ಯೋಧನ ಪಾರ್ಥಿವ ಶರೀರದ ಮುಂದೆ ಸೆಲ್ಫಿ ತೆಗೆದುಕೊಂಡ ಕೇಂದ್ರ ಸಚಿವ!
Recommended Video

ತಿರುವನಂತಪುರಂ, ಫೆಬ್ರವರಿ 19: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಸೈನಿಕನ ಪಾರ್ಥಿವ ಶರೀರ ಇರಿಸಿದ್ದ ಪೆಟ್ಟಿಗೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿರುವ ಕೇಂದ್ರ ಸಚಿವ ಅಲ್ಫೊನ್ಸ್ ಕಣ್ಣನ್ತನಮ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಗುರುವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ ಸೈನಿಕ ವಸಂತ್ ಕುಮಾರ್ ವಿವಿ ಅವರ ಪಾರ್ಥಿವ ಶರೀರವನ್ನು ಅವರ ತವರೂರು ಕೇರಳದ ಕೊಯಿಕ್ಕೋಡ್ಗೆ ತರಲಾಗಿತ್ತು. ಕೇರಳದವರೇ ಆದ ಅಲ್ಫೊನ್ಸ್, ಹುತಾತ್ಮ ಸೈನಿಕನಿಗೆ ಅಂತಿಮ ನಮನ ಸಲ್ಲಿಸಲು ತೆರಳಿದ್ದರು. ಆಗ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಸೆಲ್ಫಿ ತೆಗೆದುಕೊಳ್ಳಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಬೇರೆ ಯಾರೋ ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ ಎಂದು ವಾದಿಸಿದ್ದಾರೆ.
ಅಂತಿಮ ನಮನ ಸಲ್ಲಿಸುವ ಸಂದರ್ಭದ ಚಿತ್ರಗಳನ್ನು ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಅವುಗಳಿಗೆ ವಿಭಿನ್ನ ಚಿತ್ರಶೀರ್ಷಿಕೆಗಳನ್ನು ನೀಡಿದ್ದರು. ಅದರಲ್ಲಿ ಒಂದು ಚಿತ್ರ ಅವರ ತ್ರಿವರ್ಣ ಧ್ವಜ ಹೊರಿಸಿದ ಸೈನಿಕನ ಪಾರ್ಥಿವ ಶರೀರದ ಮುಂದೆ ನಿಂತು ಕ್ಯಾಮೆರಾವನ್ನು ನೋಡುತ್ತಿರುವಂತಿದೆ.

'ಗುಡ್ ಬೈ ಹುತಾತ್ಮ ವಸಂತಕುಮಾರ್. ನಾವೆಲ್ಲರೂ ಜೀವಂತವಾಗಿರುವುದು ನಿಮ್ಮಿಂದ' ಎಂದು ಟ್ವಿಟ್ಟರ್ನಲ್ಲಿ ಅವರು ಬರೆದಿದ್ದಾರೆ.
'ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಧೈರ್ಯಶಾಲಿ ಹೋರಾಟಗಾರ ವಿವಿ ವಸಂತಕುಮಾರ್ ಅವರ ಅಂತ್ಯಸಂಸ್ಕಾರ ಅವರ ಮನೆಯಲ್ಲಿ ನಡೆಯಿತು. ವಸಂತ್ ಕುಮಾರ್ ಅವರಂತಹ ಧೈರ್ಯಶಾಲಿ ಹೋರಾಟಗಾರರ ತ್ಯಾಗದಿಂದಾಗಿ ನಾವು ಇಲ್ಲಿ ಸುರಕ್ಷಿತ ಜೀವನ ನಡೆಸುತ್ತಿದ್ದೇವೆ' ಎಂದು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಲ್ಫೊನ್ಸೊ ಅವರ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ನಮ್ಮ ಹುತಾತ್ಮ ಸೈನಿಕರ ಪಾರ್ಥಿವ ಶರೀರ ಮುಂದೆ ಸೆಲ್ಫಿ ತೆಗೆದುಕೊಳ್ಳಲು ನಾಚಿಕೆಯಾಗುವುದಿಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.
'ನೀವು ಸೆಲ್ಫಿಗಾಗಿ ಒಳ್ಳೆಯ ಕ್ಯಾಮೆರಾ ಬಳಸುವುದು ಉತ್ತಮ. ಈ ಚಿತ್ರದಲ್ಲಿ ನಿಮ್ಮ ಮುಖದಲ್ಲಿನ ನಾಚಿಗೇಡುತನ ಕಾಣಿಸುತ್ತಿಲ್ಲ' ಎಂದು ಪರೇಶ್ ಎಂಬುವವರು ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಅಲ್ಫೊನ್ಸ್ ಫೋಟೊ ಕಾರಣದಿಂದ ವಿವಾದಕ್ಕೆ ಒಳಗಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ಚಂಗನಸ್ಸೇರಿ ಪರಿಹಾರ ಕೇಂದ್ರದಲ್ಲಿ ತಾವು ಚಾಪೆಯಲ್ಲಿ ಮಲಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಟೀಕೆ ವ್ಯಕ್ತವಾದ ಬಳಿಕ, ಈ ಕೆಲಸವನ್ನು ತಾವು ಮಾಡಿದ್ದಲ್ಲ. ತಮ್ಮ ಸಹಾಯಕ ಫೋಟೊ ಕ್ಲಿಕ್ ಮಾಡಿ ಪೋಸ್ಟ್ ಮಾಡಿದ್ದಾನೆ ಎಂದು ಜಾರಿಕೊಂಡಿದ್ದರು.












Click it and Unblock the Notifications