿ. 9ರಂದು ಅರೋಗ್ಯ ಇಲಾಖೆಗೆ ಸಲ್ಲಿಸಲಾದ ವರದಿಯಲ್ಲಿ ಕಳೆದ ಏಳು ದಿನಗಳಲ್ಲಿ 90 ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಶಬರಿಮಲೆಯಲ್ಲಿ ಇದುವರೆಗೂ 16,205 ಮಂದಿಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 13,632 ಮಂದಿ ಭಕ್ತರಿದ್ದಾರೆ. ಇವರಲ್ಲಿ ಪಾಸಿಟಿವ್ ಬಂದ ಭಕ್ತರ ಸಂಖ್ಯೆ 47. ಇನ್ನು 2,573 ಸಿಬ್ಬಂದಿಯಲ್ಲಿ 136 ಮಂದಿ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ.

ಪಂಬಾದಲ್ಲಿ 47, ಸನ್ನಿಧಾನಂನಲ್ಲಿ 11 ಮತ್ತು ನಿಳಕ್ಕಳ್ನಲ್ಲಿ ಮೂವರು ಸೇರಿದಂತೆ ಕರ್ತವ್ಯಕ್ಕೆ ನಿಯೋಜಿತರಾದ 61 ಪೊಲೀಸ್ ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಹಾಗೆಯೇ ದೇವಸ್ವಂ ಮಂಡಳಿಯ 58 ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ.
ಶಬರಿಮಲೆಯ ಸನ್ನಿಧಾನಕ್ಕೆ ತೆರಳುವ ಮಾರ್ಗದಲ್ಲಿ ಪರೀಕ್ಷೆಗಳನ್ನು ನಡೆಸುವುದು ಬಹಳ ಕಷ್ಟಕಾರಿ. ಪ್ರಸ್ತುತ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಈಗ ಪರಿಸ್ಥಿತಿ ಅಪಾಯಕಾರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುವ ಭೀತಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶಬರಿಮಲೆಯಲ್ಲಿ ಬೃಹತ್ ಗುಂಪುಗಳ ನಡುವೆ ಕೊರೊನಾ ವೈರಸ್ ಸೋಂಕು ಕಾಣಿಸುತ್ತಿದೆ. ಇದು ಹೊರಗಿನ ರಾಜ್ಯಗಳಿಂದ ಬರುವ ಭಕ್ತರಲ್ಲಿ ಅಲ್ಲ, ಕರ್ತವ್ಯದಲ್ಲಿರುವ ನಮ್ಮದೇ ಸ್ವಂತ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದು ತೀವ್ರ ಕಳವಳಕಾರಿ ಸಂಗತಿ ಎಂದು ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಜೋಸೆಫ್ ಚಾಕೋ ಹೇಳಿದ್ದಾರೆ.












Click it and Unblock the Notifications