ಮಹಿಳಾ ಅಭ್ಯರ್ಥಿ ಕುರಿತಾದ ಕಮಲ್ ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಖಂಡನೆ
ವಯನಾಡ್, ಅಕ್ಟೋಬರ್ 20: ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು 'ಐಟಂ' ಎಂದು ಹೀಯಾಳಿಸಿದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಮಲ್ ನಾಥ್ ನನ್ನ ಪಕ್ಷದವರು ನಿಜ ಆದರೆ ಅವರು ಬಳಸಿದ ಭಾಷೆಯ ಮಾದರಿ ನನಗೆ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ. ಅದು ಯಾರೇ ಆಗಿದ್ದರೂ ನಾನು ಅದನ್ನು ಅನುಮೋದಿಸುವುದಿಲ್ಲ. ಇದು ಬಹಳ ದುರದೃಷ್ಟಕರ' ಎಂದರು.
ಆದರೆ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ ನಂತರವೂ ಕ್ಷಮಾಪಣೆ ಕೇಳಲು ಕಮಲ್ ನಾಥ್ ನಿರಾಕರಿಸಿದ್ದಾರೆ. 'ಅದು ರಾಹುಲ್ ಗಾಂಧಿ ಅವರ ಅಭಿಪ್ರಾಯ. ನಾನು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದೇನೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿರದೇ ಇದ್ದಾಗ ನಾನೇಕೆ ಕ್ಷಮೆ ಕೇಳಬೇಕು? ಯಾರಿಗಾದರೂ ಅವಮಾನವಾಗಿದ್ದರೆ, ನಾನು ಈಗಾಗಲೇ ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ' ಎಂದಿದ್ದಾರೆ.

'ನಾನು ಅಗೌರವ ತೋರುವಂತಹದ್ದನ್ನು ಏನನ್ನೂ ಹೇಳಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಇದು ಅಗೌರವಯುತವಾದುದು ಎಂದು ಯಾರಿಗಾದರೂ ಅನಿಸಿದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಅವರು ಸೋಮವಾರ ಹೇಳಿದ್ದರು.
ಮೋದಿ ಮಾತನಾಡುತ್ತಾರೆಯೇ?:
ಮಂಗಳವಾರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಚೀನೀಯರು ನಮ್ಮ ದೇಶ ತೊರೆಯುತ್ತಾರೆಯೇ ಎಂದು ಮೋದಿಯಿಂದ ತಿಳಿಯುವುದನ್ನು ಬಯಸಿದ್ದೇನೆ. ಈ ರೀತಿ ಮೌನವಾಗಿರುವ ಜಗತ್ತಿನ ಬೇರೆ ಯಾವ ದೇಶವೂ ಇಲ್ಲ ಎನಿಸುತ್ತದೆ. ಪ್ರಧಾನಿ ಇದರ ಕುರಿತು ಮಾತನಾಡುವುದನ್ನು ಬಯಸುತ್ತೇನೆ. ಆದರೆ ನಾನು ನಿಮಗೆ ಖಚಿತವಾಗಿ ಹೇಳುತ್ತೇನೆ, ಅವರ ಚೀನಾ ಬಗ್ಗೆ ಒಂದೂ ಪದ ಬಳಸುವುದಿಲ್ಲ' ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications