ಮಲಯಾಳಿ 'ಚಾಯ'ಕ್ಕೆ ಮಾರು ಹೋದ ರಾಹುಲ್ ಗಾಂಧಿ
ವೈನಾಡ್, ಜೂನ್ 07: ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ತಮ್ಮ ಲೋಕಸಭಾ ಕ್ಷೇತ್ರ ವೈನಾಡಿಗೆ ಇಂದು ರಾಹುಲ್ ಗಾಂಧಿ ಆಗಮಿಸಿದ್ದಾರೆ. ಮೊದಲ ದಿನವೇ ತಮ್ಮ ಸರಳತೆಯಿಂದ ಕೇರಳಿಗರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ಕೇರಳಕ್ಕೆ ಮೂರು ದಿನಗಳ ಭೇಟಿಗೆ ಇಂದು ಆಗಮಿಸಿದ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ನಡೆಸಿದರು. ರೋಡ್ ಶೋ ನಡುವೆ ಮಲ್ಲಪುರಂ ಜಿಲ್ಲೆಯ ಚಕ್ಕೋಡು ಎಂಬಲ್ಲಿ ಸಣ್ಣ ಟೀ ಹೊಟೆಲ್ಗೆ ದಿಢೀರ್ನೆ ಭೇಟಿ ನೀಡಿ ಕೇರಳದ 'ಚಾಯ' ಕುಡಿದರು.
ಕೇರಳದ ಚಹದ ಜೊತೆಗೆ ಹಲವು ಸ್ಥಳೀಯ ಕುರುಕುಲು ತಿಂಡಿಗಳನ್ನೂ ಸೇವಿಸಿ ಖುಷಿಪಟ್ಟ ರಾಹುಲ್ ಗಾಂಧಿ ತಮ್ಮೊಡನೆ ಇದ್ದ ಇತರ ಕಾಂಗ್ರೆಸ್ ಮುಖಂಡರಿಗೂ ಚಹಾ, ತಿಂಡಿಗಳನ್ನು ಹಂಚಿದರು.
ರಾಹುಲ್ ಗಾಂಧಿ ಅವರ ಜೊತೆಗೆ ಕೆ.ಸಿ.ವೇಣುಗೋಪಾಲ್, ಮುಲ್ಲಪಲ್ಲಿ ರಾಮಚಂದ್ರನ್ ಹಾಗೂ ಇನ್ನೂ ಹಲವು ಮುಖಂಡರು ಇದ್ದರು.

ಈ ಹಿಂದೆಯೂ ಹೀಗೆ ಮಾಡಿದ್ದಾರೆ ರಾಹುಲ್
ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಹ ಹೀಗೆ ಸಣ್ಣ ಹೊಟೆಲ್ಗಳಿಗೆ, ಕಾರ್ಯಕರ್ತರ ಮನೆಗಳಿಗೆ ತೆರಳಿ ಸರಳವಾಗಿ ಅವರೊಂದಿಗೆ ಬೆರೆತು ಸ್ಥಳೀಯ ತಿಂಡಿಗಳನ್ನು ರುಚಿ ನೋಡಿದ್ದರು. ಕರ್ನಾಟಕದಲ್ಲಿ ಸಹ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಳ್ಳಾರಿ ಸಮೀಪದ ಗೂಡಂಗಡಿಗೆ ತೆರಳಿ ಸಣ್ಣ ಪ್ಲಾಸ್ಟಿಕ್ ಕಪ್ನಲ್ಲಿ ಚಹ ಸೇವಿಸಿದ್ದರು.

ರಾಹುಲ್ ಗೆ ಭರ್ಜರಿ ಸ್ವಾಗತ ನೀಡಿದ ಕೇರಳ
ಇಂದು ಕೇರಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿಗೆ ಭಾರಿ ಸ್ವಾಗತ ಸಿಕ್ಕಿತು, 'ನೀವು ಬೇಕು' (need you) ಅಥವಾ 'ನಿಮ್ಮ ಅವಶ್ಯಕತೆ ಇದೆ' ಎಂಬ ಫೋಸ್ಟರ್ಗಳು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದವು. ರಾಹುಲ್ ಡೋಡ್ ಶೋಗೆ ಭಾರಿ ಪ್ರಮಾಣದಲ್ಲಿ ಜನರು ಆಗಮಿಸಿದ್ದರು.

ವೈನಾಡಿನಿಂದ ಲೋಕಸಭೆ ಚುನಾವಣೆ ಗೆದ್ದಿರುವ ರಾಹುಲ್
ರಾಹುಲ್ ಗಾಂಧಿ ಅವರು ಈ ಬಾರಿ ಲೋಕಸಭೆ ಚುನಾವಣೆಯನ್ನು ಕೇರಳದ ವೈನಾಡು ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ರಾಹುಲ್ ಸೋತರು ಆದರೆ ವೈನಾಡಿನಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು.

ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದಾರೆ ರಾಹುಲ್
ಗೆದ್ದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ವೈನಾಡಿಗೆ ರಾಹುಲ್ ಗಾಂಧಿ ಅವರು ಆಗಮಿಸಿದ್ದು, ಇಂದೂ ಸೇರಿದಂತೆ ಮೂರು ದಿನಗಳ ಕಾಲ ಕೇರಳದಲ್ಲಿಯೇ ಇರಲಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ಗೆ ಉತ್ತಮ ಫಲಸು ಸಿಕ್ಕಿದ್ದು ಕೇರಳದಲ್ಲಿ ಮಾತ್ರ, ಹಾಗಾಗಿ ಕೇರಳ ಜನರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಹುಲ್ ಇದ್ದಾರೆ.












Click it and Unblock the Notifications