ಅಚ್ಚರಿಯ ಬೆಳವಣಿಗೆ, ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕೆ ರಾಜಶೇಖರನ್ ರಾಜೀನಾಮೆ
ತಿರುವನಂತಪುರಂ, ಮಾರ್ಚ್ 08: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಿಜೋರಾಂನ ರಾಜ್ಯಪಾಲ ಹುದ್ದೆಗೆ ಕೆ ರಾಜಶೇಖರನ್ ಅವರು ಶುಕ್ರವಾರದಂದು ರಾಜೀನಾಮೆ ನೀಡಿದ್ದಾರೆ.
ಈ ಮೂಲಕ ಈ ಬಾರಿಯ ಲೋಕಸಭೆ ಚುನಾವಣೆ 2019ರಲ್ಲಿ ತಿರುವನಂತಪುರಂ ಕ್ಷೇತ್ರದಿಂದ ರಾಜಶೇಖರನ್ ಸ್ಪರ್ಧೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಪುಷ್ಟಿ ನೀಡಿದ್ದಂತಾಗಿದೆ. ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಅವರು ಮಿಜೋರಾಂ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿ ಪಡೆದುಕೊಂಡಿದ್ದಾರೆ.
ರಾಜಕೀಯ ಎಂಟ್ರಿ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಸೂಪರ್ ಸ್ಟಾರ್!
ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಕೆ ರಾಜಶೇಖರನ್ ಅವರು ಸ್ಪರ್ಧಿಸಲಿದ್ದಾರೆ. ಹೀಗಾಗಿ, ಅವರು ಮಿಜೋರಾಂನ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯಿದೆ.
ತಿರುವನಂತಪುರಂನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಕಾಂಗ್ರೆಸ್ಸಿನಿಂದ ತರೂರ್, ಬಿಜೆಪಿಯಿಂದ ರಾಜಶೇಖರನ್ ಹಾಗೂ ಸಿಪಿಐನಿಂದ ಮಾಜಿ ಸಚಿವ ಸಿ ದಿವಾಕರನ್ ಅವರು ಕಣಕ್ಕಿಳಿಯುವ ಸಂಭವವಿದೆ.
ಮಿಜೋರಾಂನ ರಾಜ್ಯಪಾಲರಾಗಿ ಕೇವಲ 10 ತಿಂಗಳುಗಳ ಕಾಲ ಮಾತ್ರ ಕಾರ್ಯ ನಿರ್ವಹಿಸಿದ್ದಾರೆ. ಚೆಂಗನೂರು ಉಪ ಚುನಾವಣೆಗೂ ಕೇವಲ ದಿನಗಳಿದ್ದಾಗ ಇವರನ್ನು ಮಿಜೋರಾಂ ರಾಜ್ಯಪಾಲರಾಗಿ ನೇಮಿಸಲಾಯಿತು.
ನಟ ದಿಲೀಪ್ ಮಾಜಿ ಪತ್ನಿ, ಸೂಪರ್ ಸ್ಟಾರ್ ನಟಿ ಚುನಾವಣಾ ಕಣಕ್ಕೆ
2014ರಲ್ಲಿ 15,470 ಮತಗಳಿಂದ ತಿರುವನಂತಪುರಂ ಸೀಟು ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ತರೂರ್ ಅವರನ್ನು ಸೋಲಿಸಲು ಪಣ ತೊಟ್ಟಿದೆ. ಶಬರಿಮಲೆ ವಿವಾದದ ಲಾಭ ಪಡೆದು ಅಯ್ಯಪ್ಪ ಭಕ್ತ ರಾಜಶೇಖರನ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
1970ರಲ್ಲಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ರಾಜಶೇಖರನ್ ಅವರು 1982ರಲ್ಲಿ ನಿಲಕ್ಕಲ್ ಸಂಘರ್ಷದ ಮೂಲಕ ಪ್ರವರ್ಧಮಾನಕ್ಕೆ ಬಂದರು. 1987ರಲ್ಲಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಪೂರ್ಣಪ್ರಮಾಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರಾದರು. ರಾಜಶೇಖರನ್ ಅವರು 2016ರ ತನಕ ಕೇರಳ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್, ಕ್ಷೇತ್ರ ಸಂರಕ್ಷಣ ಸಮಿತಿ, ಬಾಲ ಸದನಂ ಹಾಗೂ ಏಕಲ್ ವಿದ್ಯಾಲಯ, ಹಿಂದೂ ಐಕ್ಯಾ ವೇದಿ ಹಾಗೂ ಸಬರಿಮಲ ಅಯ್ಯಪ್ಪ ಸೇವಾ ಸಮಾಜಂನ ಸಕ್ರಿಯ ಸದಸ್ಯರಾಗಿದ್ದಾರೆ.