ಅಯ್ಯಪ್ಪ! ಕಣ್ಣೀರು ತುಂಬಿಕೊಂಡೇ ತನ್ನ ಕರ್ತವ್ಯ ನಿರ್ವಹಿಸಿದ ಆ ಪತ್ರಕರ್ತೆ
ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ ನಂತರ ಕೇರಳದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಆ ಘಟನೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಈ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡುವಾಗ ಹಾಗೂ ಫೋಟೋ ತೆಗೆಯುವಾಗ ಬುಧವಾರ ಪತ್ರಕರ್ತೆಯೊಬ್ಬರು ಕಣ್ಣೀರು ಹಾಕುತ್ತಲೇ ಕಾರ್ಯ ನಿರ್ವಹಿಸಿದ ದೃಶ್ಯಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೈರಲಿ ವಾಹಿನಿಯಲ್ಲಿ ಕ್ಯಾಮೆರಾಪರ್ಸನ್ ಆಗಿರುವ ಶಾಜಿಲಾ ಅಲಿ ಫಾತಿಮ್ ಮೇಲೆ ದಾಳಿಗಳಾಗಿದ್ದು, ಪ್ರತಿಭಟನಾನಿರತ ಬಿಜೆಪಿ ಸದಸ್ಯರು ಬಾಯಿಗೆ ಬಂದಂತೆ ಬಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಕಣ್ಣೀರು ತುಂಬಿಕೊಂಡೇ ಶಾಜಿಲಾ ಫೋಟೋಗಳನ್ನು ಸೆರೆ ಹಿಡಿದು, ವಿಡಿಯೋ ಮಾಡಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಪ್ರತಿಭಟನೆ ದೃಶ್ಯಾವಳಿಗಳನ್ನು ದಾಖಲಿಸಿಕೊಂಡಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ಕರ್ಮ ಸಮಿತಿಯು ಪ್ರತಿಭಟನೆಗೆ ಹಾಗೂ ಬಂದ್ ಗೆ ಕರೆ ನೀಡಿತ್ತು. ಇನ್ನು ಪತ್ರಕರ್ತೆ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಗುರುವಾರ ರಾಜ್ಯವ್ಯಾಪಿಯಾಗಿ ಹಲವಾರು ಪತ್ರಕರ್ತರು ತಮ್ಮ ಪ್ರತಿಭಟನೆ ದಾಖಲಿಸುವ ಸಲುವಾಗಿ ಮೆರವಣಿಗೆ ನಡೆಸಿದರು. ತ್ರಿಶೂರ್ ನಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಎಸ್ ಡಿಪಿಐ ಸದಸ್ಯರು ಇರಿದಿದ್ದಾರೆ.
ಸಿಪಿಎಂ ಕಾರ್ಯಕರ್ತರು ಪಥನಂತಿಟ್ಟದಲ್ಲಿ ಕಲ್ಲುತೂರಾಟ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಐವತ್ತೈದು ವರ್ಷದ ವ್ಯಕ್ತಿಯೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.












Click it and Unblock the Notifications